ಕಾರವಾರ:
ಅಂಕೋಲಾ ತಾಲೂಕಿನ ಹೊನ್ನಳ್ಳಿ ಬಳಿ ಗಂಗಾವಳಿನದಿಗೆ ಕಿಂಡಿ ಆಣೆಕಟ್ಟು ನಿರ್ಮಿಸುವುದರಿಂದ ಸುಮಾರು ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ, ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ ಎಂದು ಗಂಗಾವಳಿ ನದಿ ಕೊಳ್ಳ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವಕರ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಅಂಕೋಲಾ ತಾಲೂಕಿನುದ್ದಕ್ಕೂ ಹರಿಯುವ ಗಂಗಾವಳಿ ನದಿಗೆ ಹೊನ್ನಳ್ಳಿ ಬಳಿ ಸುಮಾರು 150 ಕೋಟಿ ರು ವೆಚ್ಚದಲ್ಲಿ ಸುಮಾರು ಹನ್ನೊಂದುವರೆ ಮೀಟರ್ ಉದ್ದದ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ಆಮೂಲಕ ಕಾರವಾರ-ಅಂಕೋಲಾ ಭಾಗಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ಸಿದ್ದಪಡಿಸಿದೆ. ಅಲ್ಲದೆ ಈ ಯೋಜನೆಗೆ ಸರಕಾರ ಅನುಮೋದನೆ ಕೂಡ ನೀಡಿದ್ದು, ಇದೀಗ ಅಣೆಕಟ್ಟು ನಿರ್ಮಾಣ ಮಾಡಲು ಉದ್ದೇಶಿಸಿರುವ ಪ್ರದೇಶದ ಜನರು ತಮ್ಮ ಮನೆ ಜಮೀನುಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಹೇಳಿದರು.
ಗಂಗಾವಳಿ ನದಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಸುಮಾರು 50 ಎಕರೆ ಕೃಷಿ ಭೂಮಿ ಹಾಗೂ 15 ಎಕರೆ ಅರಣ್ಯ ನಾಶವಾಗುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಸುಮಾರು ಹನ್ನೊಂದುವರೆ ಮೀಟರ್ ಎತ್ತರದ ಅಣೆಕಟ್ಟು ನಿರ್ಮಾಣದಿಂದ ಐದು ಗ್ರಾಮ ಪಂಚಾಯಿತಿಗಳಾದ ಅಗಸೂರು, ಹಿಲ್ಲೂರು, ಅಚಿವೆ, ಸುಂಕಸಾಳ ಹಾಗೂ ಡೊಂಗ್ರಿ ಪಂಚಾಯಿತಿ ವ್ಯಾಪ್ತಿಯ ಕೃಷಿ ಭೂಮಿ ಹಾಗೂ 300 ಹೇಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ. ಅಲ್ಲದೆ ಮಳೆಗಾಲದಲ್ಲಿ ಪ್ರವಾಹ ಏರ್ಪಟ್ಟು ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ. ಆದರೆ ಇದನ್ನು ಪರಿಗಣಿಸದೆ ಕಾಟಾಚಾರದ ಲೆಕ್ಕ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿಯೊಂದು ಯೋಜನೆಗಳನ್ನು ಜಾರಿ ಮಾಡುವಾಗ ಸುಳ್ಳು ಅಂಕಿ ಅಂಶ ನೀಡಿ ಬಳಿಕ ಪ್ರದೇಶವನ್ನು ಅತಿಕ್ರಮಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ವಿವಿಧ ಯೋಜನೆಗಳಿಗೆ ಸುಮಾರು 40 ಸಾವಿರ ಹೇಕ್ಟೇರ್ ಅರಣ್ಯ ಹಾಗೂ ಇತರ ಪ್ರದೇಶವನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯ ಪರಿಸರದ ಭೌಗೋಳಿಕ ಧಾರಣ ಸಾಮಥ್ರ್ಯದ ಬಗೆಗೆ ಅಧ್ಯಯನ ನಡೆಸಿದ ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅವರು ತಮ್ಮ ವರದಿಯಲ್ಲಿ ಜಿಲ್ಲೆಯಲ್ಲಿ ನದಿ ಹಾಗೂ ಪರಿಸರಕ್ಕೆ ಹಾನಿಯಾಗುವ ಯೋಜನೆಗಳು ಜಾರಿಯಾದಲ್ಲಿ ಜಿಲ್ಲೆ ಅಪಾಯಕ್ಕೆ ಸಿಲುಕುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಇದಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ತಮ್ಮ ಸ್ವಂತ ಲಾಭಕ್ಕಾಗಿ ಈ ಅವೈಜ್ಞಾನಿಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈ ಹಿಂದೆ ಬೇಡ್ತಿ ಬ್ರೀಜ್ ಬಳಿ ಆಣೆಕಟ್ಟು ನಿರ್ಮಾಣ ಮಾಡಿ ಯಲ್ಲಾಪುರಕ್ಕೆ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದ್ದ ಯೋಜನೆ ಇದೀಗ ಸ್ಥಗೀತಗೊಂಡಿದ್ದು, ಯೋಜನೆಯಿಂದ ಮುಳುಗಡೆಗೊಂಡಿದ್ದ ನೂರಾರು ಗಿಡಮರಗಳು ನಾಶವಾಗಿರುವ ಕುರುಹುಗಳು ಇಂದಿಗೂ ಲಭ್ಯವಾಗುತ್ತಿದೆ ಎಂದು ಹೇಳಿದರು. ಗಂಗಾವಳಿ ನದಿಗೆ ಸಿಮೆಂಟ್ ಅಣೆಕಟ್ಟು ಕಟ್ಟಿ ಕೋಟ್ಯಾಂತರ ವ್ಯಯ ಮಾಡುವ ಬದಲು ಇನ್ನು ಕಡಿಮೆ ಖರ್ಚಿನಲ್ಲಿ ನಡೆಸಬಹುದಾದ ಕಾಳಿ ನದಿಯ ಕದ್ರಾ, ಕೊಡಸಳ್ಳಿ ಅಣಕಟ್ಟುಗಳಿಗೆ ಪೈಪ್ಲೈನ್ ಅಳವಡಿಸಿದಲ್ಲಿ ಹತ್ತಿರದಲ್ಲಿ ನೀರು ಪಡೆಯಬಹುದು. ಪ್ರಸ್ತುತ ಉದ್ದೇಶಿಸಿದ ಜಾಗದಲ್ಲಿ ಕೆರೆಯೊಂದನ್ನು ನಿರ್ಮಿಸಿ ನದಿ ನೀರು ಅದಕ್ಕೆ ಸೇರುವ ಹಾಗೆ ಮಾಡಿ ಆಮೂಲಕ ಕೆರೆ ನೀರನ್ನು ಬಳಸಿಕೊಳ್ಳಬಹುದು. ಕುಂದಾಪುರ ಬೈಂದೂರಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಪ್ಪು ನೀರನ್ನು ಸಂಸ್ಕರಿಸಿ ಸುಮಾರು 32 ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಮುಂದಾಗಿದ್ದು, ಅದೇ ರಿತಿ ಕ್ಷೇತ್ರದಲ್ಲಿಯೂ ಜಾರಿಗೊಳಸಬೇಕು. ಇದು ಸಾಧ್ಯವಾಗದಿದಲ್ಲಿ ಅಂಕೋಲಾದಿಂದ ಕಾರವಾರದ ವರೆಗೆ ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸಿ ಅದರಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕರು ಇಂತಹ ಅವೈಜ್ಞಾನಿಕ ಯೋಜನೆಯನ್ನು ಜಾರಿಗೆ ತರುವ ಮೊದಲು ಕ್ಷೇತ್ರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಮೊದಲು ಪ್ರಯತ್ನ ನಡೆಸಬೇಕು. ಅಲ್ಲದೆ ಯೋಜನೆಯನ್ನು ಕೂಡಲೇ ಬದಲಿಸಿ ಪರ್ಯಾಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮಿತಿಯಿಂದ ಉಗ್ರ ಹೋರಾಟ ನಡೆಸುವುದರ ಜತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ವೈದ್ಯ, ಲಕ್ಷ್ಮಣ ನಾಯ್ಕ, ಎಂ.ಎನ್ ಭಟ್, ರಾಘವೇಂದ್ರ ಗಾಂವಕರ್, ರಾಮು ಟಿ. ಭಟ್ ಇದ್ದರು.
****************
ಕುಡಿಯುವ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಆದರೆ ಆಣೆಕಟ್ಟು ನಿರ್ಮಾಣದಲ್ಲಿ ಈ ಭಾಗದ ಸಾಕಷ್ಟು ಭೂಮಿ ನಾಶವಾಗಲಿದೆ. ಕೂಡಲೇ ಯೋಜನೆ ಕೈಬಿಟ್ಟು ಪರ್ಯಾಯವಾಗಿ ನೀರನ್ನು ತೆಗೆದುಕೊಂಡು ಹೋಗುವುದರ ಯೋಚಿಸಬೇಕು.
– ಶಿವರಾಮ್ ಗಾಂವಕರ್, ಗಂಗಾವಳಿ ನದಿ ಕೊಳ್ಳ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ
Leave a Comment