ಕಾರವಾರ: ಗ್ರಾಮೀಣ ಕಲೆಗಳನ್ನು ಜನ ಎಂದಿಗೂ ಮರೆಯಬಾರದು. ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠಲ ಧಾರವಾಡಕರ್ ಹೇಳಿದರು.
ಶುಕ್ರವಾರ ಮದ್ಯಾಹ್ನ ಜಿಲ್ಲಾ ರಂಗಮಂದಿರದಲ್ಲಿ “ಕರಾವಳಿ ಉತ್ಸವ” ಸಾಂಸ್ಕøತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಶಿಸುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಲು ಸರ್ಕಾರ ಕರಾವಳಿ ಉತ್ಸವದಂತಹ ವೇದಿಕೆ ಕಲ್ಪಿಸಿದೆ. ಕಲಾವಿದರು ಹಾಗೂ ಕಲಾಭಿಮಾನಿಗಳು ಇದರ ಪ್ರಯೋಜನ ಪಡೆಯಬೇಕು. ಅಪರೂಪವಾಗುತ್ತಿರುವ ಕಲೆಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು. ಪದ್ಮಶ್ರಿ ಪುರಸ್ಕøತ ಸುಕ್ರಿ ಗೌಡ ಜಾನಪದ ಗೀತೆಯೊಂದನ್ನು ಪ್ರಸ್ತುತ ಪಡಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ, ವಿಶೇಷ ಭೂ ಸ್ವಾಧೀನಾಧಿಕಾರಿ ರಮೇಶ ಕಳಸದ, ನಗರಸಭೆ ಪೌರಾಯುಕ್ತ ಯೋಗೇಶ್ವರ ಇತರರು ವೇದಿಕೆಯಲ್ಲಿದ್ದರು.
ಹಾಸ್ಯ ಕಲಾವಿದ ಪ್ರಾಣೇಶ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಪ್ರಾಣೇಶ್, ಯಕ್ಷ ಕಲಾವಿದ ಚಿಟ್ಟಾಣಿಯವರನ್ನು ನೆನಪು ಮಾಡಿಕೊಂಡರು. ಹೊನ್ನಾವರ ಹಾಗೂ ಸುತ್ತಲಿನ ಯಾವದೇ ಭಾಗದಲ್ಲಿ ತಾವು ಕಾರ್ಯಕ್ರಮ ನೀಡಿದರೂ ಚಿಟ್ಟಾಣಿಯವರು ಮುಂದಿನ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು ಎಂದು ಅಭಿಪ್ರಾಯ ಹಂಚಿಕೊಂಡರು. ಕಲಾ ತಂಡದ ಸದಸ್ಯರಾದ ಮಹಾಮನಿ, ನರಸಿಂಹ ಜೋಶಿ ಹಾಗೂ ವೆಂಕಟ್ರಮಣ ಹೆಗಡೆ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಉಪ ವಿಭಾಗಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು. ಸುರೇಶ್ ಶಟ್ಟಿ ನಿರ್ವಹಿಸಿದರು.
ಉತ್ಸವದ ಅಂಗವಾಗಿ ಮಾಲಾದೇವಿ ಮೈದಾನದಲ್ಲಿ ಭಾರತೀಯ ನೌಕಾಸೇನೆ ಹಾಗೂ ಜಿಲ್ಲಾ ಪೊಲೀಸರ ಮದ್ಯೆ ಪೇಂಟ್ ಬಾಲ್ ಮೊದಲ ಪಂದ್ಯಾವಳಿ ಶುಕ್ರವಾರ ಬೆಳಗ್ಗೆ ನಡೆಯಿತು. ಇದರಲ್ಲಿ ನೌಕಾಸೇನೆಯವರು ಗೆಲುವು ಪಡೆದರು. ಇನ್ನು ಜಿಲ್ಲಾಧಿಕಾರಿ ಕಚೇರಿ ಒಳ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. 40ಕ್ಕೂ ಅಧಿಕ ಜನರು ಸ್ಪರ್ಧೆಯಲ್ಲಿ ಭಾಗವಹಿಸಿ ಬಗೆ ಬಗೆಯ ರಂಗೋಲಿಗಳನ್ನು ಚಿತ್ರಿಸಿದರು.
Leave a Comment