ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರು ಬುಧವಾರ ನಗರದ ಕೆ.ಸಿ.ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಬ್ಬರದ ರೋಡ್ ಶೋ ಮಾಡಿ ಗಮನ ಸೆಳೆದರು.
ಈ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟಿ.ಆರ್.ಚಂದ್ರಶೇಖರ ಬೆಂಬಲಿಗರು ಭಾಗವಹಿಸಿ, ಟಿ.ಆರ್.ಚಂದ್ರಶೇಖರ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿ.ಆರ್.ಚಂದ್ರಶೇಖರ ಅವರು ಇಷ್ಟೊಂದು ಪ್ರಮಾಣದ ಸಂಖ್ಯೆಯಲ್ಲಿ ಮತದಾರ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿ ನನಗೆ ಹೊಸ ಶಕ್ತಿಯನ್ನು ತುಂಬಿದ್ದಾರೆ. ಕ್ಷೇತ್ರದ ಜನತೆ ನನ್ನನ್ನು ಕೈ ಹಿಡಿದು ಗೆಲ್ಲಿಸಿ, ಕ್ಷೇತ್ರದ ಜನಸೇವೆ ಮಾಡಲು ಅಮೂಲ್ಯ ಅವಕಾಶ ನೀಡುತ್ತಾರೆ ಎಂಬ ಬಲವಾದ ವಿಶ್ವಾಸದಡಿಯಲ್ಲಿ ಚುನಾವಣಾ ಕಣಕ್ಕಿಳಿದಿದ್ದೇನೆ. ಕ್ಷೇತ್ರದ ಜನರು ನನ್ನ ಮೇಲಿಟ್ಟ ವಿಶ್ವಾಸವೆ ನನಗೆ ಪ್ರಚಾರ ಕೈಗೊಳ್ಳಲು ಪ್ರೇರಕ ಶಕ್ತಿಯಾಗಿದೆ ಎಂದರು.
ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ತಾಮಡವವಾಡುತ್ತಿದೆ. ರೈತರು ಸಮಸ್ಯೆಗಳಿಂದ ತತ್ತರಿಸಿದ್ದಾರೆ. ದಾಂಡೇಲಿಯಲ್ಲಿ ವಿವಿಧ ಜ್ವಲಂತ ಸಮಸ್ಯೆಗಳಿವೆ. ಜೊಯಿಡಾ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಹಾಗೂ ಕೊರತೆಯಿದೆ. ಕ್ಷೇತ್ರದ ರೈತರ, ಕೃಷಿ ಕೂಲಿ ಕಾರ್ಮಿಕರ, ಬಡವ ಬಲ್ಲಿದರ, ದೀನ ದಲಿತರ ಅಶೋತ್ತರಗಳಿಗೆ ಸ್ಪಂದಿಸುವುದರ ಮೂಲಕ ಕ್ಷೇತ್ರದ ಜನರು ನೆಮ್ಮದಿಯ ಸಂತೃಪ್ತಿಯ ಜೀವನ ಮಾಡಬೇಕು. ಆ ನಿಟ್ಟಿನಲ್ಲಿ ಹೊಸ ಭರವಸೆಯೊಂದಿಗೆ ಸ್ಪರ್ಧಿಸುತ್ತಿದ್ದೇನೆ. ಮತದಾರರು ನನ್ನನ್ನು ಅತ್ಯಧಿಕ ಮತಗಳಿಂದ ಆರಿಸಿ, ಈ ಕ್ಷೇತ್ರವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ತನಗೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದರು.
ನಾನು ಗೆದ್ದರೆ, ಅದು ನನ್ನ ಗೆಲುವಲ್ಲ. ಅದು ಈ ಕ್ಷೇತ್ರದ ಮತದಾರರ ಗೆಲುವು. ಕ್ಷೇತ್ರದ ಬಗ್ಗೆ ಸಮಾಜಮುಖಿಯಾಗಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಜನರ ಪ್ರೀತಿ, ವಿಶ್ವಾಸವೆ ನನ್ನ ಸ್ಪರ್ಧೆಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ತನ್ನ ಕಡೆ ವ್ಯಾಪಕವಾದ ಅಲೆಯಿದೆ. ಗೆಲ್ಲವು ವಿಶ್ವಾಸವಿದೆ. ಎಲ್ಲರ ಪ್ರೀತಿಯ ಸಹಕಾರವಿರಲೆಂದು ಟಿ.ಆರ್.ಚಂದ್ರಶೇಖರ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಎಸ್.ಜಿ.ಬಿರದಾರ, ಯುವ ಮುಖಂಡ ಬಸಪ್ಪಾ ಶಾಬಾದಿ ಮೊದಲಾದವರು ಟಿ.ಆರ್.ಚಂದ್ರಶೇಖರ ಅವರನ್ನು ಪ್ರಚಂಡ ಮತಗಳಿಂದ ಗೆಲ್ಲಿಸಿ, ಕ್ಷೇತ್ರವನ್ನು ಬೆಳಗಿಸಲು ಎಲ್ಲರು ಸಹಕರಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರುಗಳಾದ ಮಹೇಶ ಸಾವಂತ, ಸುಶೀಲ ಕಾಸರಗೋಡ, ಮುಖಂಡರುಗಳಾದ ಪ್ರಭಾಕರ ಶೆಟ್ಟಿ, ಉದಯ ನಾಯರ್, ರುಕ್ಮಿಣಿ ಬಾಗಾಡೆ ಮೊದಲಾದವರು ಉಪಸ್ಥಿತರಿದ್ದರು.
Leave a Comment