ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯೆಡೆಗೆ “ಭೂ ದೃಶ್ಯ ಯಾತ್ರೆ – 2018” ಎಂಬ ಒಂದು ವಿಶಿಷ್ಠ ಕಾರ್ಯಕ್ರಮವನ್ನು ಪರಿಸರಾಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಹಾಗೂ ಸಂಘ ಸಂಸ್ಥೆಗಳ ಸದಸ್ಯರುಗಳಿಗೆ ಆಯೋಜಿಸಲಾಗಿದ್ದು ,
ಅದರ ಉದ್ಘಾಟನೆಯನ್ನು ಕಾಸರಕೋಡ ಇಕೋ ಪಾರ್ಕನಲ್ಲಿ ಮಂಕಾಳು ಎಸ್. ವೈದ್ಯ, ಶಾಸಕರು, ಭಟ್ಕಳ ಮತ್ತು ಹೊನ್ನಾವರ ಕ್ಷೇತ್ರ ಇವರು ಯಾತ್ರೆಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿ, ಭಾಗವಹಿಸಿದ ಎಲ್ಲಾ ಪ್ರಕೃತಿ ಆರಾಧಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಸಂತ ರೆಡ್ಡಿ ಕೆ. ವಿ. ಮಾನ್ಯ ಉಪ ಅರಣ್ಯ ಸಮರಕ್ಷಣಾಧಿಕಾರಿಗಳು ಹೊನ್ನಾವರ ವಿಭಾಗರವರು ಮಾತನಾಡಿ ಭೂ-ದೃಶ್ಯ ಯಾತ್ರೆಯ ಆಯೋಜನೆಯ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಹೊನ್ನಾವರ ಉಪ ವಿಬಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್, , ಹೊನ್ನಾವರ ವಲಯ ಅರಣ್ಯಾಧಿಕಾರಿ ರವೀಂದ್ರ ಪಿ.ಸಿ. , ಗೇರುಸೊಪ್ಪಾ ವಲಯ ಅರಣ್ಯಾಧಿಕಾರಿ ಪಿ. ಎಸ್, ಗೊಂಡ, ಹಾಗೂ ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ದಿನಾಂಕ: 10-02-2018 ಹಾಗೂ 11-02-2018, ಎರಡು ದಿನಗಳ ಕಾಲ ನಡೆಯಲಿದ್ದು, ಕಾಸರಕೋಡಿನಿಂದ ಆರಂಭಗೊಂಡು ದೋಣಿಯ ಮೂಲಕ ಶರಾವತಿ ನದಿಯಲ್ಲಿ ಸಂಚರಿಸಿ ಕಾಂಡ್ಲ ವನ ಹಾಗೂ ರಮ್ಯವಾದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಬೇರಂಕಿ ಮಾರ್ಗವಾಗಿ ಹೈಗುಂದದವರೆಗೆ ತಲುಪಿ ನಂತರ ರಸ್ತೆ ಮಾರ್ಗವಾಗಿ ಗೇರುಸೊಪ್ಪ ಸಿಂಗಳಿಕ ಇಕೋ ಪಾರ್ಕನಲ್ಲಿ ತಂಗಲು ಉದ್ದೇಶಿಸಿದ್ದು, ಮರುದಿನ ಬೆಳಿಗ್ಗೆ ಅರಣ್ಯದಲ್ಲಿ ಪಕ್ಷಿ ವೀಕ್ಷಣೆ ನಂತರ ಚಾರಣ ಮುಂತಾದ ಚಟುವಟಿಕೆಗಳನ್ನು ಒಳಗೊಂಡಿದ್ದು, ಈ ಯಾತ್ರೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಂಘ ಸಂಸ್ಥೆಗಳ ಸದಸ್ಯರುಗಳು ಸೇರಿ ಒಟ್ಟೂ 60 ಸದಸ್ಯರು ಭಾಗವಹಿಸಿರುತ್ತಾರೆ. ಶಿಬಿರಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ಊಟ ಹಾಗೂ ವಸತಿ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದ್ದು, ಭಾಗವಹಿಸಿದವರು ಅತ್ಯಂತ ಆಸಕ್ತಿಯಿಂದ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.
Leave a Comment