ಹೊನ್ನಾವರ: ತಾಲೂಕಿನ ಸಾಲಕೋಡ ಪಂಚಾಯತದ ಐಗೇರಮಕ್ಕಿ ಜನಸಾಲೆಯಿಂದ ಹೊಯ್ನೀರವರೆಗೆ ರಸ್ತೆ ಹಾಗು ಸೇತುವೆ ನಿರ್ಮಾಣ ಮತ್ತು ಮರು ಡಾಂಬರೀಕರಣ ಕಾಮಗಾರಿಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಗಾಂಧಿ ಪಥ ಗಾಂಧಿ ಗ್ರಾಮ ನಮ್ಮ ಗ್ರಾಮ ನಮ್ಮ ರಸ್ತೆ 4ನೇ ಹಂತ ಅಂದಾಜು 3 ಕೋಟಿ 21 ಲಕ್ಷ ಅನುದಾನದ ಕಾಮಗಾರಿಗೆ ಕುಮಟಾ ಮತ್ತು ಹೊನ್ನಾವರ ಶಾಸಕರು ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸದರಿ ರಸ್ತೆ ನಿರ್ಮಾಣದಿಂದ ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗಿದ್ದು ಕವಲಕ್ಕಿ ಹಡಿನಬಾಳ ಗೇರಸೊಪ್ಪ ಕಡೆ ಸಂಚರಿಸಲು ಅನುಕೂಲವಾಗುತ್ತದೆ. ಅಂದಾಜು 18 ಕಿ.ಮೀ ಸುತ್ತಿಕೊಂಡು ಸಂಚರಿಸುವುದು ತಪ್ಪಿದಂತಾಗಿದೆ ಎಂದು ತಿಳಿಸಿದರು. ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಡೆಸುವಂತೆ ಹಾಗು ಸಾರ್ವಜನಿಕರು ಕಾಮಗಾರಿಯ ಕುರಿತು ಯಾವುದೇ ದೂರು ಇದ್ದಲ್ಲಿ ತಿಳಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ತಾ.ಪಂ ಉಪಾಧ್ಯಕ್ಷ ಲಲತಾ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ಶಾಂತಿ ನಾಯ್ಕ, ಸದಸ್ಯರಾದ ನೇತ್ರಾವತಿ ಹೆಗಡೆ, ಮಾರಿ ಮುಕ್ರಿ, ಆಶಾ ಮಡಿವಾಳ, ಶಾಂತಲಾ ನಾಯ್ಕ, ಮಿನಿನ್ ಗೋನ್ಸಾಲ್ವಿಸ್, ಊರಿನ ಪ್ರಮುಖರಾದ ನಾಗಪ್ಪ ಹೆಗಡೆ, ರವಿ ಭಟ್ಟ, ರಾಘವೇಂದ್ರ ನಾಯ್ಕ, ಹಳದೀಪುರ ಗ್ರಾ.ಪಂ. ಸದಸ್ಯ ವಿನಾಯಕ ಶೇಟ್, ಮಾದೇವ ನಾಯ್ಕ ಕಿರಣ ಭಂಡಾರಿ, ಉಪಸ್ಥಿತರಿದ್ದರು.
Leave a Comment