. ಹಳಿಯಾಳ: ಕಬ್ಬನ್ನು ಸಾಗಿಸುವ ಟ್ರಾಕ್ಟರ್ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ಅನಗತ್ಯವಾಗಿ ಒವರಲೋಡಿಂಗ್ ಮಾಡಬಾರದು ಹಾಗೂ ಕಡ್ಡಾಯವಾಗಿ ವಾಹನದ ಹಿಂದುಗಡೆ ಕೆಂಪು ಪಟ್ಟಿಯನ್ನು ಅಳವಡಿಸಿಕೊಂಡು ಅಪಘಾತವನ್ನು ನಿಯಂತ್ರಿಸಲು ಸಹಕರಿಸಬೇಕೆಂದು ಡಿ.ವೈಎಸ್ಪಿ ದಯಾನಂದ ಪವಾರ ಚಾಲಕರಿಗೆ ಕರೆ ನೀಡಿದರು. ಈ.ಐ.ಡಿ.ಪ್ಯಾರಿ ಶುಗರ್ ಇಂಡಸ್ಟ್ರೀಸ್, ಪೋಲಿಸ್ ಇಲಾಖೆ, ಆರ್.ಟಿ.ಓ. ಹಳಿಯಾಳ ಹಾಗೂ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕಗಳು ಜೊತೆಯಾಗಿ ಹಮ್ಮಿಕೊಂಡ “ಕಬ್ಬು ಸಾಗಿಸುವ ಟ್ರಾಕ್ಟರ್ಗಳಿಗೆ ಕೆಂಪು ಪಟ್ಟಿಗಳನ್ನು ಅಂಟಿಸುವ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಾಂಡೇಲಿ ಎ.ಆರ್.ಟಿ.ಓ. ಅರುಣ ಕಟ್ಟಿಮನಿ ಮಾತನಾಡಿ ಕೃಷಿ ಟ್ರಾಕ್ಟರ್ ಹೊಂದಿದವರು ರೈತ ಸಾರಥಿ ಯೋಜನೆಯಡಿ ಚಾಲನಾ ಪರವಾನಗಿಯನ್ನು ಪಡೆದುಕೊಳ್ಳಲು ಸೂಚಿಸಿ, ಕಾನೂನಿನಲ್ಲಿ ನಿಗದಿಪಡಿಸಿದ ಉತ್ತರ ಮತ್ತು ಅಗಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕನ್ನು ಸಾಗಿಸಬಾರದು ಹಾಗೂ ಅತಿ ವೇಗ, ಅಜಾಗರೂಕತೆ, ಧ್ವನಿವರ್ಧಕಗಳನ್ನು ಅಳವಡಿಸುವುದು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡದೆ, ಕೆಂಪು ಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು. ಹಳಿಯಾಳ ಪಿಎಸ್ಐ ಮಲ್ಲೂ ಹೂಗಾರ, ಕಾರ್ಖಾನೆ ಹಿರಿಯ ಅಧಿಕಾರಿ ದಿವ್ಯರಾಜ ಪಿಳ್ಳೆ, ಈ.ಐ.ಡಿ. ಪ್ಯಾರಿ ಸುಗರ್ ಕಂಪನಿಯ ಹಿರಿಯ ಜನರಲ್ ಮ್ಯಾನೇಜರ್ ರವೀಂದ್ರ ದೇಸಾಯಿ, ಡಿ.ಜಿ.ಎಮ್. ಅಮರನಾಥ ಜಾಗಿರದಾರ, ಎ.ಜಿ.ಎಮ್. ಎನ್.ಎಸ್. ಹಿರೇಮಠ, ಎಮ್ ಶಂಕಲಿಂಗ ಅಂಗಡಿ, ಎನ್.ಎಸ್.ಎಸ್. ಸಂಯೋಜಕರಾದ ಡಿ.ಡಿ.ನಾಯ್ಕ, ಅವಿನಾಶ ಲೋನಿ, ಶಂಕರ ಮಿರಾಶಿ ಇದ್ದರು. ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ಅಧಿಕಾರಿಗಳು ಕಬ್ಬಿನ ಟ್ರಾಕ್ಟರ್ಗಳಿಗೆ ಕೆಂಪು ಪಟ್ಟಿಯನ್ನು ಅಳವಡಿಸಿ ಜಾಗೃತಿ ಮೂಡಿಸಿದರು.
Leave a Comment