ಹೊನ್ನಾವರ: ಹೊನ್ನಾವರ ವಕೀಲರ ಸಂಘದ ಸದಸ್ಯರು ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶಿಸಿದರು. ವಕೀಲರ ದಿನಾಚರಣೆಯಂದೇ ಧರ್ಮ, ಕಾನೂನು, ಕಟ್ಟಲೆ ಆಚರಣೆಯ ಸುಧನ್ವನ ಜೀವನವನ್ನು ಬಿಂಬಿಸುವ ಯಕ್ಷ ಪ್ರದರ್ಶನ ಅರ್ಥಪೂರ್ಣವಾಗಿತ್ತು.
ಸುಧನ್ವಾರ್ಜುನ ಪ್ರಸಂಗವು ಉಮೇಶ ಭಟ್ ಬಾಡ ಹಾಗೂ ಗೋಪಾಲಕೃಷ್ಣ ಮಂಜ ಭಾಗ್ವತ ಕಡತೋಕ ಇವರ ಭಾಗ್ವತಿಕೆಯಲ್ಲಿ ಗಜಾನನ ಹೆಗಡೆ ಮೂರುರು ಚಂಡೆ, ನರಸಿಂಹ ಹೆಗಡೆ ಮೂರುರು ಮೃದಂಗ ಹಿಮ್ಮೇಳದಲ್ಲಿ ಮೂಡಿ ಬಂತು. ಯಕ್ಷ ವೇಷ-ಭೂಷಣವನ್ನು ಭಾಸ್ಕರ ಗೌಡ ಆಡುಕಳ ನೀಡಿ ಸಹಕರಿಸಿದರು.
ಸುಧನ್ವನ ಪಾತ್ರವನ್ನು ಸಹಾಯಕ ಸರ್ಕಾರಿ ಅಭಿಯೋಜಕ ಭದರಿನಾಯರಿ ಕೆ., ಹಂಸಧ್ವಜನಾಗಿ ವಕೀಲ ಎಮ್.ಐ. ಹೆಗಡೆ, ಅರ್ಜುನನಾಗಿ ವಕೀಲ ಸತೀಶ ಭಟ್ ಉಳಗೆರೆ, ಅನುಸಾಲ್ವನಾಗಿ ವಕೀಲ ವಿ.ಎಂ. ಭಂಡಾರಿ, ಕೃಷ್ಣನಾಗಿ ಕು. ಅಪೂರ್ವಾ ಭಟ್, ಪ್ರದ್ಯುಮ್ನನಾಗಿ ಕು. ವಿನಿತ್ ನಾಯ್ಕ, ವೃಷಕೇತು ಕು. ಅಜಯ್ ಭಟ್ ಪಾತ್ರ ನಿರ್ವಹಿಸಿದರು.
ಸುಧನ್ವನ ಪಾತ್ರದಲ್ಲಿ ಮಿಂಚಿದ ಭದರಿನಾಥ ಅವರ ಅಭಿನಯ ಯಾವ ವೃತ್ತಿಪರ ಕಲಾವಿದನಿಗೂ ಕಡಿಮೆ ಇಲ್ಲದಂತೆ ಮೂಡಿ ಬಂತು. ಅರ್ಜುನನ್ನು ಎದುರಿಸುವ ವೀರಾವೇಷ, ಕೃಷ್ಣನನ್ನು ನೋಡಲೇಬೇಕಾದ ಅನಿವಾರ್ಯತೆ, ಕೃಷ್ಣ ಪರಮಾತ್ಮನನ್ನು ತನ್ನ ರಾಜ್ಯಕ್ಕೆ ಕರೆಯಿಸಲೇಬೇಕಾದ ತುಮಲ, ಕೃಷ್ಣ ಎದುರುಗೊಂಡಾಗಿನ ಭಾವ ಪರವಶತೆಯ ಜೊತೆಗೆ ಲಯ ಮತ್ತು ತಾಳಬದ್ಧ ಕುಣಿತ ಹಾಗೂ ಅಸ್ಕಲಿತ ಸಂವಾದ, ಪಾತ್ರದ ಕುರಿತಾಗಿನ ಅಧ್ಯಯನ ನೋಡುಗರನ್ನು ಸೆಳೆಯಿತು.
ಅರ್ಜುನನ ಪಾತ್ರ ವಹಿಸಿದ ಸತೀಶ ಭಟ್ ಉಳಗೆರೆಯವರ ಪಾತ್ರ ಚಿತ್ರಣ ಅಭಿನಯ ಮತ್ತು ನೃತ್ಯ ಅಪೂರ್ವವಾಗಿತ್ತು. ಹಂಸಧ್ವಜನ ಪಾತ್ರ ನಿರ್ವಹಿಸಿದ ಎಮ್.ಐ. ಹೆಗಡೆ ಪಾತ್ರ ಚಿತ್ರಣ ಹಾಗೂ ಕು. ಅಪೂರ್ವಾ ಭಟ್ರವರ ಕೃಷ್ಣ, ಕು. ಅಜಯ ಭಟ್ ವೃಷಕೇತು ಕು. ವಿನಿತ್ರವರ ಪ್ರದ್ಯುಮ್ನ, ವಿ.ಎಮ್. ಭಂಡಾರಿಯವರ ಅನುಸಾಲ್ವ ಜನರ ಗಮನ ಸೆಳೆಯಿತು.
Leave a Comment