ಹಳಿಯಾಳ : ಜನ ಸಂಚಾರವಿಲ್ಲದ ಪ್ರದೇಶಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ ಅವರನ್ನು ಹಿಂಬಾಲಿಸಿ ಅವರಿಗೆ ಚಾಕು ತೋರಿಸಿ, ಅವರು ಧರಿಸುತ್ತಿದ್ದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಓರ್ವ ಯುವಕನನ್ನು ಹಳಿಯಾಳ ಪೋಲಿಸರು ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ನ್ನು ವಶಕ್ಕೆ ಪಡೆದಿದ್ದಾರೆ.
ನೆರೆಯ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅರೇಬಸವನಕೊಪ್ಪ ಗ್ರಾಮದ ಗಾರೆ ಕೆಲಸ ಮಾಡುತ್ತಿದ್ದ ಯುವಕ ಸುನೀಲ್ ವಿಠ್ಠಲ್ ದುಂಡಸಿ ಬಂಧಿತ ಸರಗಳ್ಳನಾಗಿದ್ದಾನೆ.
ಇತನಿಗೆ ಹಳಿಯಾಳ ಪೋಲಿಸರು ಇಲ್ಲಿಯ ಶಿವಾಜಿ ಕಾಲೇಜಿನ ಎದುರು ಬೈಕ್ ಸಮೇತ ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಆ 11 ರಂದು ಪಟ್ಟಣದ ಅಂಚಿನಲ್ಲಿರುವ ಗುತ್ತಿಬೈಲ್ ನಿವಾಸಿ ನಜೀಮಾ ಶಂಮಶುದ್ದೀನ್ ನಾಯಕ ಎಂಬ ಮಹಿಳೆಯು ಮಧ್ಯಾಹ್ನದ ಸಮಯದಲ್ಲಿ ತನ್ನ ಮಕ್ಕಳನ್ನು ಕರೆದುಕೊಂಡು ಒಂಟಿಯಾಗಿ ಮನೆಗೆ ಮರಳುವಾಗ ಬೈಕ್ನಲ್ಲಿ ಬಂದ ಆರೋಪಿಯು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕೊರಳಲ್ಲಿ ಇದ್ದ ಚಿನ್ನ ಮಾಂಗಲ್ಯವನ್ನು ನೀಡುವಂತೆ ಚಾಕು ತೋರಿಸಿ ಬೆದರಿಕೆಯನ್ನು ಹಾಕಿದಾಗ, ಮಹಿಳೆಯು ಚಿರಾಟ ನಡೆಸಿದಾಗ ಅಲ್ಲಿಂದ ಬೈಕ್ ಸಮೇತ ಪರಾರಿಯಾಗಿದ್ದ, ಇಲ್ಲಿಯ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು.
ದೂರನ್ನು ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದ ಪೋಲಿಸರು ಸಿಪಿಐ ಸುಂದ್ರೇಶ್ ಹೊಳೆಣ್ಣವರ, ಎಎಸ್ಐ ಆನಂದ ಪಾವಸ್ಕರ, ಅಶೋಕ ಹುಬ್ಬಳ್ಳಿ, ಶಂಕರಲಿಂಗ ಕ್ಷತ್ರೀಯ, ಪರಶುರಾಮ ಸೊಲ್ಲಾಪುರಿ, ನಿಂಗಪ್ಪಾ ಬಳ್ಳಾರಿ, ಬಸವರಾಜ ಚನ್ನಪ್ಪಾಗೋಳ, ಗುರಪ್ಪಾ ಬಿಷ್ಠಪ್ಪನ್ನವರ, ದೇವಿದಾಸ ಉದ್ದಂಡಿ, ಪರಶುರಾಮ ನಾಗರಾಳ, ಪ್ರಶಾಂತ ಮತ್ತು ವಾಹನ ಚಾಲಕ ವೆಂಕಟೇಶ ಕಾರ್ಯಾಚರಣೆ ನಡೆಸಿ ಅಂತಿಮವಾಗಿ ಸರಗಳ್ಳ ಆರೋಪಿಯನ್ನು ಬೈಕ್ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Leave a Comment