ಹೊನ್ನಾವರ :
ಕರಾವಳಿ ವಿದ್ಯಾವರ್ಧಕ ಸಂಘ, ದೇವರಗದ್ದೆ ಇದರ ವತಿಯಿಂದ ಮಂಕಿ ಹಳೇಮಠ ಪಂಚಾಯತ್ ವ್ಯಾಪ್ತಿಯ 3 ಸರ್ಕಾರಿ ಕನ್ನಡ ಶಾಲೆಗಳಿಗೆ ತೆರಳಿ ಅಲ್ಲಿಯ ಸುಮಾರು 150 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯಾಧ್ಯಾಪಕ ಕಾಸರಕೋಡ್ನ ಥಾಮಸ್ ಹೋರ್ಟ ಮಾತನಾಡಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಬೇಕಾದ ಸಮಯದಲ್ಲಿ ಕರಾವಳಿ ವಿದ್ಯಾವರ್ಧಕ ಸಂಘವು ಕಳೆದ 5 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಹಾಗೂ ಸಂಘದ ಸದಸ್ಯರು ಶಾಲೆಯ ಎಲ್ಲ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರುವುದು ಅವರಲ್ಲಿರುವ ಶಿಕ್ಷಣ ಹಾಗೂ ಸಮಾಜದ ಕಾಳಜಿಯನ್ನು ತೋರಿಸುತ್ತದೆ ಎಂದರು. ಸಂಘದ ಅಧ್ಯಕ್ಷ ರಘು ಖಾರ್ವಿ ಮಾತನಾಡಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಂಡು ತಮ್ಮ ಶಾಲೆಯ, ಊರಿನ ಕೀರ್ತಿಯನ್ನು ಬೆಳಗಿಸಿ ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಉನ್ನತ ಸ್ಥಾನವನ್ನುಗಳಿಸಿ ಎಂದು ಶುಭ ಹಾರೈಸಿದರು ಹಾಗೂ ಶಾಲೆಯ ಯಾವುದೇ ಕಾರ್ಯಕ್ರಮ, ಸಮಸ್ಯೆ ಅಥವಾ ಇತರೆ ಯಾವುದೇ ವಿಷಯ ನಮ್ಮ ಗಮನಕ್ಕೆ ಬಂದರೆ ಸಂಘವು ಅದಕ್ಕೆ ಸ್ಪಂದಿಸುತ್ತದೇ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ದುರ್ಗಯ್ಯ ಖಾರ್ವಿ, ಸದಸ್ಯರಾದ ಸಂತೋಷ ಖಾರ್ವಿ, ರಾಘವೇಂದ್ರ ಜಿ. ಖಾರ್ವಿ, ಮಾದೇವ್ ಖಾರ್ವಿ, ವೆಂಕಟೇಶ್, ಉದಯ್, ಗಜಾನನ, ರಮೇಶ್, ದಿನೇಶ್, ಚಂದ್ರಕಾಂತ ಇತರರು ಉಪಸ್ಥಿತರಿದ್ದರು.
Leave a Comment