ಹೊನ್ನಾವರ: ಜಿಲ್ಲಾಡಳಿತವು ಕರಾವಳಿ ಉತ್ಸವವನ್ನು ಡಿ. 3ರಂದು ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಹಮ್ಮಿಕೊಂಡಿದ್ದು ಸ್ಥಳೀಯ ಪ್ರತಿಭೆಗಳಿಗೆ, ಕಲಾವಿದರಿಗೆ ಹೆಚ್ಚು ಅವಕಾಶ ಕಲ್ಪಿಸುವಂತೆ ಶಾಸಕಿ ಶಾರದಾ ಮೋಹನ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ತಾ.ಪಂ. ಸಭಾಭವನದಲ್ಲಿ ನಡೆದ ಕರಾವಳಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಉತ್ಸವ ಸಿದ್ಧತೆ ಮತ್ತು ನಿರ್ವಹಣೆಗಾಗಿ ರಚಿಸಲಾದ ಉಪಸಮಿತಿಗಳ ಕಾರ್ಯನಿರ್ವಹಣೆ ಕುರಿತು ಪರಾಮರ್ಶೆ ನಡೆಸಿದರು.
ಶಾಲಾ ಮಕ್ಕಳು ಸಹ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗಾಗಿ ಚುಟುಕು ವಾಹನ ಸ್ಪರ್ಧೆ, ಸ್ವರ ಚಿತ್ತ ಮಹಿಳೆಯರಿಗಾಗಿ ಸವಿ ರುಚಿ, ಕೇಶ ವಿನ್ಯಾಸ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ರಾಜ್ಯ ಮಟ್ಟದ ಕಲಾವಿದರಿಂದ ಮಕ್ಕಳ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಲ್ಲದೆ ಶ್ವಾನ ಸ್ಪರ್ಧೆಯನ್ನು ವಿಶೇಷವಾಗಿ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ದೂರದ ಹಳ್ಳಿಗಳಿಂದ ಬರುವವರಿಗೆ ಮನೆಗೆ ತೆರಳಲು ರಾತ್ರಿ 5 ಮಾರ್ಗಗಳಲ್ಲಿ ಬಸ್ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯೋತ್ಸವ ಪ್ರಶಸ್ತಿಪುರಸ್ಕøತ ಬಳ್ಕೂರು ಕೃಷ್ಣ ಯಾಜಿ ಹಾಗೂ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಹೇಂದ್ರ ಗಣಪತಿ ಗೌಡ, ಸುಚಿತ್ರಾ ಈರಪ್ಪ ನಾಯ್ಕ ಇವರನ್ನು ಸನ್ಮಾನಿಸಲಾಗುವುದು ಎಂದರು.
ಈ ಉತ್ಸವದಲ್ಲಿ ಸ್ಥಳೀಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು, ಯಾವುದೇ ಕುಂದು ಕೊರತೆ ಇರದಂತೆ ಕರಾವಳಿ ಉತ್ಸವವನ್ನು ನಿರ್ವಹಿಸಿ ಅಲ್ಲದೆ ಸಂಪೂರ್ಣ ಸಹಕಾರ ನೀಡಲು ತಾನು ಸಿದ್ಧರಿರುವುದಾಗಿ ಶಾಸಕಿ ಶಾರದಾ ಶೆಟ್ಟಿ ಭರವಸೆ ನೀಡಿದರು.
ಭಟ್ಕಳ – ಹೊನ್ನಾವರ ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ ಶಾಸಕರಿಗೆ ಉತ್ಸವದ ರೂಪುರೇಷೆಗಳನ್ನು ವಿವರ ನೀಡಿದರು. ತಹಶೀಲ್ದಾರ ವಿ.ಆರ್. ಗೌಡ, ಪಿಎಸ್ ಐ ಆನಂದ ಮೂರ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ. ವಿ. ಹೆಗಡೆ, ಪ.ಪಂ. ಮುಖ್ಯಾಧಿಕಾರಿ ಪಾಟೀಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಉತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು ಹಾಜರಿದ್ದರು.
Leave a Comment