ಹೊನ್ನಾವರ: ಇಂದಿನ ಬಾಲಕರೇ ನಾಳಿನ ದೇಶದ ನಿರ್ಮಾತೃರು. ಅವರ ಸರ್ವಾಂಗೀಣ ಏಳಿಗೆಯಲ್ಲಿ ನಾಡಿನ ಭವಿಷ್ಯ ಅಡಗಿದೆ. ಈ ಹಿನ್ನಲೆಯಲ್ಲಿ ಬಾಲ ಕಾರ್ಮಿಕರನ್ನು ತಡೆಯುವುದು ದೇಶದ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ ಎಂದು ಹೊನ್ನಾವರ ಸಿವಿಲ್ ಜಜ್ ಹಿರಿಯ ವಿಭಾಗ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಹೊನ್ನಾವರ ಪ್ರಭಾತನಗರದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ವಕೀಲರ ಸಂಘ, ತಹಶೀಲ್ದಾರ ಕಛೇರಿ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಪ್ರಭಾತನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಮಧುಕರ ಪಿ ಭಾಗ್ವತ ಕೆ. ಮಾತನಾಡಿ ವಿದ್ಯಾರ್ಜನೆಯ ಸಮಯದಲ್ಲಿ ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೇ ಓದಿನಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಲು ಕಾಳಜಿ ವಹಿಸಿದರೆ ಉಜ್ವಲ ಭವಿಷ್ಯ ಅವರದಾಗುತ್ತದೆ. ಅವರನ್ನು ನಂಬಿದ ಪಾಲಕರು, ಸಮಾಜ ಹಾಗೂ ದೇಶಕ್ಕೆ ಒಳಿತಾಗುತ್ತದೆ. ಎಷ್ಟೇ ಕಷ್ಟ ಬಂದರೂ ಬಿಡದೇ ಶಿಕ್ಷಣವನ್ನು ಮುಂದುವರೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತಹಶೀಲ್ದಾರ್ ಮಂಜುಳಾ ಭಜಂತ್ರಿ, ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ, ಪ್ರಭಾತನಗರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎ. ನಾಯ್ಕ, ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ ಇನ್ನೀತರರು ಉಪಸ್ಥಿತರಿದ್ದರು.
Leave a Comment