ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರು. ಮಳೆಗಾಲದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೊನ್ನಾವರ ತಾಲ್ಲೂಕಿನ ‘ಬಂಗಾರ ಕುಸುಮ’ ಜಲಪಾತ ಗೇರುಸೊಪ್ಪಾ ಬಂಗಾರ ಮಕ್ಕಿಯಿಂದ 3 ಕಿ.ಮೀ. ದೂರ ಇರುವ ಮಲೆಮನೆ ಘಟ್ಟದಲ್ಲಿ ಇದೆ. ಕಾನನ ಮಧ್ಯೆ ಇರುವ ಈ ಜಲಪಾತ ಮಳೆಯಿಂದ ಚೆಲುವು ಹೆಚ್ಚಿಸಿಕೊಂಡಿದೆ.
ಹಲವಾರು ವರ್ಷಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದ ನ್ಯೂ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿಗಳೇ ಇದಕ್ಕೆ ನಾಮಕರಣ ಮಾಡಿದ್ದಾರೆ. ಪರಿಸರ ಹೋರಾಟಗಾರ್ತಿ ದಿವಂಗತ ಕುಸುಮಾ ಸೊರಬ ಹೋರಾಟ ನಡೆಸಿದ್ದ ಈ ಸ್ಥಳ, ಬಂಗಾರ ಮಕ್ಕಿಗೂ ಹತ್ತಿರುವುದರಿಂದ ಬಂಗಾರ ಕುಸುಮ ಎಂದು ಹೆಸರಿಡಲಾಗಿದೆ. ಗುಡ್ಡದ ನೆತ್ತಿಯಿಂದ ಧುಮ್ಮಿಕ್ಕುವ ಈ ಜಲಪಾತ ಘಟ್ಟ ಏರಿ ಇಳಿಯುವಾಗಲೂ ಬೆಟ್ಟ ಅಡ್ಡ ಬರುವುದರಿಂದ ಸಂಪೂರ್ಣ ಗೋಚರಿಸುವುದಿಲ್ಲ. ಪ್ರವಾಸಿಗರಿಗೆ, ಚಾರಣ ಪ್ರಿಯರಿಗೆ ಇದು ಒಂದು ಉತ್ತಮ ಸ್ಥಳ.
ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳು ವನಮಹೋತ್ಸವದ ಅಂಗವಾಗಿ ಗೇರುಸೊಪ್ಪಾದ ಹತ್ತಿರವಿರುವ ಸುಂದರ ಕಾನನನದ ಮಧ್ಯೆ ಮೇಳೈಸಿರುವ “ಬಂಗಾರ ಕುಸುಮ” ಜಲಪಾತದ ಬಳಿ ತೆರಳಿ ಗಿಡ ನೆಡುವ ಮೂಲಕ ವಿನೂತನವಾಗಿ ವನಮಹೋತ್ಸವವನ್ನು ಆಚರಿಸಿದರು. ಮಳೆಗಾಲದಲ್ಲಿ “ಬಂಗಾರ ಕುಸುಮ” ಜಲಪಾತದ ನೋಟ ಅದ್ಭುತವಾಗಿದ್ದು, ಪ್ರವಾಸಿಗರಿಗೆ ಮನರಂಜನೆಯನ್ನು ನೀಡುತ್ತದೆ. ಈ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳು ನಡೆಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ವನಮಹೋತ್ಸವದ ಜೊತೆಗೆ ನಿಸರ್ಗ ವೀಕ್ಷಣೆ ಹಾಗೂ ಮನೋರಂಜನೆಗೆ ಈ ಕಾರ್ಯಕ್ರಮ ಸಹಕಾರಿಯಾಯಿತು. ಶಾಲೆಯ ಇಕೋ ಕ್ಲಬ್, ಎನ್.ಸಿ.ಸಿ ಮತ್ತು ಸ್ಕೌಟ್ ಸಂಘಗಳ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಗ್ರಂಥಾಲಯದಲ್ಲಿರುವ ಪರಿಸರ ಸಂಬಂಧಿ ಪುಸ್ತಕಗಳನ್ನು ಪರಿಸರದ ನಡುವೆ ಅಧ್ಯಯನ ನಡೆಸಿ ಕುವೆಂಪುರವರ ಪರಿಸರ ಗೀತೆಯನ್ನು ವಿದ್ಯಾರ್ಥಿಗಳು ಝೀ ಟಿ.ವಿ ಸ.ರಿ.ಗ.ಮ.ಪ ಖ್ಯಾತಿಯ ಸಂಜಿತ್ ಹೆಗಡೆಯ ಜೊತೆ ಹಾಡಿದರು. ಶಿಕ್ಷಕರಾದ ಯಶವಂತ ಮೇಸ್ತ, ರಾಘವೇಂದ್ರ ಹೆಗಡೆ, ಹರ್ಷ ಭಟ್ಟ, ಶಂಕರ ಹೆಗಡೆ, ಸೌಮ್ಯ ನಾಯ್ಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Leave a Comment