ಹೊನ್ನಾವರ:”ಪರಿಸರದ ಮಡಿಲಲ್ಲೇ ಜನ್ಮತಳೆದು ಅದರ ಪ್ರಾಣವಾಯು ಸೇವಿಸಿ ಬದುಕುತ್ತಿರುವ ಮನುಷ್ಯನಿಗೆ ಪರಿಸರದ ಮಹತ್ವದ ಕುರಿತು ಪಾಠ ಮಾಡಬೇಕಾದ ಪ್ರಮೇಯ ಬಂದಿರುವುದು ಒಂದು ವಿಪರ್ಯಾಸದ ಸಂಗತಿ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್.ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆ,ಕಾಮಕೋಡ ಪರಿಸರ ಕೂಟ ಹಾಗೂ ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಮಕೋಡ ದೇವರಕಾಡಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಹಿಂದಿನ ಕಾಲದಲ್ಲಿ ಅರಣ್ಯ ಹಾಗೂ ಜನರ ನಡುವೆ ಇದ್ದಿದ್ದ ಅವಿನಾಭಾವ ಸಂಬಂಧ ಕಾಲಕ್ರಮಣೇಣ ಮರೆಯಾಗುತ್ತ ಬಂದು ಅರಣ್ಯ ರಕ್ಷಣೆಯ ಬಗ್ಗೆ ಜನರಿಗೆ ತಿಳಿಹೇಳುವ ಕಾಲ ಬಂದಿತು.1959ರಲ್ಲಿ ಅಂದಿನ ಆಹಾರ ಸಚಿವರಾಗಿದ್ದ ಕೆ.ಎಂ.ಮುನ್ಶಿ ಪ್ರತಿವರ್ಷ ದೇಶದೆಲ್ಲೆಡೆ ವನಮಹೋತ್ಸವ ಆಚರಿಸಲು ಕರೆ ನೀಡಿದರು.ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಈ ಭೂಮಿಯಲ್ಲಿ ಜೀವಿಗಳಿಗೆ ಉಳಿಗಾಲವಿಲ್ಲ.ಪರಿಸರ,ಅರಣ್ಯ ರಕ್ಷಣೆಯ ಮಹತ್ವ ಜನರ ಪ್ರಜ್ಞೆಯ ಭಾಗವಾಗಿ ಇದು ನಮ್ಮ ನಿತ್ಯದ ಕಾಯಕವಾಗಬೇಕಿದೆ.ವನಮಹೋತ್ಸವ ಒಂದು ದಿನಕ್ಕೆ ಸೀಮಿತವಾಗದೆ ಇದು ನಿತ್ಯೋತ್ಸವವಾಗಲಿ’ ಎಂದು ಅವರು ಆಶಿಸಿದರು.
“ಕಾಮಕೋಡ ದೇವರ ಕಾಡಿನ ಸಂರಕ್ಷಣೆ ಹಾಗೂ ಇಲ್ಲಿನ ಕೆರೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.
ಶಿಕ್ಷಕ ವಿಷ್ಣು ನಾಯ್ಕ ಮಾತನಾಡಿ,”ಕಾಮಕೋಡ ಅರಣ್ಯವನ್ನು ದೇವರಕಾಡು ಎಂದು ಸಂರಕ್ಷಣೆ ಮಾಡುತ್ತಿರುವುದರಿಂದ ಇಲ್ಲಿನ ಸಸ್ಯ ಸಂಪತ್ತು ಸಮೃದ್ಧವಾಗಿ ಬೆಳೆದಿದ್ದು ಜನರ ನೆಮ್ಮದಿಯ ತಾಣವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಫಾರೆಸ್ಟರ್ ವಿನೋದ ಗೌಡ,ಗಂಗಾಧರ ನಾಯ್ಕ ಬೇಣ್ಮನೆ ಉಪಸ್ಥಿತರಿದ್ದರು.ಪ್ರೊ.ಎಂ.ಜಿ.ಹೆಗಡೆ ವಂದಿಸಿದರು.ಎಚ್.ಎಲ್.ಗುರುದತ್ತ,ಎಚ್.ಎಸ್.ಪ್ರಭಾಕರಮೂರ್ತಿ,ಅರಣ್ಯ ಇಲಾಖೆಯ ಬಸವನ ಗೌಡ,ಗಣೇಶ ನಾಯ್ಕ,ಶ್ರೀಧರ ಭಟ್ಟ ಮತ್ತಿತರರು ಸಹಕರಿಸಿದರು.
Leave a Comment