ಹಳಿಯಾಳ :- ಗುತ್ತಿಗೆದಾರರು ಹಾಗೂ ನಿಮ್ಮ ನಡುವೇ ಅಡಜಸ್ಟಮೆಂಟ್ (ಹೊಂದಾಣಿಕೆ) ಇದೆಯೇ ?, ಕಾಮಗಾರಿ ನಡೆಸುವಾಗ ತಾವು ಏನು ಮಾಡುತ್ತಿರಾ ? ಹೀಗೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪುರಸಭೆ ಕಿರಿಯ ಅಭಿಯಂತರ ಹರೀಶ ಗೌಡಾ ಅವರನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ಜರುಗಿತು. ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಉಕ ಜಿಲ್ಲಾ ವಿಪ ಸದಸ್ಯ ಘೋಟ್ನೇಕರ ಪಟ್ಟಣದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ ಕೆಂಡಾಮಂಡಲರಾಗಿ, ಕಾಂಕ್ರೀಟ್ ರಸ್ತೆಗಳು, ಗಟಾರಗಳು 2ವರ್ಷಗಳಲ್ಲಿ ಹಾಳಾಗುತ್ತಿದ್ದು ಯಾವ ರೀತಿಯ ಕಾಮಗಾರಿ ಪಟ್ಟಣದಲ್ಲಿ ನಡೆಯುತ್ತಿದೆ ಎಂದು ಇಂಜೀನಿಯರ್ ಹರೀಶ, ಮುಖ್ಯಾಧಿಕಾರಿ ಕೇಶವ ಚೌಗಲೆ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿ(ಬ್ಲಾಕ್ ಲಿಸ್ಟ್)ಗೆ ಸೇರಿಸುವಂತೆ ಹಾಗೂ ಹೊರಗಿನ ಜಿಲ್ಲೆಗಳ ಗುತ್ತಿಗೆದಾರರಿಗೆ ಗುತ್ತಿಗೆಯನ್ನು ನೀಡದಂತೆಯೂ ಮುಖ್ಯಾಧಿಕಾರಿಗೆ ಘೊಟ್ನೇಕರ ಸೂಚಿಸಿದರು. ಟೆಂಡರ್ಗಳಿಗೆ ಅತ್ಯಂತ ಕಡಿಮೆ(ಬಿಲೊವ)ದರ ಹಾಕಿ ಅದ್ಹೇಗೆ ಕಾಮಗಾರಿ ನಡೆಸುತ್ತಾರೇ? ಎಂದು ಕೂಡ ಪ್ರಶ್ನೀಸಿ ಕಾಮಗಾರಿ ಗುಣಮಟ್ಟದ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ಇನ್ನೂ ಪುರಸಭೆ ಆಶ್ರಯ ವಿಭಾಗ ಹಾಗೂ ಎಸ್ಸಿ ಎಸ್ಟಿ ವಿಭಾಗದಲ್ಲಿ ಫಲಾನುಭವಿಗಳು, ಅರ್ಜಿದಾರರಿಂದ ಹಣ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನಲಾದ ಮೂವರು ಅಧಿಕಾರಿಗಳ ವಿರುದ್ದ ಸಭೆಯಲ್ಲಿ ತೀವೃ ಅಸಮಾಧಾನ ವ್ಯಕ್ತವಾಗಿ ಅವರನ್ನು ಬೇರೆಡೆ ವರ್ಗಾಯಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಯಿತು. ಹಿರಿಯ ಸದಸ್ಯ ಸುರೇಶ ತಳವಾರ ಮಾತನಾಡಿ ಗುತ್ತಿಗೆದಾರ ಅಫ್ಜಲ್ ಮುಗದ ನಡೆಸಿದ ಅನೇಕ ಕಾಮಗಾರಿಗಳು ತೀರ ಕಳಪೆ ಮಟ್ಟದ್ದಾಗಿರುವ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದರು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮುಂದಿನ ಸಭೆಗೆ ಜಿಲ್ಲಾಧಿಕಾರಿಗಳನ್ನು ಕರೆಸುವಂತೆ ಆಗ್ರಹಿಸಿದರು. ಆಡಳಿತ ಮಂಡಳಿ ಸದಸ್ಯ ಸತ್ಯಜೀತ ಗಿರಿ ಮಾತನಾಡಿ ಕಳಪೆ, ಗುಣಮಟ್ಟದ್ದಲ್ಲದ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ಸುಮಾರು 50ಕ್ಕೂ ಹೆಚ್ಚು ಸಭೆಗಳಲ್ಲಿ ಪ್ರಸ್ತಾಪವಾಗಿದೆ. ಆದರೇ ಪುರಸಭೆ ಅಧಿಕಾರಿಗಳು ಮಾತ್ರ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡದೆ ಯಾವುದೇ ಕ್ರಮ ಕೈಗೊಳ್ಳದೆ ಮತ್ತೇ ಅದೇ ಗುತ್ತಿಗೆದಾರರಿಗೆ ಕಾಮಗಾರಿಗೆ ಅವಕಾಶ ಮಾಡಿಕೊಡುತ್ತಿರುವುದು ಸಂದೇಹಕ್ಕೆ ಕಾರಣವಾಗಿದ್ದು ಅಧಿಕಾರಿಗಳು ನಿಷ್ಕ್ರೀಯರಾಗಿದ್ದಾರೆಂದು ಆರೋಪಿಸಿದರು. ಸಭೆಯಲ್ಲಿ ಸುಮಾರು 1ಕೋಟಿ 50 ಲಕ್ಷಕ್ಕೂ ಅಧಿಕ ಮೊತ್ತದ 8 ಕಾಮಗಾರಿಗಳ ಟೆಂಡರ್ ಅನುಮೋದನೆ ಬಗ್ಗೆ ಚರ್ಚೆ ನಡೆದು ಬಹುತೇಕ ಟೆಂಡರ್ ರದ್ದು ಪಡಿಸುವಂತೆ ಸದಸ್ಯರು ಒಕ್ಕೊರಲಿನಿಂದ ಠರಾಯಿಸಿದರು. ವಿರೋಧ ಪಕ್ಷದ ನಾಯಕ ಶ್ರೀಕಾಂತ ಹೂಲಿ ಮಾತನಾಡಿ ಪಟ್ಟಣದ ವನಶ್ರೀ ವೃತ್ತದಿಂದ ಕಿಲ್ಲೆಯ ಕೊನೆಯ ಜನವಸತಿ ಪ್ರದೇಶದವರೆಗೆ ಇರುವ ಲೋಕೊಪಯೋಗಿ ಇಲಾಖೆ ಅಧೀನದ ರಸ್ತೆಯನ್ನು ಪುರಸಭೆಯ ವ್ಯಾಪ್ತಿಗೆ ಒಳಪಡಿಸಲು ಠರಾಯಿಸುವಂತೆ ಹೇಳಿದಾಗ ಸದಸ್ಯರು ಬೆಂಬಲ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅರುಣ ಬೋಬಾಟಿ, ಸದಸ್ಯರಾದ ಶ್ರೀದೇವಿ ಯಡೋಗಿ, ಸುಬಾನಿ ಹುಬ್ಬಳ್ಳಿ, ಮಾಲಾ ಬ್ರಗಾಂಜಾ, ಪ್ರೇಮಾ ತೊರಣಗಟ್ಟಿ ಇತರರು ಇದ್ದರು.
Leave a Comment