ಹೊನ್ನಾವರ: ಕರಾವಳಿ ಉತ್ಸವ ಪಟ್ಟಣದ ಪ್ರಭಾತನಗರದ ಸೇಂಟ್ ಅಂತೋನಿ ಕ್ರೀಡಾಂಗಣದಲ್ಲಿ ಡಿ. 3 ರಂದು ನಡೆಯಲಿದ್ದು, ಸ್ಥಳಿಯ ಪ್ರತಿಭಾವಂತರಿಗೆ ವಿವಿಧ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭಟ್ಕಳ ಉಪ ವಿಭಾಗಾಧಿಕಾರಿ ಎನ್.ಎಂ.ಮಂಜುನಾಥ ತಿಳಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರಾವಳಿ ಉತ್ಸವದ ನಿಮಿತ್ತ ಮಕ್ಕಳಿಗಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಸ್ವರಚಿತ ಕವನಗಳ ಕವಿಗೋಷ್ಠಿ ಮತ್ತು ಮಕ್ಕಳು ಹಿರಿಯರೊಂದಿಗೆ ಸಂವಾದವನ್ನು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಮಹಿಳೆಯರಿಗಾಗಿ ರಂಗೋಲಿ, ಕೇಶವಿನ್ಯಾಸ, ವಸ್ತ್ರವಿನ್ಯಾಸ, ಅಡುಗೆ, ಮೆಹೆಂದಿ ಸ್ಪರ್ಧೆ ಹಾಗೂ ಪುರುಷರಿಗಾಗಿ ಹಗ್ಗ ಜಗ್ಗಾಟ ಮತ್ತು ಕಬಡ್ಡಿ ಪಂದ್ಯಾವಳಿಯನ್ನು ಎರ್ಪಡಿಸಲಾಗಿದೆ. ಡಿ. 2 ರಂದು ಕಬ್ಬಡ್ಡಿ ಪಂದ್ಯಾವಳಿಯನ್ನು ಸೇಂಟ್ ಥಾಮಸ್ ಪ್ರೌಢಶಾಲಾ ಮೈದಾನದಲ್ಲಿ ಆಯೋಗಿಸಲಾಗಿದೆ. ಕರಾವಳಿ ಉತ್ಸವದ ನಿಮಿತ್ತ ಅಂದು ಬೆಳಿಗ್ಗೆ ವಿವಿಧ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯನ್ನು ಕೃಷಿ ಇಲಾಖೆ, ತೋಟಗಾರಿಕೆ, ಶಿಕ್ಷಣ ಇಲಾಖೆ, ಮೀನುಗಾರಿಕೆ, ಸ್ತ್ರೀ ಶಕ್ತಿ ಗುಂಪುಗಳಿಂದ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಶ್ವಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸುವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಶಾಸಕಿ ಶಾರದಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ಮಂಕಾಳ ವೈದ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಸತೀಶ ಸೈಲ್, ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಾಂತ ಘೋಟ್ನೆಕರ್, ಎಸ್ ವಿ ಸಂಕನೂರ, ವಿಶೇಷ ಆಮಂತ್ರಿತರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಳ್ಕೂರು ಕೃಷ್ಣ ಯಾಜಿ, ಜಿಲ್ಲಾಧಿಕಾರಿ ಎಸ್,ಎಸ್, ನಕುಲ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಪಾಲ್ಗೋಳುವರು.
ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಟ್ಯಾಂಜಲಿ ಕಲಾತಂಡ, ಕುಮಟಾ ಶಿವಕೃತಿ, ಭರತನಾಟ್ಯ ಏಕಪಾತ್ರಾಭಿನಯ ಅಶೋಕ ಮಹಾಲೆ ತೆಂಗಿನಹಿತ್ಲು ಭಟ್ಕಳ, ಡೊಳ್ಳು ಕುಣಿತ ಶ್ರೀ ನೀಲಕಂಠೇಶ್ವರ ಮಹಿಳಾ ಡೊಳ್ಳು ತಂಡ, ಹೆಗ್ಗೋಡು ಸಾಗರ, ಕಥಕ್ ನೃತ್ಯ ಸುಸ್ವಾರ ಕಲಾ ಕೇಂದ್ರ ಯಲ್ಲಾಪುರ, ಪಂಚವಾದ್ಯ ಮೇಳ ಗುಣವಂತೆ ತಂಡ, ಶಿವಪಂಚಾಕ್ಷರಿ ಶ್ಲೋಕ ನೃತ್ಯ ರೂಪಕ ನಾಟ್ಯರಾಣಿ ಭರತನಾಟ್ಯ ನೃತ್ಯಕಲಾಕೇಂದ್ರ ಚಂದಾವರ, ಸುಗಮ ಸಂಗೀತ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ. ಭಾವಗೀತೆ, ಜಾನಪದಗೀತೆ, ಕನ್ನಡ ನಾಡ-ನುಡಿ ಸಂಬಂಧಿಸಿದ ಲಘು ರಸಮಂಜರಿ ಗಂಗಾಧರ ನಾಯ್ಕ ಕಲಾತಂಡ ಭಟ್ಕಳ, ನ್ಯತ್ಯಭಾರ್ಗವಿ ಕಲಾ ತಂಡ ಹೊನ್ನಾವರದವರಿಂದ ದೇಶಭಕ್ತಿಗೀತೆ ನ್ಯತ್ಯ, ಶಿವರೂಪಕ ನೃತ್ಯ, ಸಾಹಸಮಯ ಹಿಪ್ಆಪ್ ನ್ಯತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ವಿಶೇಷ ಕಲಾವಿದರು: ಅಜಯ ವಾರಿಯರ್, ಅನುರಾಧಾ ಭಟ್ಟ ಇವರನ್ನೊಳಗೊಂಡ ಝೇಂಕಾರ ಮೊಲೋಡಿಯಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮಟ್ಟದ ನೃತ್ಯಗಾರರಿಂದ ನೃತ್ಯಪ್ರದರ್ಶನ, ಕೊನೆಯದಾಗಿ ಶ್ರೀ ಸುಪ್ರಸನ್ನ ಮಹಾಗಣಪತಿ ಯಕ್ಷ ಕಲಾರಕ್ಷ ಕೇಂದ್ರ ಹೊನ್ನಾವರ ತಂಡದಿಂದ ಯಕ್ಷ ನೃತ್ಯ ವೈಭವ ನಡೆಯಲಿದೆ.
ಹೊನ್ನಾವರದ ಸುತ್ತಮುತ್ತಲಿನ ಪ್ರೇಕ್ಷಣೀಯ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳಗಳ ಅಪರೂಪದ ಚಿತ್ರಗಳ ಪ್ರದರ್ಶನ ಪ್ರದರ್ಶನಗೊಳ್ಳಲಿದೆ. ಭವಾನಿಶಂಕರ ನಾಯ್ಕ ಸ್ಲೈಡ್ಗಳ ಮೂಲಕ ಇದನ್ನು ಪ್ರದರ್ಶಿಸುವರು. ಸ್ಪರ್ಧಾಳುಗಳಿಗೆ ನಿರ್ಣಾಯಕರಿಗೆ ಕಲಾ ತಂಡದ ಕಲಾವಿದರುಗಳಿಗೆ ಲಘು ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮ ಮುಗಿದ ನಂತರ ಸೆಂಟ್ ಅಂತೋನಿ ಮೈದಾನದಿಂದ ಇಡಗುಂಜಿ-ಬಳಕೂರು-ಮಾಗೋಡ, ಅರೇಅಂಗಡಿ-ಹೆಬ್ಬಾನಕೇರಿ-ಚಂದಾವರ, ಕವಲಕ್ಕಿ-ಹಡಿನಬಾಳ ಮಾರ್ಗವಾಗಿ ಗೇರಸೊಪ್ಪಾ, ಕಾಸರಕೋಡ-ಮಂಕಿ-ಭಟ್ಕಳ, ಕರ್ಕಿ-ಹಳದೀಪುರ ಮಾರ್ಗವಾಗಿ ಕುಮಟಾ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ ವಿ.ಆರ್.ಗೌಡ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment