ಹೊನ್ನಾವರ: ಕುಮಟಾ ಕ್ಷೇತ್ರದಲ್ಲಿ ಈ ಬಾರಿ ನಮ್ಮ ಬೇಡಿಕೆಗೆ ಸ್ಪಂದಿಸದ ಪಕ್ಷ ಶಾರದಾ ಶೆಟ್ಟಿ ಅವರಿಗೇ ಮತ್ತೆ ಟಿಕೇಟ್ ಘೋಷಣೆ ಮಾಡಿದೆ, ಅವರಿಗೆ ನಮ್ಮ ಬೆಂಬಲವಿಲ್ಲ. ಈಗಲೂ ಇವರನ್ನು ಬದಲಿಸುವ ಅವಕಾಶವಿದ್ದು, ಅವರನ್ನು ಬದಲಾಯಿಸಿ ಪಕ್ಷದಲ್ಲಿ ದುಡಿದ ಬೇರೆಯವರಿಗೆ ಟಿಕೇಟ್ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಹೇಳಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕುಮಟಾ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಬೇಕು ಎಂದು ಪಕ್ಷದ ಕಾರ್ಯಕರ್ತರು, ಮುಖಂಡರು ಹೈಕಮಾಂಡಿಗೆ ವಿನಂತಿಸಲಾಗಿತ್ತು. ಆದರೆ ಹಾಲಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಟಿಕೇಟ್ ನೀಡಿದೆ. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದಾ ಶೆಟ್ಟಿಗಾಗಿ ನಾವೆಲ್ಲ ದುಡಿದ್ದೆವು. ಆದರೆ ಗೆದ್ದ ಶಾರದಾ ಶೆಟ್ಟಿ ಅವರು ಪಕ್ಷವನ್ನು ಗಟ್ಟಿಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೇ ಅವರಿಂದ ಕಾಂಗ್ರೆಸ್ ಅಧೋಗತಿಗೆ ಹೋಗುತ್ತಿದೆ. ಆದರೆ ಈ ಬಾರಿ ನಮ್ಮ ಬೇಡಿಕೆಗೆ ಸ್ಪಂದಿಸದ ಹೈಕಮಾಂಡ್ ಶಾರದಾ ಶೆಟ್ಟಿ ಅವರಿಗೇ ಮತ್ತೆ ಟಿಕೇಟ್ ಘೋಷಣೆ ಮಾಡಿದೆ. ಮತ್ತೆ ಇದನ್ನು ಬದಲಿಸುವ ಅವಕಾಶವಿದ್ದು, ಅವರನ್ನು ಬದಲಾಯಿಸಿ ಪಕ್ಷದಲ್ಲಿ ದುಡಿದ ಬೇರೆಯವರಿಗೆ ಟಿಕೇಟ್ ನೀಡಬೇಕು. ಇಲ್ಲದಿದ್ದರೆ ನಾವು ತಟಸ್ಥರಾಗಿರುತ್ತೇವೆ. ಪಕ್ಷದ ಬಂಡಾಯ ಅಭ್ಯರ್ಥಿಯ ಪರವಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಬೆಳೆಸುವ ಕೆಲಸವನ್ನು ಮಾಡಲಿಲ್ಲ. ಹಾಗಾಗಿ ಪಕ್ಷದ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಶಾರದಾ ಶೆಟ್ಟಿ ಅವರು ಅಭ್ಯರ್ಥಿಯಾದರೆ ಪಕ್ಷಕ್ಕೆ ಸೋಲುವ ಭೀತಿ ಎದುರಾಗಿದೆ ಎಂದು ನಮಗೆ ಅನಿಸುತ್ತಿದೆ. ಅವರ ತಪ್ಪಿನಿಂದ ಕಾರ್ಯಕರ್ತರಿಗೆ ಸೋಲಾಗಿ ಪರಿಣಮಿಸುತ್ತದೆ. ಹೊನ್ನಾವರದಲ್ಲಿ ಕೆಲವು ಅಭಿವೃದ್ಧಿ ಕಾರ್ಯವನ್ನು ಮಾಡಬಹುದಿತ್ತು, ಮಾಡಲಿಲ್ಲ. ಪತ್ರಿಕಾಗೋಷ್ಠಿ ನಡೆಸಿ ಕುಡಿಯುವ ನೀರಿನ ಯೋಜನೆ ಬಗ್ಗೆ ಹೇಳಿಕೆ ನೀಡಿದ್ದಾರೆ ಹೊರತು ನೀರಿನ ಅವಶ್ಯ ಇರುವ ಹೊನ್ನಾವರಕ್ಕೆ ಈ ಯೋಜನೆಯನ್ನು ಹಿಂದೆ ತರಬಹುದಿತ್ತು ಎಂದು ಆರೋಪಿಸಿದರು. ನಾವು ಕಳೆದ 20 ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಶಾರದಾ ಶೆಟ್ಟಿ ಅವರ ನಾಯಕತ್ವದಲ್ಲಿ ಪಕ್ಷದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಪ್ರಗತಿಯ ಕಾರ್ಯ ಮಾಡಿದ್ದರೆ ಮಾದರಿ ಕ್ಷೇತ್ರವಾಗುತ್ತಿತ್ತು. ಪಕ್ಷದ ಬಂಡಾಯ ಅಭ್ಯರ್ಥಿ ಯಾರೇ ನಿಂತರೂ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ. ಒಂದೊಮ್ಮೆ ಪಕ್ಷದ ಹೈಕಮಾಂಡ್ ಈ ಕುರಿತು ಆಕ್ಷೇಪ ವ್ಯಕ್ತ ಪಡಿಸಿದರೆ ನಾವು ಪಕ್ಷಕ್ಕೆ ರಾಜಿನಾಮೆ ನೀಡಲು ಸಿದ್ದರಿದ್ದೇವೆ ಎಂದರು. ನೀವು ನಿಮ್ಮ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಅಭ್ಯರ್ಥಿಯ ಎಷ್ಟು ಮತಗಳನ್ನು ಹಾಕಿಸುವ ಸಾಮಥ್ರ್ಯವಿದೆ ಎಂದು ಕೇಳಿದ ಪ್ರಶ್ನೆಗೆ `ಕಳೆದ ಚುನಾವಣೆಯಲ್ಲಿ ಸುಮಾರು 36 ಸಾವಿರ ಮತ ಪಡೆದುಕೊಂಡಿದ್ದರು. ಈ ಬಾರಿ 25 ಸಾವಿರ ಮತ ಪಡೆದುಕೊಳ್ಳಬಹುದು ಎಂದರು. ಬಿ ಫಾರ್ಮ ನೀಡುವವರೆಗೂ ಟಿಕೇಟ್ ಬದಲಿಸುವ ಸಾಧ್ಯತೆ ಹೈಕಮಾಂಡಿಗಿದೆ. ಅಭ್ಯರ್ಥಿಯನ್ನು ಬದಲಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕು’ ಎಂದರು. ನಿಮ್ಮ ಅಭ್ಯರ್ಥಿ ಯಾರು ಎಂದು ಕೇಳಿದ ಪ್ರಶ್ನೆಗೆ ಹೊನ್ನಾವರದ ಕೃಷ್ಣ ಜೆ ಗೌಡ, ಕುಮಟಾದ ಹೊನ್ನಪ್ಪ ನಾಯ್ಕ, ಧೀರೂ ಶಾನಭಾಗ ಇವರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಕೇಳಿ ಬಂದಿದೆ. ಇವರಲ್ಲಿ ಯಾರಾದರೊಬ್ಬರನ್ನು ಬೆಂಬಲಿಸುತ್ತೇವೆ ಎಂದರು. ಕಾಂಗ್ರೆಸ್ ಯುವ ಘಟಕದ ಸಂತೋಷ ಮಹಾಲೆ, ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕದ ತಾಲೂಕು ಅಧ್ಯಕ್ಷ ಹುಲಿಯಣ್ಣ ಗೌಡ, ಪ.ಪಂ. ನಾಮನಿರ್ದೇಶಿತ ಸದಸ್ಯ ಇರ್ಫಾನ್ ಶೇಖ್, ಜೂಲಿಯಸ್ ಫರ್ನಾಂಡಿಸ್, ಎ.ಬಿ.ಥಾಮಸ್, ಪ್ರದೀಪ ನಾಯಕ, ಎಂ.ಜಿ.ಪ್ರಮೋದ, ಜಯಂತ ನಾಯ್ಕ, ವಸಂತ ಶೆಟ್ಟಿ, ಗಣೇಶ ಗೌಡ, ವಿನಾಯಕ ಗೌಡ, ನಾಗೇಶ ಗೌಡ ಇತರರು ಇದ್ದರು.
Leave a Comment