ಹಳಿಯಾಳ:- ಕಳೆದ ವರ್ಷದ ಪ್ರತಿ ಟನ್ ಕಬ್ಬಿನ ಬಾಕಿ ಬಿಲ್ 305ರೂ ರೈತರಿಗೆ ಪಾವತಿಸುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಹಳಿಯಾಳ ಕಬ್ಬು ಬೆಳೆಗಾರರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 7ನೇ ದಿನ ಪೂರೈಸಿದ್ದು, ಭಾನುವಾರ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ ಧರಣಿಯಲ್ಲಿ ಪಾಲ್ಗೊಂಡು ಕಾರ್ಖಾನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣ 305ರೂ ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಬಾಕಿ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದೆ. ಎಂದು ಆರೋಪಿಸಿ ಕಾರ್ಖಾನೆಯ ಮುಖ್ಯ ಗೇಟಿನ ಎದುರು ದಿ.6ರಿಂದ ಪ್ರಾರಂಭವಾಗಿರುವ ಧರಣಿ ಸತ್ಯಾಗ್ರಹ ಸೋಮವಾರ 8ನೇ ದಿನಕ್ಕೆ ಪಾದಾರ್ಪಣೆ ಮಾಡಲಿದೆ.
ಹಳಿಯಾಳ ಕಬ್ಬು ಬೆಳೆಗಾರ ಸಂಘದವರ ನೇತೃತ್ವದಲ್ಲಿ ಕಾರ್ಖಾನೆ ವ್ಯಾಪ್ತಿಯ ಧಾರವಾಡ, ಕಿತ್ತೂರು ಕಲಘಟಗಿ, ಮುಂಡಗೋಡ, ದಾಂಡೇಲಿ, ಹಳಿಯಾಳ ಹಾಗೂ ಅಳ್ನಾವರ ಭಾಗದ ರೈತರು ಪ್ರತಿದಿನ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ರವಿವಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ರಾಜ್ಯದ ರೈತರ ಪರವಾಗಿ ಬೆಂಬಲ ಸೂಚಿಸುತ್ತಿರುವುದಾಗಿ ಹೇಳಿದರು. ಅಲ್ಲದೇ ಹಳಿಯಾಳ ಭಾಗದ ಕಬ್ಬು ಬೆಳೆಗಾರರ ಸಮಸ್ಯೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಕ್ಕರೆ ಸಚಿವ ಕೆಜೆ ಜಾರ್ಜ ಅವರ ಬಳಿ ಚರ್ಚಿಸಲಾಗಿದೆ ಎಂದ ಅವರು ಚುನಾವಣೆ ಸಂದರ್ಭದಲ್ಲಿ ಕಬ್ಬು ಬೆಳೆಗಾರರಿಗೆ 305ರೂ. ನೀಡಲಾಗುತ್ತದೆ ಎಂದಿದ್ದ ಕಾರ್ಖಾನೆಯವರು ಇಂದು ಹಣ ನೀಡಲಾಗುವುದಿಲ್ಲ ಎಂಬ ನಿಲುವಿಗೆ ಬಂದಿರುವುದು ದುರ್ದೈವದ ಸಂಗತಿ. ದೇಶದ ಬೆನ್ನೆಲುಬಾಗಿರುವ ರೈತನ ಸಮಸ್ಯೆಯನ್ನು ಕಾರ್ಖಾನೆ ಗಮನಿಸುತ್ತಿಲ್ಲ ಬದಲಾಗಿ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಕಳೆದ 7ದಿನಗಳಿಂದ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ತಾಲೂಕಾಡಳಿತ ಅಥವಾ ಜಿಲ್ಲಾಡಳಿತವಾಗಲಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸುವ ಸೌಜನ್ಯ ತೊರದೆ ಇರುವುದು ಖಂಡನೀಯವಾಗಿದೆ ಎಂದರು.
ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಮಾತನಾಡಿ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ, ಕಾರ್ಖಾನೆ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸ್ಪಂದಿಸುತ್ತಿಲ್ಲ. ರೈತರು ತಾಳ್ಮೆ ಕಳೆದುಕೊಂಡರೇ ಮುಂದೆ ಊಗ್ರ ಹೋರಾಟ ಕಾರ್ಖಾನೆ ಎದುರಿಸಬೇಕಾಗುತ್ತದೆ. ಅಲ್ಲದೇ ರೈತರ ಬಾಕಿ ಹಣ ಪಾವತಿಸದಿದ್ದರೇ, ಕಾರ್ಖಾನೆಯಲ್ಲಿನ ಸಕ್ಕರೆ ಮೂಟೆಗಳನ್ನು ಜಪ್ತಿ ಮಾಡಿಕೊಳ್ಳಲು ರೈತರು ಹಿಂದೆಟು ಹಾಕುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ತಾಲೂಕಾಧ್ಯಕ್ಷ ಕಾಜಗಾರ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಮ್ವಿ ಘಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಜಿ.ಆರ್.ಪಾಟಿಲ್, ಮಂಜುಳಾ ಗೌಡಾ, ಯುಕೆ ಬೋಬಾಟಿ,ಶಿವಾಜಿ ಪಾಟಿಲ, ಅನಂತ ಘೊಟ್ನೆಕರ, ನಂದಾ ಕೊರ್ವೆಕರ, ಸಾತುರಿ ಗೊಡಿಮನಿ, ಮುಂಡಗೋಡದ ಬಸವರಾಜ ಅಂಗಡಿ ಇತರರು ಇದ್ದರು.
Leave a Comment