ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದುಗಳನ್ನು ಗುರಿಯಾಗಿರಿಸಿಕೊಂಡು ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಆರೋಪಿಸಿದೆ.
ಈ ಕುರಿತು ಪ್ರಕಟಣೆ ನೀಡುವರು ಪಕ್ಷದ ಮುಖಂಡ ನಾಗರಾಜ ಜೋಶಿ, ರಾಮು ರಾಯ್ಕರ್ ಹಾಗೂ ರಾಜೇಶ್ ನಾಯಕ, ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ದೂರಿದರು. ಹೊನ್ನಾವರ ಹಾಗೂ ಕುಮಟಾದಲ್ಲಿ ನಡೆದ ಗಲಬೆ ನಂತರ ಹಿಂದುಗಳನ್ನು ಗುರಿಯಾಗಿರಿಸಿಕೊಂಡು ಜಿಲ್ಲಾಡಳಿತ ಹಾಗೂ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ. 200ಕ್ಕೂ ಅಧಿಕ ಅಮಾಯಕರನ್ನು ಯಾವದೇ ಕಾರಣವಿಲ್ಲದೇ ಬಂಧಿಸಲಾಗಿದೆ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸರು ಹಿಂದುಗಳನ್ನು ಜೈಲಿಗಟ್ಟುತ್ತಿದ್ದಾರೆ ಎಂದು ಆರೋಪಿಸಿದರು.
ಕಾರವಾರ, ಕುಮಟಾ, ಹೊನ್ನಾವರ ಹಾಗೂ ಶಿರಸಿಯಲ್ಲಿ ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಯಲ್ಲಿ ಕುಳಿತು ಯಾವ ಯಾವ ಹಿಂದು ಮುಖಂಡರನ್ನು ಬಂಧಿಸಬೇಕು ಎಂದು ಪಟ್ಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಕಾಂಗ್ರೆಸಿಗರ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಮುಸ್ಲಿಂ ಕೋಮಿಗೆ ಸೇರಿದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಹಿಂದುಗಳ ವಿರುದ್ದ ಹಾಗೂ ರಾಷ್ಟ್ರವಿರೋಧಿ ಬರಹಗಳು ಹರಿದಾಡುತ್ತಿದ್ದರೂ ಅವರ ಮೇಲೆ ಯಾವದೇ ಕ್ರಮ ಜರುಗಿಸಲ್ಲ. ಸಿದ್ದರಾಮಯ್ಯ ಸರ್ಕಾರ ಹಿಂದುಗಳನ್ನು ಹಾಗೂ ಹಿಂದು ಸಂಘಟನೆಗಳನ್ನು ಬಗ್ಗುಬಡಿಯುವ ಉದ್ದೇಶದಿಂದ ಗಲಭೆಯನ್ನು ಸೃಷ್ಟಿಸಿದೆ ಎಂದು ದೂರಿದ್ದಾರೆ.
ಶಿರಸಿ ಹಾಗೂ ಹೊನ್ನಾವರದಲ್ಲಿ ಪೋಲಿಸ್ ಅಧಿಕಾರಿಗಳು ದುಷ್ಕರ್ಮಿಗಳ ಜೊತೆ ಕೈಜೋಡಿಸಿ ಹಿಂದುಗಳ ಮೇಲೆ ಹಲ್ಲೆ ನಡೆಸಿದ್ದರೂ ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮಸೀದೆಯೊಂದರ ಪಕ್ಕದಲ್ಲಿ ಮುಸ್ಲಿಂ ಮತಾಂಧರು ಹಾಗೂ ಪೋಲಿಸರು ಒಟ್ಟಾಗಿಯೇ ಹಿಂದುಗಳ ಮೇಲೆ ಕಲ್ಲು ತೂರುತ್ತಿದ್ದರೂ ಅದನ್ನು ಮುಚ್ಚಿ ಹಾಕಲು ಯತ್ನಿಸಲಾಗಿದೆ. ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಪೊಲೀಸರ ವಿರುದ್ದವೂ ಕ್ರಮ ಜರುಗಿಸಿಲ್ಲ ಎಂದು ದೂರಿದರು.
Leave a Comment