ಹೊನ್ನಾವರ: “ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು”, ವತಿಯಿಂದ ‘ಯುಕೆ ರಾಯಲ್ ಉತ್ತರಕನ್ನಡ’ ಸಹಯೋಗದೊಂದಿಗೆ ಆಯ್ದ ಮೂರು ಸರಕಾರಿ ಪ್ರಾಥಮಿಕ ಶಾಲೆಗಳ 150 ವಿದ್ಯಾರ್ಥಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ನೋಟ್ಬುಕ್ ವಿತರಣೆ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕಾಸರಕೋಡ ಶ್ರೀ ಮಹಾಗಣಪತಿ ನಾರಾಯಣ ಸಭಾಭವನದಲ್ಲಿ ನಡೆಯಿತು. ಆಗಮಿಸಿದ ಗಣ್ಯರ ಜೊತೆ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದ ರಾಯಲ್ ಹಾಲಿಡೇಸ್ ಕಂಪನಿಯ ಸದಸ್ಯ ರಾಜು ನಾಯ್ಕಮಾತನಾಡಿ ಉತ್ತಮ ಉದ್ದೇಶದೊಂದಿಗೆ 2012 ಜನವರಿಯಲ್ಲಿ ಪ್ರಾರಂಭಗೊಂಡ ಕಂಪನಿ, ಈ ಆರುವರೆ ವರ್ಷಗಳಲ್ಲಿ ಮೂರುವರೆ ಲಕ್ಷಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿ, ಭಾರತದಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ, ಸದಸ್ಯರಿಗೆ ಉತ್ತಮ ಗುಣಮಟ್ಟದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಗಳನ್ನು ನೀಡುತ್ತಾ, ಆರ್ಥಿಕವಾಗಿ ಸಬಲರನ್ನಾಗಿಸುತ್ತಾ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಗಿರೀಶ ಪದಕಿ ಮಾತನಾಡಿ, ಸರಕಾರಿ ಶಾಲೆಗಳನ್ನು ಸಬಲಗೊಳಿಸಲು ಕೈ ಜೋಡಿಸುತ್ತಿರುವ ಸೂಪರ್ ರಾಯಲ್ ಹಾಲಿಡೇಸ್ ಕಂಪನಿಗೆ ಧನ್ಯವಾದ ತಿಳಿಸುತ್ತಾ, ತಾನು ಗಳಿಸಿದ ಲಾಭದ ಕೆಲವಂಶವನ್ನು ಸಮಾಜಸೇವೆಗೆ ಬಳಸುತ್ತಿರುವ ಕಂಪನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಶಾಲೆಗಳು ಟ್ಯಾಬ್, ಲ್ಯಾಪ್ಟಾಪ್ಗಳಂತಹ ತಂತ್ರಜ್ಞಾನವನ್ನು ಕಂಪನಿಯಿಂದ ಪಡೆಯುವಂತಾಗಲಿ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ಎನ್.ಎಸ್.ನಾಯ್ಕ ಇಂದು 3 ಶಾಲೆಗಳಿಗೆ ನೀಡುತ್ತಿರುವ ಸೌಲಭ್ಯ ಮುಂದಿನ ದಿನಗಳಲ್ಲಿ 100 ಶಾಲೆಗಳಿಗೆ ವಿಸ್ತರಿಸುವಂತಾಗಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಶ್ರೇಯಾ ನೀಲಕಂಠ ನಾಯ್ಕಳನ್ನು ಸನ್ಮಾನಿಸಿ, ಶುಭ ಹಾರೈಸಲಾಯಿತು. ಸದಸ್ಯರಾಗಿರುವ ಬಿ.ಜೆ.ಪಿ.ಯ ಹಿರಿಯ ಮುಖಂಡ ಎಂ.ಜಿ.ನಾಯ್ಕ ಮಾತನಾಡಿ, ಉಜ್ವಲ ಭವಿಷ್ಯ ಹೊಂದಿರುವ ಈ ಕಂಪನಿಯಲ್ಲಿ ನಾನೂ ಕೂಡ ಸದಸ್ಯತ್ವ ಪಡೆದು ಪ್ರವಾಸದ ಜೊತೆಗೆ ಉತ್ತಮ ಆದಾಯ ಪಡೆದಿದ್ದೇನೆ, ಕಂಪನಿಯಿಂದ ಶಾಲಾ ಮಕ್ಕಳಿಗೆ ಪರಿಕರಗಳನ್ನು ವಿತರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು. ಸೂಪರ್ ರಾಯಲ್ ಹಾಲಿಡೇಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ|| ಮಧುಕರ್ ಮಾತನಾಡಿ, ನಮ್ಮ ಕಂಪನಿ ಸಹಸ್ರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಪನಿ ಬೆಳೆಯುತ್ತಿದೆ. ಕಡಿಮೆ ಹಣದಲ್ಲಿ ಉತ್ತಮ ಗುಣಮಟ್ಟದ ಪ್ರವಾಸಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಜೊತೆಗೆ ಸರಕಾರಿ ಶಾಲೆಗಳಿಗೆ ಭೌತಿಕ ಸೌಲಭ್ಯ ನೀಡಿಕೆ, ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್, ರಕ್ತದಾನ ಶಿಬಿರಗಳು, ವಿಕಲಚೇತನ ಶಾಲೆಗಳಿಗೆ ದೇಣಿಗೆಯಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ. ಈ ಎಲ್ಲ ಕಾರ್ಯಗಳಿಗೆ ಸಹಕರಿಸುತ್ತಿರುವ ಕಂಪನಿಯ ಸರ್ವಸದಸ್ಯರುಗಳಿಗೆ ಧನ್ಯವಾದಗಳು ಎಂದರು. ಬಳಿಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೋಟೆ, ಹೊನ್ನಾವರ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಳಲವಳ್ಳಿ, ಸಿದ್ದಾಪುರದ ವಿದ್ಯಾರ್ಥಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ನೋಟ್ಬುಕ್ಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಕೋಡ ಗ್ರಾಮ ಪಂಚಾಯತದ ಅಧ್ಯಕ್ಷೆ ದಿಲ್ಶಾದ್ ಬೇಗಂ ವಹಿಸಿದ್ದರು. ಗ್ರಾಮ ಪಂಚಾಯತದ ಸದಸ್ಯ ನಾರಾಯಣ ಗೌಡ, ಸೂಪರ್ ರಾಯಲ್ ಹಾಲಿಡೇಸ್ ಕಂಪನಿಯ ಸದಸ್ಯರಾದ ರಾಜು ನಾಯ್ಕ, ಗಜಾನನ ನಾಯ್ಕ ಸಿದ್ದಾಪುರ ಉಪಸ್ಥಿತರಿದ್ದರು. ಕಂಪನಿಯ ಸದಸ್ಯ ತನ್ಮಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
Leave a Comment