ಕಾರವಾರ: ಒಂದಷ್ಟು ಹುಡುಗರು… ಇನ್ನೊಂದಿಷ್ಟು ಹುಡುಗಿಯರು… ಒಬ್ಬರಾದ ಮೇಲೆ ಒಬ್ಬರಂತೆ ಪಾಲಕರೊಡನೆ ವೇದಿಕೆಗೆ ಬಂದು ತಮ್ಮನ್ನು ತಾವೇ ಪರಿಚಯಿಸಿಕೊಳ್ಳುವರು. ಹುಡುಗ ಹಾಗೂ ಹುಡುಗಿ ಹಾಗೂ ಪಾಲಕರ ಮಾತುಕಥೆ ನಂತರ ಬಾಳ ಸಂಗಾತಿಯನ್ನು ಆರಿಸುವರು.
ಕಳೆದ ಏಳು ವರ್ಷಗಳಿಂದ ಸದಾಶಿವಗಡದ ಸದಿಚ್ಚಾ ಭವನದಲ್ಲಿ ಕೊಂಕಣ ಮರಾಠಾ ಸಮುದಾಯದವರು ಇಂತಹೊಂದು ವಧು ವರರ ಮೇಳವನ್ನು ಆಯೋಜಿಸುತ್ತ ಬಂದಿದ್ದಾರೆ. ಯುವಕ ಯುವತಿಯರ ಗುಣ-ನಡತೆ, ವಿದ್ಯಾಬ್ಯಾಸ, ಉದ್ಯೋಗ, ನಿರೀಕ್ಷೆಗಳಿಗೆ ತಕ್ಕಂತೆ ಜೀವನ ಸಂಗಾತಿಯನ್ನು ಆರಿಸಿಕೊಳ್ಳಲು ಕೊಂಕಣ ಮರಾಠ ಸಮಾಜವೂ ಇಂತಹದೊಂದು ಸಮಾವೇಶ ನಡೆಸುತ್ತಿದೆ. ಭಾನುವಾರ ನಡೆದ ಮೇಳದಲ್ಲಿ ಪೂಣಾ, ಗೋವಾ, ಬೆಳಗಾವಿ, ಧಾರವಾಡ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಯುವಕ-ಯುವತಿಯರು ಭಾಗವಹಿಸಿದ್ದರು. ಕಾರವಾರ ಮೂಲದ ಕೊಂಕಣ ಮರಾಠ ಸಮುದಾಯದವರು ಉದ್ಯೋಗದ ನಿಮಿತ್ತ ದೇಶದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಅನೇಕ ಉನ್ನತ ಹುದ್ದಯಲ್ಲಿರುವ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿಬರುತ್ತಿಲ್ಲ. ಸ್ವ ಸಮಾಜದ ವಧು-ವರರ ಕುರಿತು ಪಾಲಕರಿಗೂ ಮಾಹಿತಿಯಿಲ್ಲ. ಹೀಗಾಗಿ ಮುಂಬೈನ ಎಲ್.ಎಂ.ಪಿ ಗ್ರೂಪ್ನವರು ವಧು ವರರ ಸಮಾವೇಶ ನಡೆಸುವದರ ಮೂಲಕ ಅವರವರ ನಿರೀಕ್ಷೆಗೆ ತಕ್ಕಂತೆ ಕುಟುಂಬಗಳನ್ನು ಜೋಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಬಾರಿ ನಡೆಯಲಿರುವ ವಧು ವರರ ಮೇಳಕ್ಕೆ 270 ಮಂದಿ ಜೀವನ ಸಂಗಾತಿ ಆಯ್ಕೆಗಾಗಿ ನೊಂದಣಿ ಮಾಡಿಸಿದ್ದರು. ಅವರಲ್ಲಿ 150 ಮಂದಿ ಹಾಜರಾಗಿದ್ದು, 60 ಯುವತಿಯರು ಹಾಗೂ 90 ಯುವಕರು ತಮ್ಮನ್ನು ತಾವು ಪರಿಯಿಸಿಕೊಂಡರು. ಪಾಲಕರೊಂದಿಗೆ ವೇದಿಕೆಗೆ ಬರುವ ಆಕಾಂಕ್ಷಿಗಳು ತಮ್ಮ ವಯಸ್ಸು, ಉದ್ಯೋಗ, ಮನೆತನಗಳ ಕುರಿತು ಪರಿಯಿಸಿಕೊಂಡರು. ಪ್ರತಿ ಅಭ್ಯರ್ಥಿಗೂ ನೊಂದಣಿ ಸಂಖ್ಯೆ ನೀಡಲಾಗಿದ್ದು ಅದರ ಆಧಾರದಲ್ಲಿ ಸಂಘಟಕರನ್ನು ಸಂಪರ್ಕಿಸಿ ಅಭ್ಯರ್ಥಿಗಳ ಪೂರ್ತಿ ವಿವರವನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿತ್ತು. ಈಗಾಗಲೇ ವೈದ್ಯಕೀಯ ಶಿಬಿರ, ಕ್ರೀಡಾ ಶಿಬಿರ, ಉದ್ಯೋಗ ಮೇಳವನ್ನು ಆಯೋಜಿಸಿರುವ ಎಲ್.ಎಂ.ಪಿ ಗ್ರೂಪ್ 7 ವರ್ಷಗಳಿಂದ ವಧು-ವರರ ಮೇಳ ಆಯೋಜಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಟುವಟಿಕೆಗಳನ್ನು ನಡೆಸಲಾಗುವದು ಎಂದು ಸಂಘಟನೆ ಪ್ರಮುಖರಾದ ನಾರಾಯಣ ಸಾವಂತ್, ಉಮೇಶ ಸಾಳುಂಕೆ, ರಾಮದಾಸ ನಾಯ್ಕ, ಡಾ. ಅಭಯ ನಾಯ್ಕ ತಿಳಿಸಿದರು.
Leave a Comment