ಹೊನ್ನಾವರ :ರಕ್ತ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆನ್ನುವ ತಪ್ಪು ತಿಳುವಳಿಯಿಂದಾಗಿ ರಕ್ತದಾನಕ್ಕೆ ಯುವಕರು ಹಿಂದೇಟು ಹಾಕುವುದು ಕಂಡುಬರುತ್ತಿದೆ’ ಎಂದು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್ಡಿಎಂ ಪದವಿ ಕಾಲೇಜಿನ ಯುತ್ ರೆಡ್ ಕ್ರಾಸ್,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ,ಎನ್ಸಿಸಿ,ರೆಡ್ ರಿಬ್ಬನ್,ಎನ್ಎಸ್ಎಸ್ ಹಾಗೂ ಲಯನ್ಸ್ ಕ್ಲಬ್ ಇವುಗಳ ಆಶ್ರಯದಲ್ಲಿ ಬುಧವಾರ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದ್ದು ರಕ್ತ ದಾನ ಮಾಡುವುದರಿಂದ ದಾನಿಯ ಆರೋಗ್ಯ ಉತ್ತಮವಾಗುವ ಜೊತೆಗೆ ಮತ್ತೊಂದು ಜೀವಕ್ಕೆ ನೆರವಾದ ಸಂತೃಪ್ತಿ ದೊರಕುತ್ತದೆ’ ಎಂದು ಅವರು ಹೇಳಿದರು.
ಆಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಪಟಗಾರ ಮಾತನಾಡಿ,”ರಕ್ತ ದಾನ ಮಾಡುವುದು ಉತ್ತಮ ಮಾನವೀಯ ಮೌಲ್ಯಗಳಲ್ಲೊಂದಾಗಿದ್ದು ದೇವರ ಹುಂಡಿಗೆ ಹಣ ಹಾಕುವುದಕ್ಕಿಂತ ಶ್ರೇಷ್ಠ ತ್ಯಾಗವಾಗಿದೆ.ಯುವಕರಲ್ಲಿ ರಕ್ತದಾನ ಒಂದು ಹವ್ಯಾಸವಾದಲ್ಲಿ ಜಗತ್ತಿನ ಯಾರೊಬ್ಬರೂ ರಕ್ತದ ಕೊರತೆಯಿಂದ ಸಾಯುವ ಅನಿವಾರ್ಯತೆ ಉದ್ಭವವಾಗಲಾರದು’ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಸಾಳೆಹಿತ್ತಲ್ ಮಾತನಾಡಿ,”ನಾನು ಇಲ್ಲಿಯವರೆಗೆ 6 ಬಾರಿ ರಕ್ತದಾನ ಮಾಡಿದ್ದು ಪ್ರತಿ ಸಾರಿ ರಕ್ತದಾನ ಮಾಡಿದಾಗಲೂ ಸಾರ್ಥಕ ಭಾವನೆ ಉಂಟಾಗಿದೆ.ದೇಹದ ಮೇಲೆ ಯಾವುದೇ ದುಷ್ಪರಿಣಾಮ ಆಗಿಲ್ಲ.ಯುವಕರು ಸಾಮಾಜಿಕ ಹೊಣೆಗಾರಿಕೆ ತೋರಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮೀ ಎಂ.ನಾಯ್ಕ ಮಾತನಾಡಿ,”ಮೂಢನಂಬಿಕೆಗೆ ಕಿವಿಗೊಡದೆ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎನ್ಸಿಸಿ ಲೆಫ್ಟಿನೆಂಟ್ ಎನ್.ಜಿ.ಅನಂತಮೂರ್ತಿ,ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.
ಪ್ರೊ.ಎಂ.ಜಿ.ಹೆಗಡೆ ಸ್ವಾಗತಿಸಿದರು.ಪ್ರೊ.ಪ್ರಶಾಂತ ಮೂಡಲಮನೆ ನಿರೂಪಿಸಿದರು.ಪ್ರೊ.ಸುರೇಶ ಎಸ್.ವಂದಿಸಿದರು.
50 ವಿದ್ಯಾರ್ಥಿಗಳು,ಲಯನ್ಸ್ ಅಧ್ಯಕ್ಷ ರಾಜೇಶ ಸಾಳೆಹಿತ್ತಲ್,ಪ್ರೊ.ಸುರೇಶ ಎಸ್.ರಕ್ತದಾನ ಮಾಡಿದರು.ತಾಲೂಕಾ ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಶಿಬಿರದಲ್ಲಿ ಉಪಸ್ಥಿತರಿದ್ದರು.
Leave a Comment