ಹಳಿಯಾಳ:- ವಚನ ಭ್ರಷ್ಟ, ವಿಶ್ವಾಸ ದ್ರೋಹ ಮಾಡಿರುವ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಹೆಡೆಮುರಿ ಕಟ್ಟಲಾಗುವುದು, ಅವರ ಅಭ್ಯರ್ಥಿ ಹೀನಾಯ ಸೋಲನುಭವಿಸಲಿದ್ದಾರೆಂದು ಹೇಳಿರುವ ಜೆಡಿಎಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಕ್ಷೇತ್ರದಲ್ಲಿ ತಮಗೆ ಜನತೆಯ ಉತ್ತಮ ಬೆಂಬಲ ದೊರೆಯುತ್ತಿದ್ದು ಉತ್ತಮ ಸ್ಪರ್ದೆ ನೀಡಿ ವಿಜಯ ಸಾಧಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 40 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ತಾವು ಜನರ ಸೇವೆಗಾಗಿ ರಾಜಕೀಯಕ್ಕೆ ಧುಮುಕಿದ್ದು ಗೆಲುವಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದು ಉತ್ತಮ ಬೆಂಬಲ ದೊರೆಯುತ್ತಿರುವುದಾಗಿ ಹೇಳಿದ ಅವರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿರುವ ತಮಗೆ ವಿಶ್ವಾಸ ದ್ರೋಹ ಮಾಡಿರುವ ಕುಮಾರಸ್ವಾಮಿ ಅವರಿಗೆ ಹಾಗೂ ಕ್ಷೇತ್ರದ ಅವರ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಲಾಗುವುದು ಎಂದರು. ತಾಲೂಕಿನ ನಾಗಶೆಟ್ಟಿಕೊಪ್ಪ, ಹಡಗಲಿ, ಮುತ್ತಲಮುರಿ ಇನ್ನಿತರ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದಾಗ ವಿವಿಧ ಪಕ್ಷಗಳ ಅನೇಕ ಕಾರ್ಯಕರ್ತರು ತಮ್ಮನ್ನು ಬೆಂಬಲಿಸುತ್ತಿದ್ದು ನಮಗೆ ಆನೆಬಲ ಬರುತ್ತಿದ್ದು ಪ್ರಚಾರ ಕಾರ್ಯ ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು ಕಾರ್ಯಕರ್ತರ, ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಕೈತಾನ ಬಾರಬೋಜಾ, ಆರ್.ಜಿ.ಬಿರಾದಾರ, ಬಸಪ್ಪಾ ಶಾಬಾದಿ, ದಾಬಲಸಾಬ ಅಂಗಡಿ, ಶಂಕರ ಕಾಜಗಾರ, ತುಕಾರಾಮ ಕರಂಜೆಕರ, ಮಹೇಶ ಜಾಧವ ಇತರರು ಇದ್ದರು.
Leave a Comment