ಹಳಿಯಾಳ:- ಸದ್ಯದ ಪರಿಸ್ಥಿತಿಯಲ್ಲಿ ತತ್ವ ಸಿದ್ದಾಂತಗಳ ಮೇಲೆ ರಾಜಕಾರಣ ನಡೆಯುತ್ತಿಲ್ಲ ಬದಲಾಗಿ ರಾಜಕೀಯ ಕ್ಷೇತ್ರವೆಂಬುದು ಹೂಡಿಕೆಯ(ಇನ್ವೆಸ್ಟಮೆಂಟ್) ಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಪಕ್ಷ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿ ಈವರೆಗೆ ಈ ಮತಕ್ಷೇತ್ರದಿಂದ ಯಾವುದೇ ಅಭ್ಯರ್ಥಿ ಘೊಷಣೆ ಮಾಡಲಾಗಿಲ್ಲ, ಹಳಿಯಾಳ ಕ್ಷೇತ್ರದಿಂದ ದಾಂಡೇಲಿಯ ಹಿರಿಯ ಜೆಡಿಎಸ್ ಮುಖಂಡ ಟಿ.ಆರ್.ಚಂದ್ರಶೇಖರ, ಹಳಿಯಾಳದ ಮರಾಠಾ ಸಮಾಜದ ಮುಖಂಡ ಎನ್.ಎಸ್.ಜಿವೋಜಿ, ಪುರಸಭೆ ಸದಸ್ಯ ಸುಬಾನಿ ಹುಬ್ಬಳ್ಳಿ, ಅಲ್ಪಸಂಖ್ಯಾತ ತಾಲೂಕಾ ಘಟಕ ಅಧ್ಯಕ್ಷ ಹಾಜಿ ಜಮೀಲ್ ತಂಬೋಲಿ, ದಾವಲಸಾಬ ಅಂಗಡಿ ಹಾಗೂ ಜೆಡಿಎಸ್ ತಾಲೂಕಾದ್ಯಕ್ಷ ಕೈತಾನ ಬಾರಬೋಜಾ, ಮುಖಂಡ ಕೆ.ಆರ್.ರಮೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದು ಇಂದು ತಮಗೆ ಅರ್ಜಿ ಸಲ್ಲಿಸಿದ್ದಾರೆಂದರು. ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿಂದಾಗಿ ಉಂಟಾಗಿದ್ದ ಗೊಂದಲ ನಿವಾರಿಸಿ ಎಲ್ಲರನ್ನೂ ಒಂದೆ ವೇದಿಕೆಗೆ ತರುವಂತೆ ಎಲ್ಲರೂ ಕೂಡಿಕೊಂಡು ಪಕ್ಷ ಸಂಘಟನೆ ಮಾಡಿ ಒಗ್ಗಟ್ಟಾಗಿ ಕೆಲಸ ಮಾಡಲು ಸೂಚಿಸುವಂತೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಮಗೆ ನೀಡಿದ ಆದೇಶದಂತೆ ಇಂದು ಹಳಿಯಾಳಕ್ಕೆ ಆಗಮಿಸಿ ಪಕ್ಷದ ಮುಖಂಡರ ಸಭೆ ನಡೆಸಲಾಗಿದ್ದು ಯಾರಿಗೆ ಟಿಕೆಟ್ ದೊರೆತರು ಪ್ರಾಮಾಣಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಹಾಗೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದಾಗಿ ಮುಖಂಡರು ಹೇಳಿದ್ದಾರೆಂದು ನಾಯ್ಕ ತಿಳಿಸಿದರು. ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿಯ ಚಿತ್ರಣ, ಸಭೆಗಳಲ್ಲಿ ಬಂದ ಅನಿಸಿಕೆ-ಅಭಿಪ್ರಾಯಗಳನ್ನು ಕುಮಾರಸ್ವಾಮಿಯವರಿಗೆ ತಿಳಿಸಲಾಗುವುದು ಅವರು ಮುಂದಿನ 15 ದಿನಗಳಲ್ಲಿ ಅಭ್ಯರ್ಥಿ ಘೊಷಣೆ ಮಾಡಲಿದ್ದಾರೆಂದು ಜಿಲ್ಲಾದ್ಯಕ್ಷರು ಸ್ಪಷ್ಟಪಡಿಸಿದರು. ಹಳಿಯಾಳ ಕ್ಷೇತ್ರದ ಟಿಕೆಟ್ಗಾಗಿ ಜೆಡಿಎಸ್ನ ಓರ್ವ ರಾಜಕಾರಣಿ ಕೊಟಿಗಟ್ಟಲೇ ಹಣ ನೀಡಿ ಟಿಕೆಟ್ ಪಡೆದುಕೊಂಡು ಬರುವುದಾಗಿ ಹೇಳುತ್ತಿರುವ ಬಗ್ಗೆ ಸಾರ್ವಜನೀಕ ವಲಯದಲ್ಲಿ ತೀವೃ ಚರ್ಚೆಯಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಅಧ್ಯಕ್ಷರು ಸದ್ಯದ ಜನರ ಮಾನಸಿಕ ಸ್ಥಿತಿ ಬದಲಾಗಿದ್ದು ರಾಜಕಾರಣವು ಬದಲಾಗಿದೆ ಹಣ ಕೊಟ್ಟು ಟಿಕೆಟ್ ತರುವ ಬಗ್ಗೆ ಎಲ್ಲ ಪಕ್ಷಗಳಲ್ಲೂ ಕೇಳಿ ಬರುವ ಮಾತು ಎಂದು ಪ್ರಶ್ನೇಗೆ ಸಮರ್ಥನೆ ಮಾಡಿಕೊಂಡರು. ರಾಜ್ಯಾದ್ಯಂತ ಕೃತಿ ಸುಟ್ಟು ಪ್ರತಿಭಟಿಸಲಾಗುವುದು:- ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ತಮ್ಮ ಆತ್ಮಚರಿತ್ರೆಯಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ರವರ ಬಗ್ಗೆ ಸುಳ್ಳು ವಿಷಯಗಳನ್ನು ಪ್ರಸ್ತಾಪಿಸಿದ್ದು ದುಃಖದ ವಿಷಯ ಆತ್ಮಕಥೆ ಎಂಬುದು ಯಾರ ಆತ್ಮವನ್ನು ನೊಯಿಸಲು ಬರೆಯಬಾರದು ಎಂದ ಬಿ.ಆರ್.ನಾಯ್ಕ ಪೂಜಾರಿಯವರ ಈ ರೀತಿ ನಡೆ ಬಂಗಾರಪ್ಪ ಅಭಿಮಾನಿಗಳ ಆಕ್ರೊಶಕ್ಕೆ ಕಾರಣವಾಗಿದ್ದು ಅವರು ಬರೆದಂತಹ ಆತ್ಮಕಥೆಯ ಕೃತಿಗಳನ್ನು ರಾಜ್ಯಾದ್ಯಂತ ಸುಟ್ಟು ಪ್ರತಿಭಟನೆ ನಡೆಸಲಾಗವುದು ಎಂದು ಹೇಳಿದರು. ಸುದ್ದಿಗೊಷ್ಠಿಯಲ್ಲಿ ಕ್ಷೇತ್ರಾಧ್ಯಕ್ಷ ಎನ್.ಎಸ್.ಜಿವೋಜಿ, ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ, ಮುಖಂಡ ಕೆ.ಆರ್.ರಮೇಶ, ರೋಷನ ಬಾವಾಜಿ, ಬಡೇಸಾಬ ಕಕ್ಕೇರಿ, ಸುಬಾನಿ ಹುಬ್ಬಳ್ಳಿ, ಜಮೀಲ್ ತಂಬೋಲಿ ಇತರರು ಇದ್ದರು.
Leave a Comment