ಹಳಿಯಾಳ :
ಹೊನ್ನಾವರ ಪಟ್ಟಣದ ನಿವಾಸಿಯಾದ ಪರೇಶ್ ಕಮಲಾಕರ ಮೇಸ್ತ ಕೊಲೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಆರಕ್ಷಕರ ಸಮ್ಮುಖದಲ್ಲಿ ಅಪರಾಧಿಗಳನ್ನು ಪತ್ತೆಹಚ್ಚುವುದರ ಬದಲು ಅವರ ಜೊತೆ ಶಾಮೀಲಾಗಿ ಪ್ರಕರಣವನ್ನು ಮುಚ್ಚುವಂತಹ ಕೆಲಸ ಮಾಡಲಾಗುತ್ತಿದ್ದು ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಭದ್ರತೆ ನೀಡಬೇಕೆಂದು ಆಗ್ರಹಿಸಿ ಹಳಿಯಾಳ ಬಿಜೆಪಿ ಘಟಕದವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹಳಿಯಾಳ ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ತಾಲೂಕಾ ಬಿಜೆಪಿ ಘಟಕದವರು ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ನಡೆಸಿ ಘಟನೆಯನ್ನು ಖಂಡಿಸಿ ಗಣೇಶ ಮಂದಿರದಿಂದ ಮೆರವಣಿಗೆಯನ್ನು ಆರಂಭಿಸಿ ಬಸ್ ಸ್ಟಾಂಡ್ ರಸ್ತೆ. ,ಮೇದಾರಗಲ್ಲಿ, ಸಂಗೋಳ್ಳಿ ರಾಯಣ್ಣ ಅರ್ಬನ್ ವೃತ್ತ, ಬಜಾರ , ಮುಖ್ಯ ರಸ್ತೆ ಮತ್ತು ಶಿವಾಜಿ ವೃತ್ತದ ಮೂಲಕ ಸಾಗಿ ಮೆರವಣಿಗೆಯ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಇಲ್ಲಿಯ ಶಿವಾಜಿ ವೃತ್ತಕ್ಕೆ ಆಗಮಿಸಿ ತಹಶೀಲದಾರ ವಿದ್ಯಾಧರ ಗುಳಗುಳಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ಈ ಕೊಲೆಯಲ್ಲಿ ಭಾಗಿಯಾದಂತಹ ಆರೋಪಿಗಳನ್ನು ತೀವೃವಾದ ಶಿಕ್ಷೆಗೆ ಒಳಪಡಿಸಬೇಕು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ನಾವು ತೀವೃತರ ಹೋರಾಟವನ್ನು ಮಾಡಬೇಕಾಗುತ್ತದೆ. ಮುಗ್ಧ ಅಮಾಯಕ ಪರೇಶ ಮೇಸ್ತಾರ ಕುಟುಂಬಕ್ಕೆ ಹೆಚ್ಚಿನ ಹಣಕಾಸಿನ ನೆರವನ್ನು ನೀಡುವಂತೆ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ವಾಸು ಪೂಜಾರಿ, ಎಸ್.ಎ.ಶೆಟವಣ್ಣವರ, ಸಂತೋಷ ಘಟಕಾಂಬಳೆ, ನಾರಾಯಣ ಬೆಳಗಾಂವಕರ, ಗಣಪತಿ ಕರಂಜೇಕರ, ವಿಜಯ ಬೂಬಾಟೆ,ವಿ.ಎಮ್.ಪಾಟೀಲ್,ಸೋನಪ್ಪಾ ಸುಣಕಾರ,ಶಂಕರ ಗಳಗಿ, ಜಯಲಕ್ಷ್ಮೀ ಚವ್ಹಾಣ, ಲಕ್ಷ್ಮೀ ಭಜಂತ್ರಿ, ಅನಿಲ ಮುತ್ನಾಳ, ಪ್ರಕಾಶ ಕೋರವರ, ಗಿರೀಸ ಠೊಸೂರು, ಮಾರುತಿ ಪೆಟ್ನೇಕರ, ಸಂಜು ಹಿರೇಕರ, ಪಾಂಡು ಗೌಡಾ, ಶಾಂತಾರಾಮ ಘಾಡಿ ಇತರರು ಇದ್ದರು. ಪೋಟೋ ; 11 ಎಚ್.ಎಲ್.ವೈ 1 : ಹಳಿಯಾಳ: ಹೊನ್ನಾವರ ಘಟನೆಯನ್ನು ವಿರೋಧಿಸಿ ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು.
Leave a Comment