ಕಾರವಾರ:
ಕರ್ನಾಟಕದ ಗಡಿಭಾಗವಾದ ಕಾರವಾರ ಗ್ರಾಮೀಣ ಭಾಗಗಳ ಮಕ್ಕಳನ್ನು ಗೋವಾ ಸರ್ಕಾರ ಸೆಳೆಯುತ್ತಿದೆ. ನಿತ್ಯ ಬೆಳಗಾದರೆ ಪರರಾಜ್ಯದಿಂದ ಬರುವ ವಾಹನಗಳು ಕನ್ನಡಿಗರ ಮಕ್ಕಳನ್ನು ಗೋವಾ ಶಿಕ್ಷಣ ಕಲಿಕೆಗೆ ಒಯ್ಯುತ್ತಿವೆ. ಹೀಗಾಗಿ ಕರ್ನಾಟಕದ ಗಡಿಯಲ್ಲಿ ಕನ್ನಡ ಕರಗುತ್ತಿದೆ.
ಗೋವಾದಲ್ಲಿ ಕಲಿತರೆ ಖಚಿತ ಉದ್ಯೋಗ ದೊರೆಯುತ್ತದೆ ಎಂಬ ನಂಬಿಕೆಯಿಂದ ಪಾಲಕರು ತಮ್ಮ ಮಕ್ಕಳನ್ನು ಗೋವಾ ಶಾಲೆಗೆ ಕಳುಹಿಸುತ್ತಿದ್ದಾರೆ.
ಕರ್ನಾಟಕ ಹಾಗೂ ಗೋವಾ ರಾಜ್ಯದ ಗಡಿಭಾಗವಾಗಿರುವ ಕಾರವಾರದಲ್ಲಿ ದಿನ ಕಳೆದಂತೆ ಕನ್ನಡದ ಕಂಪು ಕಳೆಗುಂದುತ್ತಿದೆ. ಇಲ್ಲಿ ಕನ್ನಡದ ಬದಲು ಕೊಂಕಣಿ ಆಡುಭಾಷೆಯಾಗಿ ಹೆಚ್ಚು ಪ್ರಚಲಿತದಲ್ಲಿದ್ದು, ಕನ್ನಡ ಬೋಧಿಸಬೇಕಿದ್ದ ಕನ್ನಡ ಶಾಲೆಗಳು ಕೂಡ ಮಕ್ಕಳ ಹಾಗೂ ಪಾಲಕರ ಆಂಗ್ಲ ವ್ಯಾಮೋಹಕ್ಕೊಳಗಾಗಿ ಮುಚ್ಚುತ್ತಿರುವುದು ಗಡಿಯಲ್ಲಿ ಕನ್ನಡವೇ ಮರೆಯಾಗುವ ಆತಂಕ ಎದುರಾಗಿದೆ.
ಕರ್ನಾಟಕದ ಕಾಶ್ಮಿರ ಎಂದೇ ಹೆಸರು ವಾಸಿಯಾಗಿರುವ ಕಾರವಾರ ಕರ್ನಾಟಕ ಹಾಗೂ ಗೋವಾ ಗಡಿಯನ್ನು ಪ್ರತ್ಯೇಕಿಸುವ ಪ್ರದೇಶ. ಇಲ್ಲಿನ ಮಾಜಾಳಿ, ದೇವಭಾಗ್, ಮುಡಗೇರಿ, ಅಸ್ನೋಟಿ, ಕಣಸಗಿರಿ
ಪ್ರದೇಶಗಳು ಗೋವಾ ಗಡಿಯನ್ನು ಪ್ರತ್ಯೇಕಿಸಿವೆ. ಇಷ್ಟಾದರೂ ಇಲ್ಲಿನ ಜನರ ಒಡನಾಟ ಮಾತ್ರ ಕಾರವಾರದಂತೆ ಗೋವಾದೊಟ್ಟಿಗೆ ಸಾಗಿದೆ. ಉದ್ಯೋಗ, ವ್ಯವಹಾರ, ಸಂಪರ್ಕ, ಶಿಕ್ಷಣ ಹೀಗೆ ಎರಡು ರಾಜ್ಯಗಳ ಜನರು ಪರಸ್ಪರ ಅವಲಂಬಿಸಿಕೊಂಡಿರುವುದು ಇದಕ್ಕೆ ಶಾಕ್ಷಿಯಾಗಿದೆ.
ಆದರೆ ರಾಜ್ಯದ ಗಡಿಭಾಗವಾದಲ್ಲಿ ಪ್ರಧಾನವಾಗಬೇಕಿದ್ದ ಕನ್ನಡ ಮಾತೃ ಭಾಷೆ ದಿನಕಳೆದಂತೆ ತನ್ನ ಕಂಪನ್ನು ಕಳೆದುಕೊಳ್ಳುತ್ತಿದೆ. ಇಲ್ಲಿ ಕನ್ನಡಕ್ಕಿಂತ ಕೊಂಕಣಿಯೇ ಪ್ರಧಾನವಾಗಿದ್ದು, ಗಡಿಯುದ್ದಕ್ಕೂ ಆಡುಭಾಷೆಯಾಗಿ ಹೆಚ್ಚು ಬಳಕೆಯಲ್ಲಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮನೆ, ಶಾಲೆ, ಕಚೇರಿ, ಮಾರುಕಟ್ಟೆ ಹೀಗೆ ಎಲ್ಲೆಂದರಲ್ಲಿ ಹೆಚ್ಚು ಕೊಂಕಣಿ ಮೂಲಕವೇ ಸಂವನ ಸಾಧ್ಯವಾಗುತ್ತಿದ್ದು, ಅದೇಷ್ಟೋ ಜನರಿಗೆ ಬರುವ ಕನ್ನಡವು ಸಂಪರ್ಕವಿಲ್ಲದೆ ಮರೆಯುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಈ ಹಿಂದೆ ಮಕ್ಕಳಿಗೆ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರು ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗಳಲ್ಲಿ ಕನ್ನಡ ಭಾಷೆಗಳಲ್ಲಿ ಅಭ್ಯಾಸ ಮಾಡುವುದರಿಂದ ಪ್ರತಿಯೊಬ್ಬರಿಗೂ ಕನ್ನಡ ಓದಲು, ಬರೆಯಲು, ವ್ಯವಹರಿಸಲು ಸಾಧ್ಯವಾಗುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಮಕ್ಕಳ ಹಾಗೂ ಪಾಲಕರ ಇಂಗ್ಲೀಷ್ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚತೊಡಗಿವೆ. ಕಾರವಾರದಲ್ಲಿ ಈಗಾಗಲೇ ಹಲವು ಸರಕಾರಿ ಕನ್ನಡ ಶಾಲೆಗಳು ಮಕ್ಕಳಿಲ್ಲದೆ ಬಾಗಿಲು ಹಾಕಿದ್ದು, ಡೊನೇಶನ್ ಹಾವಳಿ ನಡುವೆಯೂ ಖಾಸಗಿ ಶಾಲೆಗಳು ತುಂಬತೊಡಗಿವೆ. ಇಂತಹ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನಗಳೆಲ್ಲ ಇಂಗ್ಲೀಷ್ ನಲ್ಲಿಯೇ ನಡೆಯುತ್ತಿದೆ. ಇತ್ತ ಮನೆಗಳಲ್ಲಿಯೂ ಪಾಲಕರು ಮಕ್ಕಳೊಂದಿಗೆ ಕೊಂಕಣಿಯೊಂದಿಗೆ ಹೆಚ್ಚಾಗಿ ಸಂವಹನ ನಡೆಸುತ್ತಾರೆ. ಈ ನಡುವೇ ಮಕ್ಕಳಿಗೆ ಕನ್ನಡ ಜ್ಞಾನವೇ ದೊರೆಯದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನರು ತಮ್ಮ ಪರಿಚಯಸ್ತರು ಇಲ್ಲವೇ ಅಪರಿಚಿತರು ಯಾರೇ ಸಿಕ್ಕರೂ ಕೂಡ ಮೊದಲು ಮಾತನಾಡಿಸುವುದು ಕೊಂಕಣಿಯಲ್ಲಿ. ಕನ್ನಡ ಗೊತ್ತಿದ್ದರು ಕೂಡ ಹೆಚ್ಚಿನವರು ನಿರಾಶಕ್ತಿ ವಹಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿರುವ ಕೈಗಾ, ಸೀಬರ್ಡ್ ಯೋಜನೆಯಲ್ಲಿ ಉದ್ಯೋಗಗಳಾಗಿ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವರಿಗೆ ಇಲ್ಲಿನ ಜನರಿ ಹಿಂದಿ ಇಲ್ಲವೇ ಕೊಂಕಣಿ ಭಾಷೆಯಲ್ಲಿ ಸಂವನ ನಡೆಸುವುದರಿಂದ ಅವರು ಕೂಡ ಕನ್ನಡ ಮಾತನಾಡಲು ಪ್ರಯತ್ನಿಸುತ್ತಿಲ್ಲ. ಈ ಎಲ್ಲ ಕಾರಣಗಳು ದಿನ ಕಳೆದಂತೆ ಕನ್ನಡದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎನ್ನುವ ಮಾತುಗಳು ಕನ್ನಡಾಭಿಮಾನಿಗಳಿಂದ ಕೇಳಿಬರುತ್ತಿದೆ.
ಇದರ ಜತೆಗೆ ಗಡಿಭಾಗವಾದ ಮಾಜಾಳಿ, ಅಸ್ನೋಟಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ದಿನಕಳೆದಂತೆ ಕನ್ನಡ ನಾಮಫಲಕಗಳು ಮಾಯವಾಗಿ ಮರಾಠಿ ಇಲ್ಲವೇ ಇಂಗ್ಲೀಷ್ ಫಲಕಗಳು ತೂಗಾಡುತ್ತಿವೆ. ಕೆಲ ಭಾಗಗಳಲ್ಲಿ ಕನ್ನಡ ನಾಮಫಲಕಗಳಿದ್ದರು ಅದರಲ್ಲಿ ಸಾಕಷ್ಟು ತಪ್ಪುಗಳು ಕಂಡು ಬರುತ್ತಿರುತ್ತಿದೆ. ಹೀಗೆ ಗಡಿಭಾಗದಲ್ಲಿ ಕಂಡು ಕಾಣದಂತೆ ಕನ್ನಡ ಮರೆಯಗುತ್ತಿದೆ. ಕೆಲವು ಭಾರಿ ಕೊಂಕಣಿ ಜನರಿರುವ ಕಾರಣ ಕೊಂಕಣಿ ಹೆಚ್ಚು ಬಳಕೆಯಲ್ಲಿದೆ ಎನ್ನಲಾಗುತ್ತಿದೆಯಾದರು ಮಾತೃ ಭಾಷೆ ಬಳಕೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.
Leave a Comment