ಹಳಿಯಾಳ:- ತಾಲೂಕಿನ ಸಾಂಬ್ರಾಣಿ ವಲಯದ ದೊಡ್ಡಕೊಪ್ಪ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಬೆಲೆ ಬಾಳುವ ಮಾಲು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ಸಾಂಬ್ರಾಣಿಯ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಾಂಬ್ರಾಣಿ ವಲಯದ ದೊಡ್ಡಕೊಪ್ಪ ಬೀಟ ವ್ಯಾಪ್ತಿಯ ದೊಡ್ಡಕೊಪ್ಪ ಅರಣ್ಯ ಸಂಖ್ಯೆ 72 ನೇದ್ದರಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅನಧೀಕೃತವಾಗಿ ಸಾಗ ಹಸಿ ಮರಗಳನ್ನು ಕಡಿದು ರೂಪಾಂತರಿಸಿ ಅಕ್ರಮವಾಗಿ ಸಾಗಿಸಿರುವ ಬಗ್ಗೆ ಕರ್ನಾಟಕ ಅರಣ್ಯಕಾಯ್ದೆ 1963 ರ ಸೆಕ್ಷನ್ 24(ಇ) (ಜೆ) ,50 (2)(ಬಿ) 62, 71ಎ ,74, 80 ಹಾಗೂ ಕರ್ನಾಟಕ ಅರಣ್ಯ ಅಧಿನಿಯಮ 1969 ರ ನಿಯಮ 144 ರನ್ನು ನೇರವಾಗಿ ಉಲ್ಲಂಘಿಸಿ ನಿಯಮ 165 ರ ಪ್ರಕಾರ ಶಿಕ್ಷಾರ್ಹ ಅಪರಾಧವೇಸಗಿದ ಕುರಿತು ದೊಡಕೊಪ್ಪ ಗ್ರಾಮದ ಭೀಮಣ್ಣ ಬಾಬು ಮೇತ್ರಿ ಎನ್ನುವವನ ಮೇಲೆ ಪ್ರಕರಣ ದಾಖಲಾಗಿದ್ದು ಪ್ರಕರಣಕ್ಕೆ ಸಬಂಧಿಸಿದಂತೆ ಇನ್ನೆರಡು ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಹಳಿಯಾಳದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪ್ರಕರಣದಲ್ಲಿ ಸಾಗ ನಗ 275 = 2.692 ಕ್ಯೂ.ಮೀ ಕಟ್ಟಿಗೆಯನ್ನು ಹಾಗೂ ಕಟ್ಟಿಗೆ ಕೊರೆಯಲು ಉಪಯೋಗಿಸಿದ ಲಕ್ಷಾಂತರ ರೂ. ಬೆಲೆ ಬಾಳುವ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎಪ್.ಕುರಿ, ಉಮೇಶ, ವಿ.ವಿ ಬಾಡ್ಕರ, ದೀಪಕ ಜಂಬೂರೆ, ಜಯರೆಡ್ಡಿ, ಅರಣ್ಯ ರಕ್ಷಕರಾದ ಉತ್ತಮ ಮಡಿವಾಳ, ಹೀರಗವ್ವಾಕೂಸನೂರ, ಪ್ರವೀಣ ಹಚ್ಯಾಳಕರ , ಶೋಭಾ ತೋಳೆ, ಬೆಜಮಿಲ್ ಫರ್ನಾಂಡಿಸ್, ಅಶೋಕ ಅಳವಾಡಕರ, ಲಕ್ಷ್ಮಣ ಕರೆಹೋಳೆ, ಎನ್.ಸಿ ದಳವಾಯಿ ಇತರರು ಇದ್ದರು.
Leave a Comment