ಹೊನ್ನಾವರ ತಾಲೂಕಿನ ಬಳಕೂರು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಯಾನೆ ಕಾರ್ಯದರ್ಶಿಯಾಗಿ ಕಳೆದ ಎರಡು ತಿಂಗಳಿಂದ ಕೆಲಸ ನಿರ್ವಹಿಸುತ್ತಿರುವ ವಿನಾಯಕ ಸಿದ್ಧಪುರ ಎಂಬುವವರು ಪಂಚಾಯತ ವ್ಯಾಪ್ತಿಯ ಜನ ಸಾಮಾನ್ಯರು ಪಂಚಾಯತದಿಂದ ಪಡೆಯಬೇಕಾದ ಯಾವುದೇ ಸರ್ಟಿಫಿಕೇಟ್ ಬಯಸಿ ಬಂದವರಿಗೆ ಅದಕ್ಕೆ ನಿಗದಿಪಡಿಸಿದ ಶುಲ್ಕವನ್ನು ಭರಣಮಡಿಸಿಕೊಂಡು ದಾಖಲೆ ನೀಡುವ ಬದಲು ಅವರ ಮನೆಗೆ ಹೋಗಿ ಮನೆಯ ಉದ್ಧಳತೆಯನ್ನು ಅಳೆದು ಹಿಂದಿನ ಕರದ ಮೂರುಪಟ್ಟು ಕರವನ್ನು ಹೇರಿ ವಸೂಲಿ ಪಡೆದು ಆನಂತರ ಸಂಬಂಧಪಟ್ಟ ಸರ್ಟಿಫಿಕೇಟ್ ಯಾ ದೃಡಿಕರಣ ಪತ್ರದ ಶುಲ್ಕವನ್ನು ಪಡೆದು ದಾಖಲೆ ನೀಡುತ್ತಿರುವುದು ಇವರ ಸರ್ವಾಧಿಕಾರ ಮತ್ತು ಜನಸಾಮಾನ್ಯರ ಮೇಲಿನ ದೌರ್ಜನ್ಯವೆಂದೇ ಪರಿಗಣಿಸಬೇಕಾಗಿದೆ ಇದು ಖಂಡನೀಯ. ಇವರ ನಿಯಮ ಬಾಹಿರ ದುಂಡಾವರ್ತನೆಯನ್ನು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಾಗಲಿ, ಸ್ಥಳೀಯ ಆಡಳಿತ ವ್ಯವಸ್ಥೆಯಾಗಲಿ, ಒಂದು ತಿಂಗಳಲ್ಲಿ ನಿಯಂತ್ರಿಸದೇ ಇದ್ದಲ್ಲಿ ಉಗ್ರ ಹೋರಾಟ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ಥಳೀಯರು ಮತ್ತು ಅರಸು ವಿಚಾರ ವೇದಿಕೆ ಅಧ್ಯಕ್ಷರಾದ ಅನಂತ ನಾಯ್ಕ ಹೆಗ್ಗಾರ ಪತ್ರಿಕೆಗೆ ತಿಳಿಸಿದ್ದಾರೆ. ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಮನೆ ಮತ್ತು ಕಟ್ಟಡಗಳ ಕರ ಆಕರಣೆಗಳನ್ನು ಪರಿಶ್ಕರಿಸುವುದು ಸರ್ವೆ ಸಾಮಾನ್ಯ. ಆದರೆ ಇದನ್ನು ಗ್ರಾಮ ಪಂಚಾಯತ ಆಡಳಿತ ಕಮಿಟಿಯು ಸಭೆಯಲ್ಲಿ ನಿರ್ಣಯಿಸಬೇಕು. ಆನಂತರ ಸಾರ್ವತ್ರಿಕ ಸರ್ವೆ ಕಾರ್ಯ ನಡೆಸಬೇಕು. ಇಲ್ಲವೇ ಇದ್ದ ಕರಾಕರಣೆಗೆ ಶೇಕಡಾವಾರು ಹೆಚ್ಚಿಸಬೇಕು ತಯಾರಿಸಿದ ಆ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕಾಗಿ ನೋಟಿಸ್ ಬೋರ್ಡಿಗೆ ಲಗತ್ತಿಸಬೇಕು. ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ ಸ್ವೀಕರಿಸಿ ನಿಖಾಲೆಗೊಳಿಸಬೇಕು ಆನಂತರ ಪಟ್ಟಿಯನ್ನು ಜ್ಯಾರಿಗೊಳಿಸಬೇಕು. ಈ ಯಾವ ಕಾರ್ಯಗಳನ್ನು ನಡೆಸದೇ ಏಕಾಏಕಿ ಪಂಚಾಯತ ದೃಡೀಕರಣ ಪತ್ರ ಬಯಸಿ ಬಂದವರ ಮನೆ ಅಳೆದು ಮನಸೋಇಚ್ಚೆ ಮೂರು ಪಟ್ಟು ಕರವನ್ನು ಹೇರಿ ಅಕ್ರಮವಾಗಿ ಕರ ವಸೂಲಿ ಪಡೆಯುವುದು ಹಗಲು ದರೋಡೆಗೆ ಸಮಾನವಾಗಿದೆ. ಆದ್ದರಿಂದ ಸದ್ರಿ ಅಧಿಕಾರಿಯು ಅಕ್ರಮವಾಗಿ ವಸೂಲಿ ಪಡೆದಂತ ಈ ಹಣವನ್ನು ಜನಸಾಮಾನ್ಯರಿಗೆ ತಿರುಗಿಸಬೇಕು ಸದ್ರಿ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಇನ್ನೂ ವಿಷೇಶವೆಂದರೆ ಈ ಅಭಿವೃದ್ದಿ ಅಧಿಕಾರಿ ಯಾನೆ ಕಾರ್ಯದರ್ಶಿಯು ಮಾಹಿತಿ ಹಕ್ಕಿನಡಿಯಲ್ಲಿ ಗ್ರಾಮ ಪಂಚಾಯತದಲ್ಲಿ 3 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಸರಳ ಯಾದಿಯನ್ನು ಬಯಸಿ ಅರ್ಜಿ ಸಲ್ಲಿಸಿದರೆ, ಮಾಹಿತಿ ಪೂರೈಸಲು 10,862=00 ರೂಪಾಯಿ ಭರಣ ಮಾಡಲು ಲಿಖಿತ ಉತ್ತರ ನೀಡುತ್ತಾರೆ. ಅಂದರೆ ಇವರು ಮಾಹಿತಿ ಹಕ್ಕು ಉಲ್ಲಂಘನೆ ಮಾಡಿರುವುದಲ್ಲದೇ ಭೃಷ್ಟಾಚಾರದ ಪೋಷಕರೆಂದೇನಿಸಿಕೊಂಡಿದ್ದಾರೆ. ಇದರಿಂದ ಇವರ ಸರ್ವಾಧಿಕಾರ ಮತ್ತು ಅರ್ಜಿದಾರರ ಕಾಲಹರಣ, ಮಾನಸಿಕ ಆಘಾತ ನೀಡುವ ಉದ್ದೇಶ ಅಡಗಿರುವುದು ಸತ್ಯವಾಗಿದೆ. ಒಬ್ಬ ವ್ಯಕ್ತಿ ಆಧಾರ ಕಾರ್ಡ ಮಾಡಿಸಿಕೊಳ್ಳುವಲ್ಲಿ ಪಂಚಾಯತದಿಂದ ದೃಡೀಕರಣ ಪತ್ರ ಕೇಳಿ ಬಂದವರಿಗೂ ಸಹ ಅವರ ಮನೆಯ ಉದ್ದಗಲ ಅಳೆದು ಮೂರು ಪಟ್ಟು ಕರಾಕರಣೆ ಮಾಡಿ ಕರ ವಸೂಲಿ ಪಡೆದು ಸರ್ಟಿಫಿಕೇಟ್ ನೀಡಿರುವುದು ಅತ್ಯಂತ ಹೇಯ ಕೃತ್ಯ. ಇವರು ಜನ ಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ಸರ್ವಾಧಿಕಾರವನ್ನು ಖಂಡಿಸಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ, ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಮತ್ತು ಒಂದು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅನಂತ ನಾಯ್ಕ ಹೆಗ್ಗಾರ ಇವರು ಇಲಾಖೆಗೆ ಆಗ್ರಹಿಸಿದ್ದಾರೆ.
Leave a Comment