ಹೊನ್ನಾವರ: ಜೀವನ ಸ್ವಾತಂತ್ರ್ಯವನ್ನು ಅದರ ಇತಿ ಮಿತಿಯನ್ನು ಅರಿತು ನಡೆದರೆ ಬದುಕು ಹಸನಾಗಿ, ಆರೋಗ್ಯ ಪೂರ್ಣವಾಗಿರುತ್ತದೆ. ಅದು ಸ್ವೇಚ್ಛಾಚಾರವಾದರೆ ಬದುಕು ಕಮರುತ್ತದೆ. ಅನಾರೋಗ್ಯ ಕಾಡುತ್ತದೆ. ಸಮಾಜಕ್ಕೆ ನಾವು ಹೊರೆ ಆಗುತ್ತೇವೆ ಎಂದು ವೈದ್ಯಾಧಿಕಾರಿ ಡಾ|| ಗಜಾನನ ಎಂ.ಜಿ ಅಭಿಪ್ರಾಯಪಟ್ಟರು.
ಅವರು ತಾಲೂಕಾ ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘ ಏರ್ಪಡಿಸಿದ ಕಾನೂನು ಸಾಕ್ಷರತಾ ರಥ ಸಂಚಾರದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕರ್ಕಿ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಮಾತನಾಡುತ್ತಿದ್ದರು.
ಸಮಾಜ ಸುಂದರವಾಗಿರಬೇಕೆಂದರೆ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಹೊಂದಿರಬೇಕು. ಅಂದಾಗ ಸಮಾಜಕ್ಕೆ ಹೊರೆ ಆಗದೇ, ಸಮಾಜಕ್ಕೆ ವಿರುದ್ಧ ನಡೆಯದೇ ಶಾಂತಯುತ ಬದುಕು ಸಾಗಿಸಲು ಸಾಧ್ಯ. ಬೇಕು-ಬೇಕು ಎನ್ನುವ ಬದುಕಿನ ನಡುವೆ ಕಳೆ ಯಾವುದು, ಬೆಳೆ ಯಾವುದು ಎಂದು ಗುರುತಿಸುವ ಪ್ರಜ್ಞೆ ನಮ್ಮದಾಗಿರಬೇಕು. ನಮ್ಮ ಮಕ್ಕಳಿಗೆ ಕೇವಲ ಪಠ್ಯದಲ್ಲಿ ತೊಡಗಿಸದೇ ದೈಹಿಕ ಶಿಕ್ಷಣ ಮತ್ತು ನೀತಿ ಶಿಕ್ಷಣವನ್ನು ಕೊಡಿಸುವ ಕಾಳಜಿಯನ್ನು ತೋರಿಸಬೇಕು ಎಂದರು.
ಗರ್ಭಪಾತ ತಡೆ ಕಾಯ್ದೆ, ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ, ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಹಿರಿಯ ನ್ಯಾಯಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ವಹಿಸಿದ್ದರು.
ವೇದಿಕೆಯಲ್ಲಿ ಜೆ.ಎಮ್.ಎಫ್.ಸಿ. ನ್ಯಾಯಧೀಶ ಮಧುಕರ ಪಿ. ಭಾಗ್ವತ, ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ, ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ, ಹೆಚ್ಚುವರಿ ಸರ್ಕಾರಿ ವಕೀಲ ಪ್ರಮೋದ ಎಲ್. ಭಟ್ಟ, ಇನ್ನೀತರರು ಉಪಸ್ಥಿತರಿದ್ದರು.
ಮಧ್ಯಾಹ್ನ 1.00 ಗಂಟೆಗೆ ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಕುರಿತು ಆರೋಗ್ಯ ನೀರಿಕ್ಷಕ ಸುನೀಲ್ ಗಾವಡೆ ಮಾಹಿತಿ ನೀಡಿದರು.
Leave a Comment