ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರಿನ ಇಕ್ಕಟ್ಟಾದ ಚಿಕ್ಕ ಸ್ಥಳದಲ್ಲಿ ಗಟಾರವನ್ನು ಬಳಸಿ ನಿಯಮಾವಳಿಯನ್ನು ಗಾಳಿಗೆ ತೂರಿ ಪುರಸಭೆಯಿಂದ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆ ಕಾಮಗಾರಿಯನ್ನು ತಕ್ಷಣ ಕೈಬಿಡಬೇಕೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ಆಟೋ ರೀಕ್ಷಾ ಸಂಘ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನೀಕರು ಇಲ್ಲಿಯ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರಿಗೆ ಬಳಿಕ ತಹಶೀಲ್ದಾರ್ ವಿದ್ಯಾಧರ, ಪೋಲಿಸ್ ವೃತ್ತ ನೀರಿಕ್ಷಕರಿಗೆ, ಪುರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು ಅಲ್ಲದೇ ಮನವಿಯ ಪ್ರತಿಗಳನ್ನು ಸಚಿವ ಆರ್.ವಿ.ದೇಶಪಾಂಡೆ, ವಿಪಸದಸ್ಯ ಎಸ್.ಎಲ್.ಘೊಟ್ನೇಕರ, ಜಿಲ್ಲಾಧಿಕಾರಿ ಹಾಗೂ ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಮನವಿಯಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಎದುರಿಗೆ ನಿಲ್ದಾಣಕ್ಕೆ ತಾಗಿ ಗಟಾರು ಜಾಗೆಯನ್ನು ಉಪಯೋಗಿಸಿ ಚಿಕ್ಕ ಅಂಗಡಿಗಳ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿದ್ದು ಇದು ಸಂಪೂರ್ಣ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ. ಹಳಿಯಾಳ ಪಟ್ಟಣ ವಾಣಿಜ್ಯ, ಶೈಕ್ಷಣಿಕ ಮತ್ತು ಔಧ್ಯಮಿಕ ಕೇಂದ್ರವಾಗಿ ಬೆಳೆದಿದ್ದು ಜನಸಂದನಿ ದಿನೆ ದಿನೆ ಹೆಚ್ಚುತ್ತಿದೆ ವಿದ್ಯಾರ್ಥಿಗಳು ಮತ್ತು ವ್ಯಾಪಾರ ವ್ಯವಹಾರಗಳಿಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ. ಪ್ರತಿ ದಿನ ಈ ನಿಲ್ದಾಣದ ಉಪಯೋಗ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ನಾಗರೀಕರ ಸಂಖ್ಯೆಯು 6 ರಿಂದ 8 ಸಾವಿರ ಇದ್ದು ನೂರಾರು ವಾಹನಗಳು ಸಂಚರಿಸುತ್ತವೆ ಇದರಿಂದ ಹಲವಾರು ಬಾರಿ ಟ್ರಾಫಿಕ್ ಜಾಮ್ ಆಗುತ್ತದೆ ಅಲ್ಲದೇ ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು ಇಲ್ಲಿ ಸಂಚರಿಸುವುದು ಸಾಹಸದ ಕೆಲಸವಾಗಿದೆ ಎಂದಿರುವ ಅವರು ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ಓಡಾಡುವ ಬಸ್ಗಳಿಗೆ ಬೇರೆ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ತುಂಬಾ ಇಕ್ಕಟ್ಟಾದ ಸ್ಥಳ ಉಳಿದು ಸಂಚಾರಕ್ಕೆ ಪ್ರತಿನಿತ್ಯ ಅಡಚಣೆ ಉಂಟಾಗುತ್ತಿರುವ ಸಂದರ್ಭದಲ್ಲಿಯೂ ಇಂತಹ ಇಕ್ಕಟ್ಟಾದ ಸ್ಥಳದಲ್ಲಿ ಈಗ ಪುರಸಭೆ ಕಾಮಗಾರಿ ಪ್ರಾರಂಭಿಸಿರುವುದು ಮೂರ್ಖತನವಾಗಿದ್ದು ಅಂಗಡಿ ಸಂಕೀರ್ಣ ನಿರ್ಮಿಸಿದ್ದೇ ಆದರೆ ಇನ್ನು ಭಾರೀ ಸಂಚಾರ ಸಮಸ್ಯೆ, ಭಾರೀ ಅಪಘಾತಗಳ ಸ್ಥಳವಾಗಿ ಮಾರ್ಪಾಟಾಗುವುದರಲ್ಲಿ ಸಂದೇಹವಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಕೂಡಲೇ ಈ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರನ್ನು ಭೇಟಿ ಮಾಡಿದ ಪ್ರತಿಭಟನಾಕರರ ಅಹವಾಲು ಸ್ವೀಕರಿಸಿದ ಅಧ್ಯಕ್ಷರು ಈ ಬಗ್ಗೆ ಪುರಸಭೆಯ ಸರ್ವ ಸದಸ್ಯರ, ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಮನವಿ ಸಲ್ಲಿಸುವಾಗ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಲಾಸ ಕಣಗಲಿ, ಹಿರಿಯ ನಾಗರೀಕ ವೇದಿಕೆಯ ಡಿ.ಎಮ್ಸಾವಂತ, ಜಿಡಿ ಗಂಗಾಧರ, ಬಸವರಾಜ ಉಪ್ಪಿನ, ಎಚ್ಕೆ ಪಾಟಿಲ, ಅಶೋಕ ಕಣಿಮೆಹಳ್ಳಿ, ಎಸ್ಜಿ ಕಡೆಮನಿ, ಚಂದ್ರಕಾಂತ ಗೊಂಧಳಿ, ವಿನೋದ, ರೀಕ್ಷಾ ಸಂಘದ ಬಾಬು ಮಾದರ, ಕುಮಾರ ಕಲಬಾವಿ, ಸತ್ತಾರ ಶೇಖ, ನಾಗರಾಜ, ಚಂದ್ರು ಕಟ್ಟಿಮನಿ, ಆಕಾಶ ಚಲವಾದಿ, ಆಸಿಫ ಮುಲ್ಲಾ, ರಿಯಾಜ ಮುನವಳ್ಳಿ ಮೊದಲಾದವರು ಇದ್ದರು.
Leave a Comment