ಹಳಿಯಾಳ: ರಾಜ್ಯದ ನಾನಾ ಕಡೆಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ 44 ಕೈಗಾರಿಕಾ ಯೋಜನೆ ಪ್ರಸ್ತಾವನೆಗಳಿಗೆ ಶುಕ್ರವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಹಳಿಯಾಳ ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 2061.32 ಕೋಟಿ ರೂಪಾಯಿ ಮೊತ್ತದ ಬೃಹತ್ ಹೂಡಿಕೆಯಾಗಲಿದ್ದು, 14,303 ಉದ್ಯೋಗಗಳು ಸೃಷ್ಟಿಯಾಗಲಿವೆ. ಮಾರ್ಚ್ 2 ಮತ್ತು 23ರಂದು ನಡೆದ ಸಮಿತಿಯ 109 ಮತ್ತು 110ನೇ ಸಭೆಗಳಲ್ಲಿ ಈ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಗಳು ಏರೋಸ್ಪೇಸ್, ಆಟೋಮೊಬೈಲ್, ಎಂಜಿನಿಯರಿಂಗ್, ಮೂಲಸೌಲಭ್ಯ, ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್, ಪ್ಲಾಸ್ಟಿಕ್, ಸಕ್ಕರೆ, ಜವಳಿ, ರಾಸಾಯನಿಕಗಳು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಹಾರ, ಸಾಫ್ಟ್ವೇರ್, ಪ್ರವಾಸೋದ್ಯಮ ಮತ್ತಿತರ ವಲಯಗಳಿಗೆ ಸೇರಿವೆ ಎಂದು ಮಾಹಿತಿ ನೀಡಿದ್ದಾರೆ. ಇವುಗಳÀ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15, ಬೆಂಗಳೂರು ನಗರ ಜಿಲ್ಲೆಯಲ್ಲಿ 7, ಧಾರವಾಡದಲ್ಲಿ 2, ಕೋಲಾರದಲ್ಲಿ 9, ತುಮಕೂರಿನಲ್ಲಿ 6, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ 1 ಯೋಜನೆಗಳು ಜಾರಿಗೆ ಬರಲಿವೆÉ ಎಂದು ಸಚಿವರು ವಿವರಿಸಿದ್ದಾರೆ. ಈಗ ಅನುಮೋದಿಸಲಾಗಿರುವ ಪ್ರಸ್ತಾವನೆಗಳಲ್ಲಿ ಹೆಸರಾಂತ ಸಂಸ್ಥೆಗಳಾದ ಹ್ಯೂಲೆಟ್-ಪೆಕಾರ್ಡ್, ಸೀಯೆಂಟ್ ಲಿಮಿಟೆಡ್, ಕೆನ್ನಮೆಟಲ್ ಇಂಡಿಯಾ ಲಿಮಿಟೆಡ್, ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್, ಬಿಆರ್ಎಸ್ ಎಕ್ಸಿಮ್ಸ್ ಪ್ರೈವೇಟ್ ಲಿಮಿಟೆಡ್, ಅದ್ವೈತ ಶಾಶ್ವತ್ ಪ್ರೈವೇಟ್ ಲಿಮಿಟೆಡ್ ಮತ್ತು ಎಲೈಟ್ ಪ್ರಾಜೆಕ್ಟ್ ಮುಂತಾದ ಕಂಪನಿಗಳು ಸಲ್ಲಿಸಿರುವ ಪ್ರಸ್ತಾವನೆಗಳಿವೆ ಎಂದು ದೇಶಪಾಂಡೆ ತಿಳಿಸಿದ್ದಾರೆ.
Leave a Comment