ಹೊನ್ನಾವರ:
ನುರಿತ ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಅವರು ತಾಲೂಕಿನ ಹೊಸಪಟ್ಟಣದಲ್ಲಿ ಮೂರು ವರ್ಷದ ಮಗುವಿನಿಂದ ಹಿಡಿದು ಹದಿನೈದು ವರ್ಷದ ಬಾಲಕ ಬಾಲಕಿಯರಿಗೆ ಉಚಿತವಾಗಿ ಯಕ್ಷಗಾನ ತರಬೇತಿ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಮಾತನಾಡಿ, `ಚಂದ್ರಹಾಸ ಗೌಡ ಅವರು ತಾವು ಅರಗಿಸಿಕೊಂಡ ಯಕ್ಷಗಾನ ಕಲೆಯನ್ನು ತಮ್ಮೂರಿನ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಕೂಗಿಗೆ ಧ್ವನಿಯಾಗಿ ಆ ನಿಟ್ಟಿನಲ್ಲಿ ಅರ್ಥಪೂರ್ಣ ಹೆಜ್ಜೆಯನ್ನಿಟ್ಟಿರುವುದು ಗಮನಾರ್ಹವಾಗಿದೆ. ಮಕ್ಕಳ ಶಾಲೆಯ ರಜಾದಿನಗಳಲ್ಲಿ ಎರಡರಿಂದ ಮೂರು ಘಂಟೆಗಳವರೆಗೆ ಭೇಟಿ ನೀಡಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಸದೃಢತೆಯೊಂದಿಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಅವರ ಕಾರ್ಯವನ್ನು ಶ್ಲಾಘಿಸಿದ ಅವರು ಸಂಘಟಕರಿಗೆ ಧನಸಹಾಯ ನೀಡಿದರು.
ಚಂದ್ರಹಾಸ ಗೌಡ ಅವರು ಓರ್ವ ವೃತ್ತಿಪರ ಯಕ್ಷಗಾನ ಕಲಾವಿದರಾದ್ದರಿಂದ ನವೆಂಬರ ತಿಂಗಳ ಮಧ್ಯಭಾಗದಲ್ಲಿ ಮೇಳಗಳು ಪ್ರಾರಂಭವಾಗುವುದರಿಂದ ಅವರ ಅನುಪಸ್ಥಿತಿಯಲ್ಲಿ ಮಕ್ಕಳಿಗೆ ತರಬೇತಿ ನೀಡಲು ಇನ್ನೋರ್ವ ನಿಪುಣ ಕಲಾವಿದರನ್ನು ನೇಮಿಸುವರು.
ಈ ಸಂದರ್ಭದಲ್ಲಿ ಮುಗ್ವಾ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಹನುಮಂತ ನಾಯ್ಕ, ಪ್ರಶಾಂತ ಗಾಂವಕರ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
Leave a Comment