ಹೊನ್ನಾವರ .ತಾಲೂಕಿನ ಟೊಂಕ ಕಾಸರಕೋಡ ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ದಶಮಾನೋತ್ಸವದ ಟೊಂಕ ಉತ್ಸವ ಕಾರ್ಯಕ್ರಮವು ಟೊಂಕದ ಶ್ರೀ ಜೈನ ಜಟಕೇಶ್ವರ ಮೈದಾನದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು.
ಸೈನಿಕರ ದಿನಾಚರಣೆಯಂದು ಜರುಗಿದ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಉದ್ಘಾಟಿಸಿ. ನಂತರ ಮಾತನಾಡಿದ ಅವರು ಶ್ರೀ ರಾಮಚಂದ್ರನ ಶರದಿಂದ ಶರಾವತಿ ನದಿ ಹುಟ್ಟಿದಳು ಎಂಬ ಪ್ರತೀತಿ ಇದೆ. ಈ ತಟದ ಮಣ್ಣಿನಲ್ಲಿ ಅನೇಕ ಕಲೆ ಹಾಗೂ ಕಲಾವಿದರು ಜನ್ಮ ತಾಳಿದ್ದು ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಣಪತಿ ಕಣ್ಣಿಯವರಂತಹ ಶ್ರೇಷ್ಠ ಯಕ್ಷಗಾನದ ಮೇರು ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಸೈನಿಕರ ದಿನಾಚರಣೆಯ ಈ ದಿನದಂದು ಸಾಮಾಜಿಕ ಪಿಡುಗಾದ ಮದ್ಯಪಾನವನ್ನು ನಿಷೇಧಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ಮಹಿಳೆಯರನ್ನು, ಸಾಧಕರನ್ನು ಮತ್ತು ಪ್ರತಿಭಾವಂತರನ್ನು ಕೂಡಾ ಪುರಸ್ಕರಿಸಿರುವುದು ಶ್ಲಾಘನೀಯ. ಸೈನಿಕರು ಭಾರತಾಂಬೆಯ ವೀರಪುತ್ರರು ಅವರೇ ನಮ್ಮ ನಿಜವಾದ ಹೀರೋಗಳು. ಈ ಭಾಗದಲ್ಲಿ ಮೀನುಗಾರಿಕೆ ಹೆಚ್ಚಾಗಿದ್ದು ನೀವೆಲ್ಲ ಸಂಘಟಿತರಾಗಿ ಇತರೇ ಸಮಾಜದವರಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಇತ್ತೀಚೆಗೆ ಅಗಲಿದ ಅಮಾಯಕ ಯುವಕ ಪರೇಶ ಮೇಸ್ತನ ಆತ್ಮಕ್ಕೆ ಶಾಂತಿ ಕೋರಿದರು ಹಾಗೂ ಆತನ ಸಾವಿಗೆ ನ್ಯಾಯ ದೊರೆಯಬೇಕೆಂದುರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ.ಜಿ.ಶಂಕರ ಮಾತನಾಡಿ ಕಾರ್ಯಕ್ರಮದ ಸಂಘಟಕರನ್ನು ಶ್ಲಾಘಿಸಿ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೂರ್ಯಕಾಂತ ಸಾರಂಗ, ವಿನಾಯಕ ಆಚಾರಿ, ಹನುಮಂತ ತಾಂಡೇಲ, ಮೊದಲಾದವರು ಮಾತನಾಡಿ ಟೊಂಕ ಉತ್ಸವದಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡ ಜೈನ ಜಟಕೇಶ್ವರ ಯುವಕ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಹಾಗೂ ಈ ಸಮಿತಿಯ ಅಧ್ಯಕ್ಷ ಭಾಸ್ಕರ ತಾಂಡೇಲ ಅವರು ಉತ್ಸಾಹಿಗಳು ಹಾಗೂ ಚಟುವಟಿಕೆಯುಳ್ಳವರಾಗಿದ್ದು ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮವನ್ನು ಇನ್ನೂ ಅದ್ಧೂರಿಯಾಗಿ ಜರುಗಿಸಬೇಕೆಂದು ಶುಭ ಕೋರಿದರು.
ಈ ವೇದಿಕೆಯಲ್ಲಿ ಮದ್ಯಪಾನ ನಿಷೇಧ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ಮಹಿಳೆಯರನ್ನು, ಸಾಧಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ ತಾಂಡೇಲ, ಭಾಸ್ಕರ ತಾಂಡೇಲ, ಮಹೇಶ ತಾಂಡೇಲ, ಪೀತಾಂಬರ ಜಾಧವ ಮುಂತಾದವರು ಉಪಸ್ಥಿತರಿದ್ದರು.
ನಂತರ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಹಾಗೂ ಮೂರು ಮುತ್ತು ತಂಡದಿಂದ ಹಾಸ್ಯಮಯ ನಾಟಕ ಜರುಗಿತು.
Leave a Comment