ಹೊನ್ನಾವರ : ಪಾಕಿಸ್ತಾನದ ವಿರುದ್ಧ ಎರಡು ಯುದ್ಧದಲ್ಲಿ ಹೋರಾಡಿ ಗೆಲುವು ತಂದುಕೊಟ್ಟ ಸೈನಿಕ ಕುಟುಂಬದ ತ್ಯಾಗವನ್ನು ನಿರ್ಲಕ್ಷಿಸಿ ಚತುಷ್ಪಥ ಗುತ್ತಿಗೆ ಪಡೆದ ಐಆರ್(Iಬಿ (IRB) ಕಂಪನಿ ಆ ಮನೆಯಲ್ಲಿರುವ ಯೋಧ ದಿನಕರ ಹಬ್ಬು ಅವರ ಪತ್ನಿ ಮತ್ತು ಮಗನಿಗೆ ತಿಳಿಸದೆ ಕಂಪೌಂಡ್ ಒಳಗೆ ಗುರುತು ಮಾಡಿದೆ. ಭೂ ದಾಖಲೆಯಲ್ಲಿ ಅವರ ಹೆಸರಿದ್ದರೂ ನೋಟೀಸು ಮಾಡದೆ ಕಂಪೌಂಡ ಕೆಡವುದಾಗಿ ಹೇಳುತ್ತಿದೆ. ಕೇಂದ್ರ ಭೂಸಾರಿಗೆ ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ.
ಹಳದೀಪುರದ ರಾಷ್ಟ್ರೀಯ ಹೆದ್ದಾರಿಯ ಬದಿಗಿರುವ ವೈದ್ಯ ಕೃಷ್ಣದಾಸ ಹಬ್ಬು ಇವರ ಮಕ್ಕಳಾದ ಬಾಲಚಂದ್ರ 1955ರಲ್ಲಿ ವಾಯುದಳ ಸೇರಿ 36ವರ್ಷಸೇವೆ ಸಲ್ಲಿಸಿದ್ದರು. ಎರೋನೋಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹೊನರರಿ ಫ್ಲೈಯಿಂಗ್ ಆಫೀಸರಾಗಿ 1991ರಲ್ಲಿ ನಿವೃತ್ತರಾದರು. ಎರಡನೇಯವರಾದ ದಿನಕರ 1961ರಲ್ಲಿ ವಾಯುದಳ ಸೇರಿ 29ವರ್ಷ ಸೇವೆ ಸಲ್ಲಿಸಿ ಜೂನಿಯರ್ ವಾರಂಟ್ ಆಫೀಸರಾಗಿ ನಿವೃತ್ತರಾದರು. ಮೂರನೇಯವರು ಕಾಳಿದಾಸ 1963ರಲ್ಲಿ ವಾಯುದಳ ಸೇರಿ ಎಕೌಂಟ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಮೂವರು ಈ ಭಾಗದ ಇನ್ನೂ ಹಲವರಿಗೆ ದೇಶಸೇವೆಗೆ ಪ್ರೇರೇಪಿಸಿದರು. ಬಾಲಚಂದ್ರ ಮತ್ತು ದಿನಕರ ಸೈನ್ಯ ಸೇವೆಗೆ ನೀಡುವ ರಕ್ಷಾಮೆಡಲ್, ಸಂಗ್ರಾಮ್ ಮೆಡಲ್, ಸ್ವಾತಂತ್ರ್ಯೋತ್ಸವ ಮೆಡಲ್, ಸುಧೀರ್ಘ ಸೇವೆ, ಸಾಹಸಕ್ಕೆ ನೀಡುವ ಹಲವು ಪ್ರಶಸ್ತಿ ಪಡೆದಿದ್ದಾರೆ. ದಿನಕರ ಹಬ್ಬು 1965ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ಸಪ್ಟೆಂಬರ್ 3ರಿಂದ 17ರವರೆಗೆ ಮತ್ತು 1971ರಲ್ಲಿ ಡಿಸೆಂಬರ್ 4ರಿಂದ 20ರವರೆಗೆ ಪ್ಯಾರಾಟ್ರೂಪರ್ ಆಗಿ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ್ದರು ಎಂದು ಅಧಿಕೃತ ದಾಖಲೆ ಇದೆ.
ಈ ಕುಟುಂಬದ ಏಕೈಕ ಹಿರಿಯರಾದ ರತ್ನಾವತಿ ದಿನಕರ ಹಬ್ಬು ಇವರಿಗೆ 70ವರ್ಷ. ದೈಹಿಕ ಸಮಸ್ಯೆ ಇರುವ ಒಬ್ಬ ಮಗ ಕಂಪ್ಯೂಟರ್ ಇಟ್ಟುಕೊಂಡಿದ್ದಾನೆ. ಭೂಮಿ ರೈತರ ಪಾಲಾಗಿದೆ. ಹಿರಿಯರು ಕಟ್ಟಿದ, ಮೂವರು ಯೋಧರು ಹುಟ್ಟಿದ ಮನೆ ಮತ್ತು 10ಗುಂಟೆ ಹಿತ್ತಲು ಇವರ ಪಾಲಿಗಿದೆ. ತಮಗೆ ಯೋಗ್ಯವಾದ ಪರಿಹಾರ, ಪುನರ್ವಸತಿ ಮತ್ತು ಸಾಕಷ್ಟು ಅವಧಿ ಕೊಡಿ, ಅಲ್ಲಿಯವರೆಗೆ ನಮ್ಮ ಕಂಪೌಂಡ್ ಮುಟ್ಟಬೇಡಿ ಎಂದು ಅವರು ಹೇಳುತ್ತಿದ್ದಾರೆ. ದೇಶಕ್ಕಾಗಿ ಮೂವರು ಸೈನಿಕರನ್ನು ಕೊಟ್ಟ ಆ ಮನೆಯ ಹಿರಿಯರನ್ನು ಗೌರವಯುತವಾಗಿ ಮಾತನಾಡಿಸಿ, ಮನವೊಲಿಸಿ ಪರಿಹಾರಕೊಟ್ಟು ಹೊಸಸ್ಥಳದಲ್ಲಿ ಮನೆಕಟ್ಟಿಕೊಳ್ಳುವ ಅವಕಾಶ ಮಾಡಿಕೊಡದೆ ಏಕಾಏಕಿ ಕೆಡಗಲು ಬಂದಿರುವುದು ಸರಿಯಲ್ಲ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿಗೆ ಬಂದಾಗ ನಿರಾಶ್ರಿತರ ಸಭೆಗಿಂತ ಮೊದಲು ನಿವೃತ್ತ ಸೈನಿಕರೊಂದಿಗೆ ಮಾತನಾಡಿದ್ದರು. ಇವರು ನನ್ನ ಕುಟುಂಬದವರು ಎಂದು ಹೇಳಿದ್ದರು. ಈಗ ಅವರ ಕುಟುಂಬದ ಮಹಿಳೆಯೊಬ್ಬರ ಅರಣ್ಯ ರೋಧನವನ್ನು ಅವರು ಕೇಳಿಸಿಕೊಳ್ಳಬೇಕು, ಹಬ್ಬು ಕುಟುಂಬಕ್ಕೆ ನ್ಯಾಯ ಸಿಗಬೇಕು.
Leave a Comment