ಹೊನ್ನಾವರ : ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು. ನಮ್ಮ ಭಾರತೀಯ ಪರಂಪರೆ ಹೇಳುವುದು ಅದನ್ನೆ. ವಸುದೈವ ಕುಟುಂಬಕಂ ಎಂಬುದರ ಸಾರವನ್ನು ನಾವು ಅರಿಯಬೇಕು. ಅಂದಾಗ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ ನುಡಿದರು.
ಅವರು À ಮುಗ್ವಾದ ನಾಮಧಾರಿ ಅಭಿವೃದ್ದಿ ಸಂಘದ ಸಭಾಭವನದ ಶಿಲನ್ಯಾಸ ನೆರವೇರಿಸಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡುತ್ತಿದ್ದರು.
ಧರ್ಮದ ಆಧಾರದ ಮೇಲೆ, ಜಾತಿ ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಮುಂದಾದ ದೇಶಗಳ ಕಥೆ ಏನಾಗಿದೆ ಎನ್ನುವುದು ಇತಿಹಾಸದಲ್ಲಿದೆ. ಅದು ನಮ್ಮ ಕಣ್ಣೆದುರು ಈಗಲೂ ನಡೆಯುತ್ತಾ ಇದೆ. ಸನಾತನ ಹಿಂದೂ ಧರ್ಮ ಹೇಳುತ್ತಿರುವುದು ಸಾವೃತ್ರಿಕ ಸತ್ಯ. ನಿತ್ಯ ಸತ್ಯ. ಜಾತಿ ಸಂಘಟನೆಗಳು ಇತರ ಜಾತಿಯವರನ್ನು ಒಟ್ಟಾಗಿ ಒಯ್ಯುವ ಪ್ರಕ್ರಿಯೆ ಆರಂಭವಾಗಬೇಕು. ಎಲ್ಲಾ ಜಾತಿಗಳು ಒಂದು ದೇಹದ ವಿವಿಧ ಅಂಗಗಳಂತೆ. ಒಂದು ಅಂಗ ಕೆಲಸ ಮಾಡದಿದ್ದರೆ ಆ ದೇಹವೇ ಊನದಂತೆ. ಅದೇ ರೀತಿ ಯಾವುದೇ ಒಂದು ಜಾತಿ, ಜನಾಂಗ ಏಳ್ಗೆಯನ್ನು ಸಾಧಿಸದೇ ಇದ್ದರೆ ಅದು ದೇಶಕ್ಕೆ ಮಾರಕ. ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವವರ ಕುರಿತು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಮುಗ್ವಾ ನಾಮಧಾರಿ ಸಮಾಜ ತನ್ನ ಪರಿಸರದಲ್ಲಿ ಬರುವ ಇತರ ಜಾತಿಯವರ ಪ್ರೀತಿ ವಿಶ್ವಾಸ ಗಳಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ದೇವರ ಸೇವೆ ಮಾಡಿದಂತೆ ಎಂದರು.
ಶಾಸಕ ಮಂಕಾಳ ವೈದ್ಯ ಮಾತನಾಡಿ ಸಂಘವು ತನ್ನ ಜಾತಿಯನ್ನಷ್ಟೇ ದೃಷ್ಠಿಯಲ್ಲಿಟ್ಟು ಅಭಿವೃದ್ದಿ ಕಾರ್ಯ ನಡೆಸದೇ ಎಲ್ಲಾ ಜಾತಿಯವರಿಗೆ ಅನುಕೂಲವಾಗುವ ಸಾರ್ವಜನಿಕ ಕುಡಿಯುವ ನೀರು, ರಸ್ತೆ ಕಾರ್ಯದಲ್ಲಿ ಮುಂದಾಗಿರುವುದಲ್ಲದೇ ಅನಾರೋಗ್ಯ ಪೀಡಿತ, ಶಿಕ್ಷಣಕ್ಕೆ ಆರ್ಥಿಕ ನೆರವು ಅವಶ್ಯವಿರುವ ಇತರ ಸಮಾಜದವರಿಗೂ ನೆರವು ನೀಡಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಇತರರ ಕಣ್ಣು ತೆರೆಸುವಂತಾಗಿದೆ ಎಂದರು.
ಶಾಸಕಿ ಶಾರದಾ ಶೆಟ್ಟಿ ಮಾತನಾಡಿ ಸರ್ಕಾರ ಮಾಡಬಹುದಾದ ಕಾರ್ಯಗಳನ್ನು ಸಂಘಟನೆ ಮಾಡುತ್ತಿದೆ. ಸಂಘದ ಎಲ್ಲಾ ಕಾರ್ಯಗಳಿಗೆ ತಾನು ಸಹಕರಿಸುವುದಾಗಿ ಹೇಳಿದರು.
ಉದ್ಯಮಿ ಜೆ.ಡಿ.ಎಸ್. ಮುಖಂಡ ಮಂಜುನಾಥ ಎಲ್. ನಾಯ್ಕ ಅಂಕೋಲಾ ಮಾತನಾಡಿ ಸರ್ವರ ಹಿತ ಬಯಸಿ ಶತಮಾನಗಳಿಂದ ಸಮಾಜಮುಖಿ ಸೇವೆಯಲ್ಲಿ ಸದ್ದಿಲ್ಲದೇ ತೊಡಗಿಕೊಂಡ ಸಂಘಟನೆಯನ್ನು ಸರ್ಕಾರ ಗುರುತಿಸಬೇಕಿತ್ತು. ಸಂಘ ಹಮ್ಮಿಕೊಳ್ಳುವ ಎಲ್ಲಾ ಚಟುವಟಿಕೆಗಳಲ್ಲಿ ತನ್ನ ಬೆಂಬಲ ಇರುವುದಾಗಿ ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಜೆ.ಡಿ. ನಾಯ್ಕ, ಹಿರಿಯ ವಕೀಲ ಆರ್.ಎಸ್. ಕಾಮತ, ಉದ್ಯಮಿ ವೆಂಕಟರಮಣ ಹೆಗಡೆ, ಸೂರಜ್ ನಾಯ್ಕ ಸೋನಿ, ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ನಾಗರಾಜ ನಾಯಕ ತೊರ್ಕೆ, ಪಾದರ್ ರೇವರೆಂಡ್ ಗಾರ್ಬಿಯಲ್ ಲೋಪಿಸ್ ಹಾಗೂ ಇನ್ನೀತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯದಲ್ಲಿ ಸಹಕರಿಸಿದ ಉದ್ಯಮಿ ಕಾಂತಪ್ಪ ಶ್ಯಾನಭಾಗ ಇವರನ್ನು ಶ್ರೀಗಳು ಫಲ-ಪುಷ್ಪ ನೀಡಿ ಶಾಲು ಹೊದಿಸಿ ಆಶೀರ್ವದಿಸಿದರು.
ವೇದಿಕೆಯಲ್ಲಿ ಕ.ಸ.ಪಾ. ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ ಕುಮಟಾ, ಬಿ.ಜೆ.ಪಿ. ಮುಖಂಡ ಎಮ್.ಜಿ. ನಾಯ್ಕ, ಚಂದ್ರಶೇಖರ ಗೌಡ, ನಿವೃತ್ತ ಸೇನಾ ಸಿಬ್ಬಂದಿ ವಾಮನ ನಾಯ್ಕ, ಉದ್ಯಮಿ ಸುರೇಶ ಶೆಟ್ಟಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಪೂರ್ಣಕುಂಭದೊಂದಿಗೆ ಸ್ವಾಮಿಗಳನ್ನು ಸ್ವಾಗತಿಸಲಾಯಿತು. ಸಂಘದ ಅಧ್ಯಕ್ಷ ಎನ್.ಎಮ್. ನಾಯ್ಕ ಗಿರೀಜಾ ನಾಯ್ಕ ದಂಪತಿಗಳು ಶ್ರೀಗಳನ್ನು ವೇದಿಕೆಗೆ ಬರಮಾಡಿಕೊಂಡರು. ಸ್ಥಳದಾನಿ ಸೀತಾರಾಮ ನಾಯ್ಕ ದಂಪತಿಗಳು ಶ್ರೀಗಳ ಪಾದ ಪೂಜೆ ನೆರವೇರಿಸಿದರು.
ಸಂಘದ ಅಧ್ಯಕ್ಷ ಎನ್.ಎಂ. ನಾಯ್ಕ ಶತಮಾನದ ಹಿಂದಿನ ಜಾತಿ ಕೂಟದ ಕೋಲ್ಕಾರ, ಬುದವಂತ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡಿ ಸಂಘವನ್ನು ನೋಂದಾಯಿಸಿ ಸಂಘ ನಡೆದು ಬಂದ ಕಾರ್ಯ ವೈಖರಿಯನ್ನು ಜಾತ್ಯಾತೀತ ಚಟುವಟಿಕೆಗಳನ್ನು ಸರ್ವರಲ್ಲಿ ಸಹಬಾಳ್ವೆಯರ ಜೊತೆಗೆ ಸಹಕಾರಿ ಜೀವನದ ಮಾರ್ಗದಲ್ಲಿ ಸಾಗುತ್ತಿರುವ ರೀತಿಯನ್ನು ಪ್ರಸ್ತುತಪಡಿಸಿ ಸ್ವಾಗತಿಸಿದರು. ಗಣೇಶ ನಾಯ್ಕ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಗೋವಿಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
————————————- —————————–
ಸ್ವಾಮಿಗಳು ಹೇಳಿದ ಕಥೆ: ಆರೋಗ್ಯವಂತ ಕುದುರೆ ಸಾಕಿದ ವ್ಯಕ್ತಿಯೊಬ್ಬನಿಗೆ ಕುದುರೆ ಕುಂಟುತ್ತಾ ನಡೆಯುವುದು ಯಾಕೆಂದು ತಿಳಿಯಲಿಲ್ಲ. ಈ ಬಗ್ಗೆ ದಾರಿಯಲ್ಲಿ ಹೋಗುತ್ತಿರುವ ಸಾಧುವೊಬ್ಬರ ಬಳಿ ವ್ಯಕ್ತಿ ತನ್ನ ನೋವನ್ನು ತೋಡಿಕೊಂಡಾಗ ಸಾದು ಆರೋಗ್ಯವಾಗಿದ್ದರೂ ಕುಟುಂತ್ತಿರುವ ಕುದುರೆಯ ಕಾಲುಗಳನ್ನು ಪರೀಕ್ಷಿಸಿ ಸಂಶಯಗೊಂಡು ಕುದುರೆಯ ಪರೀಕ್ಷೆಗಾಗಿ ತಾನೇ ಸ್ವತಃ ಮೇವನ್ನು ಹಿಡಿದು ಮುಂದೆ ನಡೆದಾಗ ಕುದುರೆ ಸರಿಯಾಗಿ ಹೆಜ್ಜೆ ಇಟ್ಟು ಮೇವನ್ನು ಹಿಡಿದ ಸಾಧುವನ್ನು ಹಿಂಬಾಲಿಸಿತ್ತು. ವಿಷಯ ಏನೆಂದು ಅರಿಯದ ವ್ಯಕ್ತಿ ಸಾಧುವಿನ ಬಳಿ ಕೇಳಿದಾಗ ಸಾಧು ಕುದುರೆಗೆ ಮೇವನ್ನು ಹಾಕುವ ವ್ಯಕ್ತಿ ನಿತ್ಯವೂ ಕುಂಟುತ್ತಾ ಮುಂದೆ ಮುಂದೆ ಹೋದಿದ್ದರಿಂದ ಕುದುರೆಯು ಕೂಡ ಕುಂಟುತ್ತಾ ನಡೆಯುವುದು ನಿಜವಾದ ನಡಿಗೆ ಎಂದು ತಿಳಿದು ಕುಂಟುತ್ತಾ ಸಾಗಿದೆ ಎಂದು ವ್ಯಕ್ತಿಯಲ್ಲಿರುವ ಸಂಶಯವನ್ನು ದೂರ ಮಾಡಿದರು. ಅದೇ ರೀತಿ ಸಮಾಜದಲ್ಲಿ ಜನಪ್ರತಿನಿಧಿ ಆದವರು ವಿವಿಧ ಪಕ್ಷದ, ಜಾತಿಯ ನಾಯಕರು, ಧರ್ಮದ ಗುರುಗಳು ಎನಿಸಿಕೊಂಡವರು ಸರಿಯಾದ ಮಾರ್ಗದಲ್ಲಿ ತಮ್ಮ ನಂಬಿದವರನ್ನು ಕರೆದೊಯ್ಯಬೇಕು. ಆಗ ನಿಜವಾದ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು.
Leave a Comment