ಹೊನ್ನಾವರ: ಶಾಸಕಿ ಶಾರದಾ ಶೆಟ್ಟಿ ಅವರು ಪರೇಶ ಪ್ರಕರಣವನ್ನು ತಾನು ಒತ್ತಡ ಹೇರಿರುವುದರಿಂದ ರಾಜ್ಯ ಸರ್ಕಾರ ಡಿ. 13 ರಂದು ಸಿಬಿಐಗೆ ವಹಿಸಿದ್ದು, ಇದರ ತನಿಖೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು, ಇದಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒತ್ತಡ ಹೇರಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಘಟಕದ ಸದಸ್ಯ ಸೂರಜ ನಾಯ್ಕ ಸೋನಿ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಚಿವ ಅನಂತಕುಮಾರ ಹೆಗಡೆ ಹಿಂದುಗಳ ರಕ್ಷಣೆಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಶಾಸಕಿ ಕೇಂದ್ರ ಸಚಿವರ ಬಗ್ಗೆ ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ರಾಜಕಾರಣಕ್ಕಾಗಿ ಮಾತ್ರ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು. ಕುಮಟಾ ಗಲಭೆಯಲ್ಲಿ ಅನೇಕ ಅಮಾಯಕರನ್ನು ಬಂಧಿಸಲಾಗಿದೆ. ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದವರನ್ನೂ ಬಂಧಿಸಿದ್ದಾರೆ. ಅವರ ಬಿಡುಗಡೆಗೆ ಏನೂ ಕ್ರಮ ಕೈಗೊಳ್ಳದ ಶಾಸಕರು ಈಗ ಸಚಿವರು ಸಿಬಿಐ ತನಿಖೆಗೆ ಒತ್ತಡ ಹೇರಬೇಕೆಂದು ಹೇಳುತ್ತಿದ್ದಾರೆ. ಪರೇಶ ಮೇಸ್ತ ಸಾವು ಸಂಭವಿಸಿ ಒಂದೂವರೆ ತಿಂಗಳು ಕಳೆದರೂ ಅವರ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುವಲ್ಲಿ ಕಾಳಜಿ ತೋರದ ಶಾಸಕಿ ಶಾರದಾ ಶೆಟ್ಟಿ ಈಗ ಬಂದು ಬಾಲಿಷವಾಗಿ ಮೊಸಳೆ ಕಣ್ಣೀರು ಹಾಕುವ ಹೇಳಿಕೆ ನೀಡುತ್ತಿದ್ದಾರೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪರೇಶ ಸಾವು ಸಹಜ ಸಾವು ಎಂದು ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಏನೂ ಮಾತನಾಡದ ಶಾಸಕಿ ಶಾರದಾ ಶೆಟ್ಟಿ ಅವರು ಈಗ ಪಾರದರ್ಶಕ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ವೈದ್ಯ ಶಂಕರ್ ಬಕ್ಕಣ್ಣವರ್ ಈಗ ನಾಪತ್ತೆಯಾಗಿದ್ದಾರೆ. ಮಹತ್ವದ ಸಾಕ್ಷ್ಯಗಳನ್ನು ನಾಶ ಮಾಡಿ ಪ್ರಕರಣ ಸಿಬಿಐಗೆ ವಹಿಸುವ ಹುನ್ನಾರ ನಡೆದಿದೆ ಎಂಬ ಶಂಕೆ ಇದೆ ಎಂದು ಆರೋಪಿಸಿದರು. ಪರೇಶನ ಕುಟುಂಬಕ್ಕೆ ಪರಿಹಾರವಾಗಿ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದೆವು. ಆದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೇವಲ 5 ಲಕ್ಷ ರೂ. ಮಾತ್ರ ಪರಿಹಾರ ನೀಡಲಾಗಿದೆ. ಜಿಲ್ಲಾಡಳಿತದಿಂದ ನೀಡಬೇಕಾದ ಪರಿಹಾರ ಈವರೆಗೂ ನೀಡಿಲ್ಲ. ಮಂಗಳೂರಿನಲ್ಲಿ ದೀಪಕ್ ಸಾವಿನ ಪ್ರಕರಣದಲ್ಲಿ 10 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ತಕ್ಷಣವೇ ನೀಡಿದೆ. ಆದರೆ ಪರೇಶನ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಹಣ ಕೈ ಸೇರಲು ವಿಳಂಬವಾಗಿದೆ. ಆದರೆ ಪರೇಶ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣವನ್ನು ಸಿಬಿಐ ಅಥವಾ `ಎನ್ಐಎ’ಗೆ ವಹಿಸಬೇಕೆಂದು ಆಗ್ರಹಿಸಲಾಗಿತ್ತು. `ಎನ್ಐಎ’ ತನಿಖೆಯಾದರೆ ಪರೇಶ ಸಾವಿನ ಆರೋಪಿಗಳು ಭಯೋತ್ಪಾದಕರ ಜೊತೆಗೆ ನಂಟಿರುವುದು ಬಯಲಾಗುತ್ತದೆ. ಪ್ರಕರಣದಲ್ಲಿ ಪರೇಶ ತಂದೆ ಐದು ಜನರ ಮೇಲೆ ದೂರು ನೀಡಿದ್ದರೂ ಅದರಲ್ಲಿ ನಾಲ್ವರನ್ನು ಇನ್ನೂ ಬಂಧಿಸಿಲ್ಲ. ಇವರ ಮೇಲೆ 302 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರು ಈ ಬಗ್ಗೆ ಮಾತನಾಡಿಲ್ಲ, ಆರೋಪಿಗಳನ್ನು ಬಂಧಿಸುವಂತೆ ಒತ್ತಡ ತರಲು ವಿಫಲರಾಗಿದ್ದಾರೆ. ಶಾಸಕರು ಪರೇಶ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಿಲ್ಲ. ಅವರು ಕುಮಟಾ ಉತ್ಸವದಲ್ಲಿ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು. ಪರೇಶ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲು ಮತ್ತು ಪರೇಶ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡುವ ಸಂಕಲ್ಪ ನಿಮಗಿದೆಯೇ, ಸಿಬಿಐ ತನಿಖೆಯಲ್ಲಿ ನಿಮಗೆ ವಿಶ್ವಾಸವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೂರಜ್ ನಾಯ್ಕ ಸೋನಿ `ಭಯೋತ್ಪಾದಕರಿಂದ ಹತ್ಯೆಯಾದಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯ. ಇದಕ್ಕೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು. ಪರೇಶ ಕುಟುಂಬ ರಾಜಕೀಯ ಆಸಕ್ತಿ ಹೊಂದಿದ್ದರೆ. ಅವರೊಂದಿಗೆ ಮಾತುಕತೆ ನಡೆಸಿ ರಾಜಕೀಯ ಸ್ಥಾನಮಾನ ನೀಡಲು ಪಕ್ಷದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ, ವಿನೋದ ನಾಯ್ಕ ರಾಯಲಕೇರಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ದತ್ತಾತ್ರಯ ಮೇಸ್ತ, ಉಮೇಶ ನಾಯ್ಕ, ಗಣಪತಿ ನಾಯ್ಕ, ಎಂ.ಎಸ್.ಹೆಗಡೆ ಇತರರು ಉಪಸ್ಥಿತರಿದ್ದರು.
Leave a Comment