ಹೊನ್ನಾವರ :ಪ್ರತಿಯೊಬ್ಬ ಪ್ರಜೆ ಸಬಲನಾದರೆ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳಿಸಬಹುದು’ ಎಂದು ವೈದ್ಯ ಡಾ.ಜೋರ್ಸನ್ ಫರ್ನಾಂಡಿಸ್ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ ಮತ್ತು ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಜ್ಞಾನ,ಕೌಶಲ್ಯ,ಕರ್ತವ್ಯದಲ್ಲಿ ಶ್ರದ್ಧೆ ಮೊದಲಾದ ಗುಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ಉದ್ದೀಪನಗೊಳಿಸುವ ಮೂಲಕ ವ್ಯಕ್ತಿಯನ್ನು ಪ್ರಬಲನನ್ನಾಗಿ ಮಾಡಬಹುದು’ ಎಂದು ಅವರು ಹೇಳಿದರು.
“ತಪ್ಪುಗಳಿಂದ ಪಾಠ ಕಲಿಯುವುದು ಶಿಕ್ಷಣ.ಹಿಂಸೆ,ಅತ್ಯಾಚಾರ ಮೊದಲಾದ ಸಮಾಜದ್ರೋಹಿ ಚಟುವಟಿಕೆಗಳನ್ನು ಶಿಕ್ಷಿತರು ಮಾಡಿದರೆ ಅವರು ಕ್ಷಮಾರ್ಹರಲ್ಲ.ಸಾಮಾಜಿಕ ಜಾಲತಾಣಗಳು,ಟಿವಿ ಧಾರವಾಹಿಗಳು ಮೊದಲಾದ ಸಮೂಹ ಮಾಧ್ಯಮಗಳು ಸಮಾಜ ತಪ್ಪು ದಾರಿಯಲ್ಲಿ ಸಾಗುವಲ್ಲಿ ತಮ್ಮ ಕೊಡುಗೆ ನೀಡಿವೆ.ಪಾಲಕರ ನಡವಳಿಕೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಮುಗ್ಧ ಮನಸ್ಸಿನಲ್ಲಿ ಅಮೂಲ್ಯ ಆಲೋಚನೆಗಳನ್ನು ಬಿತ್ತಿ ಅದನ್ನು ಸಮೃದ್ಧವಾಗಿಸಬಹುದು ಅಥವಾ ಕೆಟ್ಟ ಸಂಕೇತಗಳೊಂದಿಗೆ ಅದನ್ನು ಮಲಿನಗೊಳಿಸಬಹುದು’ ಎಂದು ವ್ಯಕ್ತಿತ್ವ ವಿಕಸನದ ರೀತಿಯನ್ನು ಅವರು ವಿವರಿಸಿದರು.
ಉದ್ಘಾಟನೆ ನೆರವೇರಿಸಿದ ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಮಾತನಾಡಿ,”ದೇಶದ ರಾಜಕೀಯ ವಲಯದಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅಗತ್ಯ.ವಿದ್ಯಾರ್ಥಿಗಳಲ್ಲಿ ಇತಿಹಾಸ,ರಾಜಕೀಯ ಪ್ರಜ್ಞೆ ಮೂಡಿಸುವ ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕ ವಿವೇಕಾನಂದ ನಾಯ್ಕ ಮಾತನಾಡಿ,”ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ವಿಜಯಲಕ್ಷ್ಮೀ ನಾಯ್ಕ ಮಾತನಾಡಿ,”ವಿದ್ಯಾರ್ಥಿಗಳು ಶಿಸ್ತು,ಸ್ವಚ್ಛತೆ ಹಾಗೂ ಸಮಯಪಾಲನೆಗೆ ಮಹತ್ವ ಕೊಡಬೇಕು’ ಎಂದು ಹೇಳಿದರು.
ಡಾ.ರೇಣುಕಾದೇವಿ ಗೋಳಿಕಟ್ಟೆ ಉಪಸ್ಥಿತರಿದ್ದರು.ಸಂಗೀತಾ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು.ವಿದ್ಯಾರ್ಥಿ ಕಾರ್ಯದರ್ಶಿ ನಿಖಿಲೇಶ್ ವಾಳ್ಕೆ ಸ್ವಾಗತಿಸಿದರು.ನಿಖಿತಾ ನಾಯ್ಕ ಅತಿಥಿ ಪರಿಚಯ ಮಾಡಿದರು.ಡಾ.ಎಂ.ಆರ್.ನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು.ಸಚಿನ್ ಭಟ್ಟ,ಭರತ್ ನಾಯ್ಕ ನಿರೂಪಿಸಿದರು.ಕಾವ್ಯಾ ಮೇಸ್ತ ವಂದಿಸಿದರು.
ಶ್ರೀರಾಮ್ ಅವರಿಂದ ನಡೆದ ಜಾದೂ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.
Leave a Comment