ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಕಳೆದ 31 ದಿನಗಳಿಂದ ಧರಣಿ ನಡೆಸುತ್ತಿರುವ ರೈತರು ಬುಧವಾರ ಹಳಿಯಾಳ ಬಂದ್ಗೆ ಕರೆ ನೀಡಿದ್ದು. ಸಾರ್ವಜನೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಹಳಿಯಾಳ ಕಬ್ಬು ಬೆಳೆಗಾರರ ಸಂಘದವರು ಈ ಕುರಿತು ಹಳಿಯಾಳ ಮಾಧ್ಯಮದವರಿಗೆ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ. 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಕಳೆದ 31 ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಕಾರ್ಖಾನೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಂದಿಸದೆ ಇರುವುದರಿಂದ ಅನಿವಾರ್ಯವಾಗಿ ದಿ.5 ರಂದು ಸಂಪೂರ್ಣ ಬಂದ್ಗೆ ಕರೆ ನೀಡಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ತಿಳಿಸಿದ್ದಾರೆ.
ಹಳಿಯಾಳ, ಕಲಘಟಗಿ, ಧಾರವಾಡ ತಾಲೂಕುಗಳ, ಅಳ್ನಾವರ ಮತ್ತು ಕಿತ್ತೂರಿನ ಎಲ್ಲ ರೈತ ಬಾಂಧವರು ಅವರವರ ಕ್ಷೇತ್ರಗಳಲ್ಲಿ ಬಂದ್ ಆಚರಿಸಲು ರೈತ ಬಾಂಧವರೆಲ್ಲರಿಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಿಳಿಸಲಾಗಿದೆ. ಅಲ್ಲದೇ ರೈತರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಬಂದ್ಗೆ ಎಲ್ಲ ಸಂಘ-ಸಂಸ್ಥೆಯವರು ಬೆಂಬಲಿಸಬೇಕಾಗಿಯೂ ವಿನಂತಿಸಿದ್ದಾರೆ.
ವಿಶೇಷವಾಗಿ ಹಳಿಯಾಳ ತಾಲೂಕಿನ ರೈತರು ದಿ.5 ಬುಧವಾರದಂದು ಪಟ್ಟಣದ ಮರಾಠಾ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಿ, ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ವನಶ್ರೀ ವೃತ್ತದಿಂದ ಶಿವಾಜಿ ವೃತ್ತಕ್ಕೆ (ತಹಶೀಲ್ದಾರ ಆಫೀಸಿನ ಎದುರಿಗೆ) ಬಂದು ರಸ್ತಾ ರೋಖೊ ನಡೆಸುವುದರ ಮೂಲಕ ಧರಣಿ ಸತ್ಯಾಗ್ರಹ ನಡೆಲಾಗುವುದು ಎಂದಿರುವ ಕಾಜಗಾರ ಇಲ್ಲಿ ತಹಶೀಲ್ದಾರ ಮುಖಾಂತರ ಜಿಲ್ಲಾಡಳಿತಕ್ಕೆ ಇನ್ನೊಮ್ಮೆ ಮನವಿ ಅರ್ಪಿಸಲಾಗುವುದು ಎಂದಿದ್ದಾರೆ.
ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಾರಿ ಘಾಡಿ, ಅಶೋಕ ಮೇಠಿ, ಗಿರಿಶ ಠೋಸುರ ಕೂಡ ಬಂದ್ನಲ್ಲಿ ಕಾರ್ಖಾನೆ ವ್ಯಾಪ್ತಿಯ ಸಾವಿರಾರು ರೈತರು ಭಾಗವಹಿಸಲಿದ್ದು ನ್ಯಾಯ ದೊರೆಯುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
Leave a Comment