ಹಳಿಯಾಳ : ಇನ್ನೂ ಮುಂದೆ ಯಾವುದೇ ಕೆರೆ ಹಾಗೂ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ, ರಾಸಾಯನಿಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸಲು ನಿರ್ಭಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು ಆದೇಶ ಉಲ್ಲಂಘೀಸಿದ್ದಲ್ಲಿ 10ಸಾವಿರ ರೂ. ದಂಡ ಹಾಗೂ ಜೈಲುವಾಸ ವಿಧೀಸಲಾಗುತ್ತದೆ ಎಂದು ಹಳಿಯಾಳ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ. ಪಟ್ಟಣದ ಮಿನಿ ವಿಧಾನ ಸೌಧದ ಸಬಾಭವನದಲ್ಲಿ ತಹಶಿಲ್ದಾರ ವಿಧ್ಯಾಧರ ಗುಳಗುಳಿ ರವರ ಅಧ್ಯಕ್ಷತೆಯಲ್ಲಿ ಸಿಪಿಐ, ಪಿಎಸೈ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ, ಹೆಸ್ಕಾಂ ಶಾಖಾಧಿಕಾರಿ ಸೂರ್ಯವಂಶಿ ಹಾಗೂ ಹಳಿಯಾಳ ಮತ್ತು ದಾಂಡೇಲಿಯ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರು,ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು, ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಈ ಕುರಿತು ಸ್ಪಷ್ಟನೆ ನೀಡಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಆ) ನಲ್ಲಿ ಇನ್ನು ಮುಂದೆ ಯಾವುದೆ ಜಲಗಳಲ್ಲಿ,ನದಿ,ಕಾಲುವೆ,ಬಾವಿಗಳಲ್ಲಿ ಕರೆಗಳಲ್ಲಿ ಹಾಗೂ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ,ರಾಸಾಯನಿಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಆದೇಶವನ್ನು ಉಲ್ಲಂಘಿಸಿದಲ್ಲಿ ರೂ.10,000/-ವರೆಗೆ ದಂಡ ಮತ್ತು ಜೈಲುವಾಸವನ್ನು ವಿಧಿಸಲಾಗುತ್ತದೆ ಎಂದರು. ಗಣೇಶನ ಮೂರ್ತಿಯನ್ನು ತಯಾರಿಸಲು ಉಪಯೋಗಿಸುವಂತಹ ಲೋಹದ ಸಂಬಂಧಿ ಬಣ್ಣಗಳಲ್ಲಿ ಸೀಸ ಹಾಗೂ ಇನ್ನಿತರ ವಿಷಕಾರಿ ರಾಸಾಯನಿಕಗಳಿರುತ್ತವೆ. ಇವು ಎಲ್ಲಾ ತರಹದ ಜೀವಿಗಳಿಗೂ ಅಪಾಯಕಾರಿಯಾಗಿವೆ. ಆದ್ದರಿಂದ ಗಣೇಶನ ಮೂರ್ತಿಗೆ ವಿಷಯುಕ್ತ ಹಾಗೂ ನೀರನಲ್ಲಿ ಕರಗದಿರುವಂತಹ ರಾಸಾಯನಿಕ ಬಣ್ಣಗಳನ್ನು ಉಪಯೋಗಿಸದೇ,ನೀರಿನಲ್ಲಿ ಕರಗುವ ಮತ್ತು ವಿಷಯುಕ್ತವಲ್ಲದ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೆಕೆಂದು ತಹಶಿಲ್ದಾರವರು ಹೇಳಿದರು. ಹೊರ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ತರುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ತಡೆಯಲು ಮತ್ತು ವಾಪಸ್ಸು ಕಳುಹಿಸುವ ಜವಾಬ್ದಾರಿಯನ್ನು ರಾಜ್ಯದಲ್ಲಿರುವ ಎಲ್ಲಾ ಗಡಿ ಠಾಣೆ,ಚೆಕ್ ಪೋಸ್ಟ್ನ ಅಧಿಕಾರಿಗಳ ನೀಡಲಾಗಿದ್ದು ಈ ಬಗ್ಗೆ ಪೋಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಿದರು. ಸ್ಥಳೀಯ ಸಂಸ್ಥೆಗಳು ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ವ್ಯಾಪಾರ ಲೈಸನ್ಸನ್ನು ನೀಡದಿರಲು ಹಾಗೂ ಈಗಾಗಲೇ ನೀಡಿದ್ದಲ್ಲಿ ವಾಪಸ್ಸು ಪಡೆಯಲು ಹಾಗೂ ಲೈಸನ್ಸ್ನ್ನು ಪಡೆಯದೆ ಅನಧೀಕೃತವಾಗಿ ತಯಾರಿ,ಮಾರಾಟ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಲು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿ,ಸಂಭ್ರಮದ ಜೊತೆಗೆ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮನವಿ ಮಾಡಿದರು.
Leave a Comment