ಹಳಿಯಾಳ: ರಾಜ್ಯದ ಪಟ್ಟಣ ಹಾಗೂ ನಗರ ಪ್ರದೇಶಗಳ ಸರ್ವತೋಮುಖ ಹಾಗೂ ರಚನಾತ್ಮಕ ಅಭಿವೃದ್ಧಿಗಾಗಿ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಆ.31ರಂದು ರಾಜ್ಯದ 102 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 3 ಮಹಾನಗರ ಪಾಲಿಕೆಗಳಿಗೆ ನಡೆಯಲಿರುವ ಚುನಾವಣೆ ಅಭಿವೃದ್ದಿ ದೃಷ್ಠಿಯಿಂದ ಮಹತ್ವ ಪಡೆದಿದೆ.
“ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ಮತ್ತು ಸರ್ವತೋಮುಖ ವಿಕಾಸದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಪಕ್ಷವು ಎಲ್ಲ ಜನಾಂಗಗಳನ್ನೂ ಉದಾರವಾದ ದೃಷ್ಟಿಯಿಂದ ನೋಡುತ್ತದಲ್ಲದೆ, ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ,’’ ಎಂದಿರುವ ಸಚಿವರು, ಸ್ಥಳೀಯ ಮಟ್ಟದಲ್ಲೇ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಇದರಿಂದಾಗಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ ಎನ್ನುವುದು ಕಾಂಗ್ರೆಸ್ಸಿನ ನಂಬಿಕೆಯಾಗಿದೆ, ಸ್ಥಳೀಯ ಸಂಸ್ಥೆಗಳು ಸುಗಮ ಮತ್ತು ವಿಶ್ವಾಸಾರ್ಹವಾಗಿ ನಡೆಯಬೇಕು. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಎಲ್ಲೆಡೆ ಕಾಂಗ್ರೇಸ್ ಪಕ್ಷವನ್ನು ಆಡಳಿತಕ್ಕೆ ತರುವಂತೆ ವಿನಂತಿಸಿದ್ದಾರೆ.
“ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯದ ಸರ್ವತೋಮುಖ ಏಳಿಗೆಯ ಜೊತೆಗೆ ನಗರ ಪ್ರದೇಶಗಳ ಅಭಿವೃಧ್ದಿಗಾಗಿ ಕೈಗೊಂಡ ಕಾರ್ಯಗಳನ್ನು ಅದರಲ್ಲೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಗೆ ಹಲವು ಮಹತ್ವ್ವದ ಯೋಜನೆಗಳನ್ನು ಮಂಜೂರು ಮಾಡಿರುವುದನ್ನು ಇವುಗಳ ಅನುಷ್ಠಾನಕ್ಕಾಗಿ ನೂರಾರು ಕೋಟಿ ರೂ.ಗಳ ಅನುದಾನವನ್ನು ಜಿಲ್ಲೆಗೆ ನೀಡಿರುವುದನ್ನು ಜಿಲ್ಲೆಯ ಜನ ಮರೆತಿಲ್ಲ’’ ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷವು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸದಾ ಆದ್ಯತೆ ನೀಡುತ್ತ ಬಂದಿದೆ. ಹೀಗಾಗಿ, ಜಿಲ್ಲೆಯಲ್ಲಿ ಸರ್ವಾಂಗೀಣ ಪ್ರಗತಿಯ ಹೊಸ ಹಾದಿಯೇ ನಿರ್ಮಾಣವಾಗಿದೆ. ಇದನ್ನು ಅಬಾಧಿತವಾಗಿ ಮುಂದುವರಿಸಿಕೊಂಡು ಹೋಗಲು ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’’ ಎಂದು ಕರೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ನಗರ,ಪುರ ಸಭೆ, ಪಟ್ಟಣ ಪಂಚಾಯತಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೊರಿರುವ ಸಚಿವ ಆರ್.ವಿ.ದೇಶಪಾಂಡೆ ದಿನೆ ದಿನೆ ಎಲ್ಲ ಹಂತದಲ್ಲಿ ಬೆಳೆಯುತ್ತಿರುವ ಹಳಿಯಾಳ ಪಟ್ಟಣವನ್ನು ಮಾದರಿ ಪಟ್ಟಣವಾಗಿ ಇನ್ನೂ ಅಭಿವೃದ್ದಿಪಡಿಸಲು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವಂತೆ ವಿನಂತಿಸಿದ್ದಾರೆ.
Leave a Comment