.ಹಳಿಯಾಳ ; ಕರಾವಳಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಕಬ್ಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವುದು ಹಾಗೂ ಅಂತಿಮ ದಿನದ ಆಕರ್ಷಣೆಗಾಗಿ ರಾಷ್ಟ್ರ ಮಟ್ಟದ ಖ್ಯಾತಿಯನ್ನು ಹೊಂದಿರುವ ಓರ್ವ ಆರ್ಕೆಷ್ಟ್ರಾ ಕಲಾವಿದರನ್ನು ಆಹ್ವಾನಿಸಿ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಸುವಂತೆ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರಾವಳಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿಯ ಹಳಿಯಾಳ ಕರಾವಳಿ ಉತ್ಸವವನ್ನು ಬರುವ ಡಿ 16 ಮತ್ತು 17 ರಂದು ಎರಡು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದ್ದು ಕರಾವಳಿ ಉತ್ಸವದ ಅಂಗವಾಗಿ ವಿವಿಧ ಕ್ರೀಡೆ, ಜಾನಪದ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಸಭೆಯಲ್ಲಿ ಕಾರ್ಯಕ್ರಮಗಳನ್ನು ಇಲ್ಲಿಯ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಪ್ರಾಯೋಜತ್ವ ವಹಿಸಲು ಮುಂದಾಯಿತು. ಹಳಿಯಾಳ ಸೇರಿದಂತೆ ಜೋಯಿಡಾದ ಕಲಾವಿದರನ್ನು ಆಹ್ವಾನಿಸಿ ಅವರಿಂದ ಕೆಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸೂಚಿಸಲಾಯಿತು. ಕಳೆದ ಬಾರಿಯ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿಯ ಸಾಂಸ್ಕ್ರತಿಕ ಮೆರಗನ್ನು ನೀಡುವುದರ ಜೊತೆಗೆ ಇತಿಹಾಸದ ನೆನಪನ್ನು ಮಾಡುವ ಉದ್ದೇಶದಿಂದ ಆಚರಣೆ ಮಾಡುತ್ತಾ ಬಂದಿದ್ದ ಕರಾವಳಿ ಉತ್ಸವ ಮತ್ತು ಕದಂಬ ಉತ್ಸವಗಳು ಸೇರಿದಂತೆ ಇನ್ನಿತರ ಉತ್ಸವಗಳನ್ನು ಕೈ ಬಿಡಲಾಗಿತ್ತು. ಆದರೆ ಕಾಂಗ್ರೇಸ್ ಸರಕಾರವು ಮತ್ತೇ ಆಡಳಿತಕ್ಕೆ ಬಂದ ತಕ್ಷಣ ಮತ್ತೇ ಈ ಉತ್ಸವಗಳಿಗೆ ಚಾಲನೆ ನೀಡುವುದರ ಮೂಲಕ ಅನುದಾನವನ್ನು ನೀಡಲಾಗಿದೆ ಎಂದು ಸೃಷ್ಟ ಪಡಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೋಗೆರ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ರಮೇಶ ನಾಯ್ಕ, ಎಸಿ ಶಿವಾನಂದ ಕರಾಳೆ, ಡಿಎಫ್ಓ ಎಸ್. ರಮೇಶ್, ದಾಂಡೇಲಿ ನಗರಸಭೆ ಅಧ್ಯಕ್ಷ ನಾರಾಯಣ ಸಾಳುಂಕೆ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ತಹಶೀಲದಾರ ವಿದ್ಯಾಧರ ಗುಳಗುಳಿ, ಡಿವೈಎಸ್ಪಿ ದಯಾನಂದ ಪವಾರ,ಸಿಪಿಐ ಸುಂದ್ರೇಶ ಹೊಳೆಣ್ಣವರ, ಜೋಯಿಡಾ ತಹಶೀಲದಾರ ಟಿ.ಸಿ.ಹಾದಿಮನಿ, ತಾಪಂ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ,ತಾಪಂ ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ವಿಆರ್ಡಿಎಮ್ ಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇತರರು ಇದ್ದರು.
Leave a Comment