ಹೊನ್ನಾವರ : “ನಮ್ಮ ಬಳಿ ಇರುವ ಹಣ, ಸಂಪತ್ತನ್ನು ಯಾರು ಬೇಕಾದರೂ ಕಿತ್ತು ಕೊಳ್ಳಬಹುದು. ಆದರೆ ನಾವು ಗಳಿಸಿದ ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ ಇವರು ಹೇಳೀದರು.
ತಾಲೂಕಿನ ಕಾಸರಕೋಡ, ಟೊಂಕಾ ಉತ್ಸವದ ದಶಮಾನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೈನ ಜಟಕೇಶ್ವರ ಯುವಕ ಸಮಿತಿಯವರು ಊರಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುತ್ತಾ ಬಂದಿದ್ದು ಇದನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದರು. ಟೊಂಕಾ ಊರಿನ ಮಹಿಳೆಯರು ಹಾಗೂ ಇಲ್ಲಿಯ ಸಂಘ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಸಂಘವನ್ನು ಹುಟ್ಟು ಹಾಕುವುದು ಸುಲಭ, ಆದರೆ ಉತ್ತಮ ದೂರ ದೃಷ್ಠಿಯನ್ನು ಇಟ್ಟುಕೊಂಡು ಹೋಗುವುದು ಮುಖ್ಯ. ಟೊಂಕಾ ಉತ್ಸವ ದಶಮಾನೋತ್ಸವವನ್ನು ಕಂಡಿದೆ. ಇದಕ್ಕೆ ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿಯನ್ನು ಅಭಿನಂದಿಸುತ್ತೇನೆ. ಈ ಸಂಘ ಕೇವಲ ಸಾಂಸ್ಕ್ರತಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರದೇ ಕ್ರೀಡೆ, ಶಿಕ್ಷಣ, ಸಾಮಾಜಿಕ ಜೀವನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಗೌರವಿಸುವುದನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕಾದ ಸಂಗತಿ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸುನೀಲ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೈನ ಜಟಕೇಶ್ವರ ಯುವ ಸಮಿತಿಯವರು ಶ್ರೀ ಜೈನ ಜಟಕೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 50 ಸಾವಿರ ರೂ ಚೆಕ್ ಅನ್ನು ನೀಡಿದರು. ವೇದಿಕೆಯ ಮೇಲೆ ಗ್ರಾ.ಪಂ ಉಪಾಧ್ಯಕ್ಷ ಜಗದೀಶ ತಾಂಡೇಲ, ಅಧ್ಯಕ್ಷರಾದ ಭಾಸ್ಕರ ತಾಂಡೇಲ, ಗೌರವಾಧ್ಯಕ್ಷ ರಮೇಶ ತಾಂಡೇಲ, ಬೋಟ ಮಾಲಕರಾದ ಶೇಷಗಿರಿ ತಾಂಡೇಲ, ಹಾಗೂ ಹತ್ತು ಸಮಸ್ತರ ಮುಖಂಡರಾದ ಸುಬ್ರಾಯ ಅನಂತ ತಾಂಡೇಲ ಮುಂತಾದವರು ಉಪಸ್ಥಿತರಿದ್ದರು.
Leave a Comment