ಹಳಿಯಾಳ: ಇತ್ತೀಚೆಗೆ ಪಟ್ಟಣದ ಹಲವು ಕಡೆ ಹಲ್ಲೆ ನಡೆಸಿ ಕಳ್ಳತನ, ದರೋಡೆ ಮಾಡಿ ಪರಾರಿಯಾಗಿದ್ದ ಅಂತರರಾಜ್ಯ ಕುಖ್ಯಾತ ಕಳ್ಳರ ತಂಡದ ನಾಲ್ವರನ್ನು ಬಂಧಿಸಿ ಕಳ್ಳತನಕ್ಕೆ ಬಳಸಿದ ಸಲಕರಣೆಗಳನ್ನು, ಮೊಬೈಲ ಪೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಹಲ್ಲೆ ನಡೆಸಿ ದರೊಡೆ ಮಾಡಿದ ಪ್ರಕರಣದಿಂದ ತಾಲೂಕಿನ ಸಾರ್ವಜನಿಕರಲ್ಲಿ ಆತಂಕ, ಭಯ ಹುಟ್ಟಿಕೊಂಡಿತ್ತು ಈ ಪ್ರಕರಣವು ಪೋಲಿಸ್ ಇಲಾಖೆಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಸಣ್ಣ ಸುಳಿವು ಬಿಡದೆ ಅತ್ಯಂತ ಚಾಣಾಕ್ಷತನದಿಂದ ಕಳ್ಳತನ ನಡೆಸಿ ಪರಾರಿಯಾಗಿದ್ದ ತಂಡ ಮತ್ತೆ ಹಳಿಯಾಳಕ್ಕೆ ದರೊಡೆ ಮಾಡಲು ಸಂಚು ರೂಪಿಸಿದ ಬಗ್ಗೆ ಕೆಲವರ ಮಾಹಿತಿ ಮೇರೆಗೆ ಚಾಣಾಕ್ಷತನದಿಂದ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದ ತಂಡ ಕೊನೆಗೂ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೋಲಿಸ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಡಿ.ವೈ.ಎಸ್ಪಿ ಮೋಹನ ಪ್ರಸಾದ ರವರ ಮಾರ್ಗದರ್ಶನದಲ್ಲಿ ಪೋಲಿಸ ಕಾರ್ಯಾಚರಣೆಯಲ್ಲಿ ತಾಲೂಕಿನ ಅಜಗಾಂವ ಗ್ರಾಮದ ಹೊಲವೊಂದರಲ್ಲಿ ಅವಿತುಕುಳಿತಿದ್ದ ಈ ಕಳ್ಳರನ್ನು ಗ್ರಾಮಸ್ಥರ ಸಹಾಯದಿಂದ ಬಂಧಿಸಲಾಗಿದೆ. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬಟ ತಾಲೂಕಿನ ಬಡಿಹುತ್ತಿ ಗ್ರಾಮದ ಬಹದ್ದೂರ ಸಿಂಗ್ ರಾಯ್ಚಂದ್ ಬಿಲ್ವಾಲ (26), ಸುರಂ ಕಾಲಿಯಾ ಮಿನಾವಟ್ (30), ಚೋಡಿಗುತಿ ಗ್ರಾಮದ ಇಗ್ರಾಂ ಪಾನ್ಸಿಂಗ್ ಅಜನರ್ (25), ಬೋರಿ ತಾಲೂಕಿನ ಪುನತಲವ್ ಗ್ರಾಮದ ಸುರಬ್ ದೋಲು ಬುರಿಯಾ (22) ಈ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಪಟ್ಟಣದ ಕೆಲವು ಕಡೆ ಇತ್ತಿಚಿಗೆ ಕಳ್ಳತನ, ದರೋಡೆ, ಹಲ್ಲೆ ನಡೆಸಿದ ಘಟನೆ:- ಜೂನ 11ರಂದು ಮಧ್ಯರಾತ್ರಿ 3.15 ರ ಸುಮಾರು ಪಟ್ಟಣದ ಆನೆಗುಂದಿ ಬಡಾವಣೆಯಲ್ಲಿ ಎಲ್.ಐ.ಸಿ ಅಧಿಕಾರಿ ಮಂಜುನಾಥ ಶಾಸ್ತ್ರಿ ಅವರ ಮನೆಯ ಮುಂಬಾಗಿಲಿನ ಇಂಟರಲಾಕ್ ಮುರಿದು ಗಂಡ ಹೆಂಡತಿ ಮಕ್ಕಳನ್ನು ಬೆದರಿಸಿದಾಗ ಶಾಸ್ತ್ರಿಯವರು ಪ್ರತಿರೋದಿಸಿದಾಗ ಅವರ ತಲೆಗೆ ಕಟ್ಟಿಗೆಯಿಂದ ಹೊಡೆದು ಒತ್ತಾಯ ಪೂರ್ವಕವಾಗಿ ಕಪಾಟಿನ ಕೀಲಿ ಕೈ ಕಿತ್ತುಕೊಂಡು 177ಗ್ರಾಂ ಬಂಗಾರದ ಆಭರಣ ಮತ್ತು 80 ಗ್ರಾಂ ಬೆಳ್ಳಿ ಆಭರಣ 1200 ನಗದು ತೆಗೆದುಕೊಂಡು 2 ಮೊಬೈಲ್ಗಳನ್ನು ಕಿತ್ತುಕೊಂಡು ಶಾಸ್ತ್ರಿಯವರ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದರು. ಸಣ್ಣ ನೀರಾವರಿ ಇಲಾಖೆ ಅಟೆಂಡರ್ ಮನೆಯನ್ನು ಒಡೆದು ಕಪಾಟಿನಲ್ಲಿದ್ದ 20 ಗ್ರಾಂ ಬಂಗಾರದ ಆಭರಣ, 400 ಗ್ರಾಂ ಬೆಳ್ಳಿ ದೀಪ ಮತ್ತು 20 ಸಾವಿರ ನಗದು ಕದ್ದಿದ್ದರು. ಜುಲೈ 6ರಂದು ಮಧ್ಯರಾತ್ರಿ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ನೋಡಿ ಕೂಗಾಡಿದ ವೃದ್ದನ ತಲೆಗೆ ಕಲ್ಲಿನಿಂದ ಹೊಡೆದು ಓಡಿಹೋಗುತ್ತಿದ್ದಾಗ ಕರ್ತವ್ಯದ ಮೇಲಿದ್ದ ಪೋಲಿಸ ಸಿಬ್ಬಂದಿ ಅಶೋಕ ಅವರ ಮೇಲೂ ಈ ಕಳ್ಳರ ತಂಡ ಹಲ್ಲೆ ನಡೆಸಿತ್ತು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ:- ಹಳಿಯಾಳ ಸಿ.ಪಿ.ಐ ಸುಂದ್ರೇಶ ಹೊಳೆಣ್ಣವರ, ಪಿ.ಎಸ್.ಐ ಆನಂದ ಮೂರ್ತಿ.ಸಿ., ಪಿ.ಎಸ್.ಐ ಪುಟ್ಟೇಗೌಡಾ ಎಸ್.ಎನ್., ಎ.ಎಸ್.ಐ ರವರಾದ ಎ.ಡಿ.ಪಾವಸ್ಕರ, ಪರಮೇಶ್ವರಪ್ಪಾ ಶೇಟ್ಸನಧಿ, ಬಿ.ವಿ.ಹೆಗಡೆ, ಮುಳೆ, ಪಾಠನಕರ, ಹಾಗೂ ಸಿಬ್ಬಂದಿಯವರಾದ ಅಶೋಕ ಹುಬ್ಬಳ್ಳಿ, ಪಿ.ಎಮ್.ಸೋಲ್ಲಾಪೂರಿ, ಗೋವಿಂದ ಉಪ್ಪಾರ, ಬಸವರಾಜ ವಾಲಿಶೆಟ್ಟರ, ಸಂಜು ಅಣ್ಣಿಕೇರಿ, ಜಗದೀಶ ಕುಂಬಾರ, ನಿಂಗಪ್ಪಾ ಬಳ್ಳಾರಿ, ನಿಂಗಪ್ಪಾ ಕುಂಟಿಮೆಂಟಿ, ಶ್ರೀಶೈಲ ಮಂಗಾನವರ, ಅರವಿಂದ ಭಜಂತ್ರಿ ಹಾಗೂ ಗೃಹ ರಕ್ಷಕ ಸಿಬ್ಬಂದಿ ರವಿ ಇತರರು ಭಾಗವಹಿಸಿದ್ದರು.
Leave a Comment