ಹಳಿಯಾಳ : ಹಾವು ಸರೀಸ್ರಪ ಮೊಟ್ಟೆ ಇಡುವ ಜೀವಿ. ಅದು ಹಾಲನ್ನು ಕುಡಿಯುವುದಿಲ್ಲ. ಕುಡಿದರೇ ಅದು ಸತ್ತು ಹೋಗುತ್ತದೆ. ಈ ವಿಜ್ಞಾನದ ಸತ್ಯವನ್ನರಿತು ಅಪ್ಯಾಯನ ಪ್ರಸಾದವಾದ ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ ಎಂದು ಧಾರವಾಡ ಬಸವಕೇಂದ್ರದ ಬಸವಂತ ತೋಟದ ಕರೆ ನೀಡಿದರು.
ಅವರು ಸ್ಥಳೀಯ ಬಸವಕೇಂದ್ರವು ತೇರಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಬಸವ ಪಂಚಮಿ ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ನಮ್ಮ ಹಿರಿಯರು ಹಾಗೆ ಮಾಡುತ್ತಿದ್ದರೂ ಅದಕ್ಕೇ ನಾನೂ ಹಾಗೆಯೇ ಮಾಡುವೇವು ಎಂದೆನ್ನುವುದಕ್ಕಿಂತ ಅವರು ಯಾಕೆ ಮಾಡುತ್ತಿದ್ದರೆಂದರಿತು ಹಬ್ಬಗಳನ್ನು ಆಚರಿಸುವುದು ಉತ್ತಮ. ಹಾವು ಇಲಿ ಕಪ್ಪೆಗಳನ್ನು ತಿನ್ನುವ ಪ್ರಾಣಿ. ಇಲಿಗಳನ್ನು ತಿಂದು ರೈತನ ಕಾಳು ಕಡಿಗಳನ್ನು ರಕ್ಷಿಸುವ ಹಾವೂ ಸಹ ರೈತನ ಮಿತ್ರನೇ ಆಗಿದೆ ಎಂದ ಅವರು ಬಸವಣ್ಣನವರ “ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ…’’ ವಚನವನ್ನು ವಿಶ್ಲೇಷಿಸಿ ಕಲ್ಲಿನ ಹಾವಿಗೆ ಹಾಲು ಎರೆಯದೇ ದಿಟ ನಾಗರವನ್ನು ಕೊಲ್ಲದಿರಿ. ಹಸಿವಿನಿಂದ ಬಂದವರಿಗೆ ತುತ್ತು ಅನ್ನ ನೀಡಿ ಉಣ್ಣದ ಮೂರ್ತಿಗಳಿಗೆ ಬೋನವ ಹಿಡಿಯುವುದನ್ನು ಬಿಡಿರಿ ಎಂದು ಮಾರ್ಮಿಕವಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಬಸವಕೇಂದ್ರ ಅಧ್ಯಕ್ಷರಾದ ಚಂದ್ರಕಾಂತ ಅಂಗಡಿ ಮಾತನಾಡಿ ಒಂದೊಂದು ಮನೆಯಲ್ಲಿ ಒಬ್ಬೊಬ್ಬರು ಅರ್ಧಲೋಟ ಹಾಲು ಚೆಲ್ಲಿದರೂ ಇಡೀ ದೇಶದ ಜನಸಂಖ್ಯೆ ದೃಷ್ಟಿಯಲ್ಲಿ ಕೋಟಿಗಟ್ಟಲೆ ಮೌಲ್ಯದ ಲಕ್ಷಾನುಗಟ್ಟಲೇ ಲೀಟರ್ ಹಾಲು ಪಂಚಮಿಯ ಒಂದೆ ದಿನದಲ್ಲಿ ಮಣ್ಣು ಪಾಲಾಗುತ್ತದೆ. ದೇಶದಲ್ಲಿ ಎಷ್ಟೋ ಜನ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಸುಮಾರು 350ಕ್ಕೂ ಹೆಚ್ಚು ಮಕ್ಕಳು ಪರಸ್ಪರ ಹಾಲು ಹಂಚಿ ಕುಡಿದು ನಾಗಪಂಚಮಿಯನ್ನು ವಿಶೀಷ್ಠವಾಗಿ ಆಚರಿಸಿದರು.
ವೇದಿಕೆಯ ಮೇಲೆ ಬಸವಕೇಂದ್ರದ ಉಪಾಧ್ಯಕ್ಷ ರಾಮನಿಂಗ ಸವದತ್ತಿ, ಶಾಲಾ ಮುಖ್ಯಾಧ್ಯಾಪಕ ಎಸ್. ಜಿ. ಸನದಿ,ಸುಮಂಗಲಾ ಅಂಗಡಿ, ಅರುಣ ಕಕ್ಕೇರಿ, ಮಹಾದೇವಿ ನೆಗಿನಹಾಳ, ಬಸವರಾಜ ಗಾಣಿಗೇರ, ಶಿಕ್ಷಕರಾದ ಜಿ.ಎಸ್. ಹೆಗಡೆ, ಪ್ರಕಾಶ ಅಂಗಡಿ, ಗಿರೀಶ ನೆಗಿನಹಾಳ, ತರುಣ ಗಾಣಿಗೇರ ಇದ್ದರು.
Leave a Comment