ಹೊನ್ನಾವರ
ತಾಲೂಕಿನ ಮಾಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಗದ್ದೆ ಬಳಿ ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಹೊನ್ನಾವರ ಪಟ್ಟಣ, ಮಾಗೋಡ, ಉಪ್ಪೋಣಿ, ಅಳ್ಳಂಕಿ, ಮೂಡ್ಕಣಿ, ಹಡಿನಬಾಳ. ಕವಲಕ್ಕಿ ಗೇರುಸೊಪ್ಪಾ ಕರ್ಕಿಗಳಲ್ಲಿ ವ್ಯಾಪಾರಸ್ಥರು ಅಂಗಡಿ, ಹೊಟೇಲ್ ಶೆಟರ್ ಎಳೆದು ಬಂದ್ ಮಾಡಿದರು.
ಶಾಲಾ ಕಾಲೇಜುಗಳಿಗೆ ರಜೆ ನೀಡಲಾಯಿತು. ಪಟ್ಟಣದ ಮತ್ತು ಆತಂಕ ಸೃಷ್ಠಿಯಾದ ಹಳ್ಳಿಗಳಲ್ಲಿ ಪಾಲಕರು ಬಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಹುದು ಎಂದು ಸೂಚಿಸಲಾದ ಹಿನ್ನೆಲೆಯಲ್ಲಿ ಪಾಲಕರು ಶಾಲೆಗೆ ಹೋಗಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದರು.
ವಿದ್ಯಾರ್ಥಿನಿ ಹೇಳಿಕೆ: ಬೆಳಿಗ್ಗೆ 7.30 ಸುಮಾರಿಗೆ ಹೊಸಗದ್ದೆ ಬಳಿ ನಡೆದು ಬರುತ್ತಿರುವಾಗ ಇಬ್ಬರು ಹಿಂದಿನಿಂದ ಬಂದು ಅಟ್ಯಾಕ್ ಮಾಡಿದರು. ನಾನು ಕೂಗಿಕೊಂಡೆ. ಕೂಗಿದರೆ ಕೊಂದು ಬಿಡ್ತೀನಿ ಅಂದ್ರು. ನನಗೆ ಭಯ ಆಯಿತು.
ಅವರು ನನ್ನ ಹತ್ರ ಕನ್ನಡದಲ್ಲೇ ಮಾತಾಡಿದ್ರು. ನಂತರ ಅವರು ಬೇರೆ ಭಾಷೆಯಲ್ಲಿ ಏನೀ ಮಾತಾಡಿಕೊಂಡ್ರು. ನನಗೆ ಅರ್ಥ ಆಗಲಿಲ್ಲ. ದಪ್ಪ ಇದ್ದವ್ರ ಹತ್ರ ಚಾಕು ಇತ್ತು. ಅವರು ಅದರಿಂದ ಏನೂ ಮಾಡಿಲ್ಲ. ಬಾರೀಕ್ ಇದ್ದ ವ್ಯಕ್ತಿ ಬ್ಲೇಡ್ ನಂತಹ ಏನೋ ಇಟ್ಕೊಂಡಿದ್ರು. ಅದ್ರಿಂದ ನನಗೆ ಕೈಗೆಲ್ಲ ಟಾರ್ಚ್ರ ಮಾಡಿದ್ರು.
ಅಷ್ಟರಲ್ಲಿ ಬೈಕ್ ಸೌಂಡ್ ಬಂತು ಅಂತ ನನ್ನನ್ನು ಬಿಟ್ಟು ಓಡಿದರು. ನಾನು ಅಲ್ಲಿಂದ ಮಾಗೋಡಗೆ 5 ಕಿ.ಮೀ. ಓಡಿ ಬಂದೆ. ಅಲ್ಲಿ ಅಂಗಡಿಯ ಈಶ್ವರ ಹೆಗಡೆಯವರಿಗೆ ತಿಳಿಸಿದೆ. ಅವರು ನಮ್ಮ ಜನರಿಗೆ ತಿಳಿಸಿದರು ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Comment