ಹಳಿಯಾಳ : ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ವಿವಿಧ ಸ್ಪರ್ದಾ ಕಾರ್ಯಕ್ರಮಗಳು ನಡೆದು ನೂರಾರು ಮಹಿಳೆಯರು, ಯುವತಿಯರು, ಮಕ್ಕಳು, ಯುವಕರು ವಯಸ್ಸಿನ ಭೇದ ಮರೆತು ಸ್ಪರ್ದಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪಟ್ಟಣದ ಶಿವಾಜಿ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಂದ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ತಹಶೀಲ್ದಾರ್ ಕಾರ್ಯಾಲಯ ಸಭಾಭನದಲ್ಲಿ ಕವಿಗೋಷ್ಠಿ, ಪುರಸಭಾ ಭವನದಲ್ಲಿ ಫಲ-ಪುಷ್ಪ ಪ್ರದರ್ಶನ, ಮಿಲಾಗ್ರಿಸ್ ಶಾಲೆ ಹಾಗೂ ರುಡಸೇಟ್ ಸಭಾಂಗಣದಲ್ಲಿ ರಂಗೋಲಿ ಸ್ಪರ್ದೆ, ಕ್ರೀಡಾಭವನದಲ್ಲಿ ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ಪಂದ್ಯಾವಳಿ, ಗ್ರಾಮದೇವಿ ಮೈದಾನದಲ್ಲಿ ಕಬ್ಬಡ್ಡಿ ಪಂದ್ಯಾವಳಿ ಸಾವಿರಾರು ಪ್ರೇಕ್ಷಕರ ನಡುವೆ ಜರುಗಿದವು. ಇಲ್ಲಿಯ ಶ್ರೀ ಶಿವಾಜಿ ಮೈದಾನದಲ್ಲಿ ಹಾಕಲಾಗಿರುವ ಮಳಿಗೆಗಳಲ್ಲಿ ವಿವಿಧ ಇಲಾಖೆಗಳ ಯೋಜನೆಗಳನ್ನು ಸಾರುವ ರೂಪಕಗಳು, ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರು, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, ಅಕ್ರಮ ಸಕ್ರಮ ಸಮೀತಿಯ ಸುಭಾಷ ಕೊರ್ವೆಕರ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರೊಂದಿಗೆ ಸಚಿವರು ಸ್ಪರ್ದಾ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳ ಪ್ರತಿಭೆಯನ್ನು ವೀಕ್ಷಿಸಿದರು. ಉತ್ತಮ ಸ್ಪರ್ದೆ ನೀಡಿದರವರಿಗೆ ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಇನ್ನೂ ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಭಾರತೀಯ ನೌಕಾದಳದ 6ಜನರಿಂದ ಬಿಡಿಸಿದ ಚಿತ್ತಾಕರ್ಷಕ ಬೃಹತ್ ರಂಗೋಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದು ಅವರಿಗೆ ಎಸಿ ಶಿವಾನಂದ ಕರಾಳೆ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಸ್ಮರಣಿಕೆ ನೀಡಿ ಸನ್ಮಾನಿಸಿದರು.
Leave a Comment