ಹೊನ್ನಾವರ . ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ನೇತಜಿ ಸುಭಾಷ್ಚಂದ್ರ ಭೋಸರ ಜನ್ಮ ದಿನದ ಪ್ರಯುಕ್ತ ಶಾರೀರಿಕ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು. ಪುರ್ವಾಹ್ನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಪರಾಹ್ನ ಅವಧಿಯಲ್ಲಿ ಯೋಗಾಸನ ತರಬೇತಿ ನೀಡಲಾಯಿತು. ಯೋಗ ಶಿಕ್ಷಕ ಕೆ.ಡಿ ನಾಯ್ಕ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳಂತಹ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ಸಹಿತ ಯೋಗ ಮತ್ತು ಆಯುರ್ವೇದದ ಮಹತ್ವವನ್ನು ವಿವರಿಸಿದರು. ಶಾಲೆಯಲ್ಲಿ ರಥಸಪ್ತಮಿ ನಿಮಿತ್ತ ಸೂರ್ಯನಮಸ್ಕಾರ ಯಜ್ಞ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಪೂರ್ವಭಾವಿಯಾಗಿ ವಿದ್ಯಾರ್ಥಿಗಳು ತಾಲೀಮಿನಲ್ಲಿ ಪಾಲ್ಗೊಂಡರು. ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ನೇತಜಿಯವರ ಆದರ್ಶಗಳನ್ನು ತಿಳಿಸಿ ಕ್ರೀಡಾ ದಿನದ ಮಹತ್ವವನ್ನು ವಿವರಿಸಿದರು. ದೈಹಿಕ ಶಿಕ್ಷಕರಾದ ಎಲ್.ಎಚ್. ಚಂದಾವರಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಯಶ್ವಂತ ಮೇಸ್ತ ವಂದಿಸಿದರು. ಶಿಕ್ಷಕ ರಾಘವೇಂದ್ರ ಹೆಗಡೆ ನಿರೂಪಿಸಿದರು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ತಾಲೂಕಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ ಉಪಸ್ಥಿತರಿದ್ದರು.
Leave a Comment