ಹೊನ್ನಾವರ :
ನನ್ನ ಶಾಸಕತ್ವದ ಐದು ವರ್ಷದ ಅವಧಿಯಲ್ಲಿ ಹೊನ್ನಾವರ ನಗರದಲ್ಲಿ ಸಮಸ್ಯೆಯಾಗಿ ಕಾಡುತ್ತಿರುವ ಕುಡಿಯುವ ನೀರು ಮತ್ತು ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸಲು ಸರಕಾರದ ಮಟ್ಟದಲ್ಲಿ ಸರ್ವ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕಿ ಶಾರದಾ ಎಂ. ಶೆಟ್ಟಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಟ್ಟಣದ ಗಾಂಧಿನಗರದಲ್ಲಿ ಏರ್ಪಡಿಸಿದ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನನ್ನ ಪ್ರಯತ್ನದ ಫಲವಾಗಿ ಹೊನ್ನಾವರ ನಗರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 122.70 ಕೋಟಿ ಹಣ ಮಂಜೂರಾಗಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುತ್ತದೆ. ಇದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಈ ಯೋಜನೆಗೆ ಶಂಕುಸ್ಥಾಪನೆ ನಡೆಸಲು ಸಾಧ್ಯವಾಗಲಿಲ್ಲ ಎಂದರು. ಈ ಯೋಜನೆ ಜಾರಿಯಾದಲ್ಲಿ ಮುಂದಿನ ದಿನದಲ್ಲಿ ಹೊನ್ನಾವರಕ್ಕೆ 24 ಗಂಟೆಗಳ ಕಾಲ ನೀರು ಪೂರೈಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕಿ ಶಾರದಾ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಹಾಗೇ ವಾಸ್ತವ್ಯಕ್ಕಾಗಿ ಅತಿಕ್ರಮಿಸಿರುವ ಅರಣ್ಯಭೂಮಿ ಅತಿಕ್ರಮಣ ಸಮಸ್ಯೆ ಈಗಾಗಲೇ ಸಮಾಜಕಲ್ಯಾಣ ಇಲಾಖೆಯಿಂದ ಕಡತಗಳು ಕಂದಾಯ ಇಲಾಖೆ ಪಡೆದಿದ್ದು ಮುಂದಿನ ದಿನದಲ್ಲಿ ನಿಮ್ಮ ಜೊತೆಯೇ ನಿಂತು ಅತೀಕ್ರಮಣ ಸಮಸ್ಯೆಯನ್ನು ಬಗೆಹರಿಸಲು ಹೋರಾಡುವುದಾಗಿ ಬರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಸಮಾಜದ ಎಲ್ಲಾ ಜಾತಿ ಧರ್ಮಗಳು ಸಹಬಾಳ್ವೆಯಿಂದ ಬದುಕಲು ಕಾಂಗ್ರೆಸ್ ಸರಕಾರ ಅವಶ್ಯಕತೆ ಇದೆ ಎಂದರು.
ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ ಮಾತನಾಡಿ ಶಾಸಕಿ ಶಾರದಾ ಎಂ. ಶೆಟ್ಟಿ ಒರ್ವ ಮಹಿಳೆಯಾಗಿ ಕ್ಷೇತ್ರದ ಸಮಸ್ಯೆಯನ್ನು ಕರಾರುವಕ್ಕಾಗಿ ವಿಧಾನಸಭೆಯಲ್ಲಿ ಮಂಡಿಸಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ಕೆ ತಂದಿರುವುದು ನಾವೆಲ್ಲಾ ಹೆಮ್ಮೆ ಪಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗಾಂಧಿನಗರದ ಹೆನ್ರೆಲಿಮಾ, ಜೋನ್ ಪುಡ್ತಾದೊ, ಜೊಸೇಫ್ ಡಿಸೋಜಾ ಮತ್ತು ಅಮೀರ ಶೇಖ್ ಇವರನ್ನು ಶಾಸಕಿ ಶಾರದಾ ಶೆಟ್ಟಿ ಪುಷ್ಪಗುಚ್ಚ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಸಭೆಯಲ್ಲಿ ತಾಲೂಕಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಆಗ್ನೇಲ್ ಡಾಯಸ್, ಕುಮಟಾ ಬ್ಲಾಕ್ ಅಧ್ಯಕ್ಷ ವಿ. ಎಲ್. ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ತಾರಾ ಗೌಡ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ್, ಪ್ರಧಾನಕಾರ್ಯದರ್ಶಿ ದಾಮೋದರ ನಾಯ್ಕ, ನೆಲ್ಸನ್ ರೊಡ್ರಗಿಸ್, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ ಮೇಸ್ತ, ಮಂಜುನಾಥ ಖಾರ್ವಿ ಇನ್ನು ಮುಂತಾದವರು ಉಪಸ್ತಿತರಿದ್ದರು.
ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೇಶವ ಮೇಸ್ತ ಸ್ವಾಗತಿಸದರು. ಪಟ್ಟಣ ಪಂಚಾಯತ ಸದಸ್ಯ ಸುರೇಶ ಮೇಸ್ತ ವಂದಿಸಿದರು.
Leave a Comment