ಹಳಿಯಾಳ: 2017-18 ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ ಕನಿಷ್ಠ 3000 ರೂ. ದರ ನಿಗದಿ ಮಾಡುವಂತೆ ನವೆಂಬರ್ 30 ರಂದು ನೀಡಿದ ಗಡುವಿಗೆ ತಾಲೂಕಾಡಳಿತ ಹಾಗೂ ಸಕ್ಕರೆ ಕರ್ಖಾನೆಯವರು ಸ್ಪಂದಿಸದೆ ಇರುವುದರಿಂದ ಡಿಸೆಂಬರ್ 5ರ ಒಳಗೆ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರ ರೈತರ ಸಮಸ್ಯೆಯನ್ನು ಬಗೆಹರಿಸದೆ ಇದ್ದರೇ ದಿ.7 ರಂದು ಹಳಿಯಾಳಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ ನಡೆಸಲಾಗುವುದೆಂದು ಹಳಿಯಾಳ-ಕಲಘಟಗಿ-ಧಾರವಾಡ ಕಬ್ಬು ಬೆಳೆಗಾರ ಸಂಘದವರು ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಲೊಕೊಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಹಳಿಯಾಳ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ 2015 -16 ನೇ ಸಾಲಿನಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚದ ಬಾಕಿ 223ರೂ, 2016-17ನೇ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್ ಕಬ್ಬಿಗೆ 305 ರೂ. ಮೊತ್ತವನ್ನು ತಕ್ಷಣ ರೈತರಿಗೆ ನೀಡಬೇಕು ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ 3000ರೂ. ನಿಗದಿ ಮಾಡುವಂತೆ ಆಗ್ರಹಿಸಿ ನೀಡಿದ ಗಡುವುಗಳಿಗೆ ಸಕ್ಕರೆ ಕಾರ್ಖಾನೆ ಆಗಲಿ ಮಧ್ಯಸ್ಥಿಕೆ ವಹಿಸಿದ್ದ ತಾಲೂಕಾಡಳಿತವಾಗಲಿ ಸ್ಪಂದಿಸಿಲ್ಲ ಅಲ್ಲದೇ ಈ ಜ್ವಲಂತ ಸಮಸ್ಯೆಗಳ ಕುರಿತು ಸಚಿವ ದೇಶಪಾಂಡೆ ಅವರು ಚಕಾರವೆತ್ತಿಲ್ಲ ಎಂದ ಕಾಜಗಾರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಗಡುವು ಪಡೆದಿದ್ದ ಕಾರ್ಖಾನೆಯವರು ಅವರ ಮಾತಿಗೂ ಕಿಮ್ಮತ್ತು ನೀಡಿಲ್ಲ ಜನಪ್ರತಿನಿಧಿಗಳು ಹಾಗೂ ತಾಲೂಕಾಡಳಿತಕ್ಕೂ ಜಗ್ಗದ ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ಹೋರಾಟದ ಹಾದಿ ಹಿಡಿಯುವುದೊಂದೆ ಬಾಕಿ ಉಳಿದಿದ್ದು ಸಂದರ್ಭ ಬಂದರೇ ಕಾರ್ಖಾನೆಗೆ ಬೀಗ ಜಡಿದು ಕೂಡ ಪ್ರತಿಭಟನೆ ನಡೆಸಲಾಗವುದು ಎಂದರು.ಕೊನೆಯ ಗಡುವು :- ಡಿ.5 ರ ಒಳಗಾಗಿ ಕಬ್ಬು ಬೆಳೆಗಾರ ರೈತರ ಬೇಡಿಕೆಗಳನ್ನು ಈಡೇರಿಸಿ ಕಬ್ಬಿಗೆ ದರ ನಿಗದಿ ಪಡಿಸದೆ ಇದ್ದರೇ ಡಿ.7 ರಂದು ಹಳಿಯಾಳಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಸಭೆಯಲ್ಲಿ ಬಹಿರಂಗವಾಗಿ ವಿಷಯ ಪ್ರಸ್ತಾಪಿಸಿ ಊಗ್ರ ರೂಪದ ಪ್ರತಿಭಟನೆ ನಡೆಸಲಾಗುವುದೆಂದು ದಿ.2 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಫ್ಯಾಕ್ಸ್ ಮಾಡುವ ಮೂಲಕ ಕಬ್ಬು ಬೆಳೆಗಾರ ಸಂಘದವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಈ ಪ್ರತಿಭಟನೆ ಯಾವ ಸ್ವರೂಪ ತಾಳಲಿದೆ ಎಂಬುದು ತಾವು ಹೇಳುವುದಿಲ್ಲ ಪ್ರತಿಭಟನೆಯಲ್ಲಿ ಹಳಿಯಾಳ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಧಾರವಾಡ, ಕಲಘಟಗಿ, ಅಳ್ನಾವರ, ಹಳಿಯಾಳ, ದಾಂಡೇಲಿ ಭಾಗದ ಕಬ್ಬು ಬೆಳೆಗಾರ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆಂದು ಮಾಧ್ಯಮಕ್ಕೆ ಅಧ್ಯಕ್ಷ ಕಾಜಗಾರ ವಿವರಿಸಿದರು. ಸುದ್ದಿಗೊಷ್ಠಿಯಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷ ಎಮ್.ವಿಘಾಡಿ, ಕಲಘಟಗಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಎಸ್.ಎನ್.ಬಣವನ್ನವರ, ಹಳಿಯಾಳ ಸಂಘದ ಪ್ರ.ಕಾರ್ಯದರ್ಶಿ ಅಶೋಕ ಮೇಟಿ, ಗಿರಿಶ ಟೋಸುರ, ಗಣಪತಿ ಕರಂಜೆಕರ, ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್, ಸುರೇಶ ಶಿವಣ್ಣವರ, ಯುಎನ್ ಶಾನು, ಮಿರಾಶಿ ಇತರರು ಇದ್ದರು.
Leave a Comment