ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಚತುಷ್ಪದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಜಾಗೃತ ಹೊನ್ನಾವರ ಸಂಘಟನೆಯೊಂದಿಗೆ ತಾಲೂಕಿನ ವಿವಿಧ ಸಂಘಟನೆಗಳು ಉಪವಿಭಾಗಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾರವರಿಗೆ ಸಂಘದ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ ಮನವಿ ನೀಡಿತು.
ಹಿರಿಯ ಅಧಿಕಾರಿಗಳ ಜೊತೆಗೆ ಭೇಟಿ ಮಾಡಿಸುವ ಭರವಸೆ ನೀಡಿದ ಉಪವಿಭಾಗಾಧಿಕಾರಿಗಳು ಪ.ಪಂ. ಸಭಾಭವನದಲ್ಲಿ ಜಿಲ್ಲಾ ಅಪರ ಅಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಬಿ. ಇಟನಾಳ ಸಭೆಯಲ್ಲಿ ಉಪಸ್ಥಿತರಿದ್ದ ಹೆದ್ದಾರಿ ಗುತ್ತಿಗೆದಾರ ಕಂಪನಿಯ ಸಿಬ್ಬಂಧಿಯ ಬಳಿ ಮಾಹಿತಿ ಕೇಳಲಾಗಿ ಹೆದ್ದಾರಿ ವಿಸ್ತರಣೆ ಮೊದಲಿನ 45 ಮೀ. ರಿಂದ 30 ಮೀ. ಇಳಿಸಿದ್ದರಿಂದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಖಚಿತವಿಲ್ಲ ಎಂದರು. ಈ ಕುರಿತು ನಾಗರಿಕರು ತೀವೃ ಹತಾಷೆಯನ್ನು ವ್ಯಕ್ತಪಡಿಸಿದರು.
ನಿತ್ಯವೂ ಪಟ್ಟಣಕ್ಕೆ ಬರುವ 5 ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು, ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರು, ಚಿಕಿತ್ಸೆಗೆ ಬರುವ ವಯೋವೃದ್ಧರು, ರೋಗಿಗಳು, ಹೆಂಗೆಳೆಯರು, ಈಗಲೂ ರಸ್ತೆ ದಾಟಲು ಪರದಾಡುತ್ತಿದ್ದಾರೆ. ಭವಿಷ್ಯದಲ್ಲಿ ಜನಸಂಖ್ಯೆ, ವಾಹನಸಂಖ್ಯೆ ಹೆಚ್ಚಳ ಆದ್ದಲ್ಲಿ ಸಮಸ್ಯೆ ಉಲ್ಭಣವಾಗುತ್ತದೆ. ಅಪಘಾತ ಸಂಖ್ಯೆ, ಸಾವು-ನೋವುಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಮಂಗಳೂರು-ಗೋವಾ, ಬೆಂಗಳೂರು-ಹೊನ್ನಾವರ ಭಾಗಗಳಿಂದ ಓಡಾಡುವ ವೇಗದ ವಾಹನಗಳಿಂದ ಪಟ್ಟಣಕ್ಕೆ ಜನಸಾಮಾನ್ಯರು ಪ್ರವೇಶಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಮೇಲ್ಸೇತುವೆಗೆ ಅವಕಾಶ ನೀಡಿ ಎಂದು ಸಂಘಟನಾಕಾರರು ವಿನಂತಿಸಿಕೊಂಡರು.
ಅಹವಾಲನ್ನು ಆಲಿಸಿದರ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಇನ್ನೊಮ್ಮೆ ಚರ್ಚಿಸಿ ವಿವರ ಮಾಹಿತಿಗಳನ್ನು ನೀಡಿ ಪ.ಪಂ. ಆವರಣದಲ್ಲಿ ರಸ್ತೆಯ ಅಗಲದ ಸ್ಪಷ್ಟ ಅಳತೆ ನಕಾಶೆ ಹಾಗೂ ಪರಿಹಾರದ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಟಿಸ್ ಬೋರ್ಡಿಗೆ ಅಂಟಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾ, ಗುತ್ತಿಗೆ ಕಂಪನಿಯ ಕುಲಕರ್ಣಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನವೀನ್, ತರಬೇತಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ವಿ.ಆರ್. ಗೌಡ ಉಪಸ್ಥಿತರಿದ್ದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ, ಲಾಯನ್ಸ್ ಕ್ಲಬ್ ಪ್ರಮುಖ ಜೀವೋತ್ತಮ ನಾಯಕ, ಕರ್ನಾಟಕ ರಕ್ಷಣಾ ವೇದಿಕೆಯ ಉದಯರಾಜ್ ಮೇಸ್ತ, ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಸತ್ಯಾ ಜಾವಗಲ್, ನಸ್ರುಲ್ಲಾ, ಶೇಖರ ವಗ್ಗಾರ, ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ, ಕಾರ್ಯದರ್ಶಿ ಸೂರಜ ನಾಯ್ಕ, ವಕೀಲರಾದ ಸಂಜು ಕಾಮತ, ಆಟೋ ಚಾಲಕರ ಸಂಘದ ಜೆ.ಎಸ್. ಡಿಸೋಜಾ, ಕಾರ್ಮಿಕ ಸಂಘಟನೆಯ ಕೇಶವ ತಾಂಡೇಲ್, ಶ್ರೀಕಾಂತ ಮೇಸ್ತ, ಮೀನುಗಾರ ಸಂಘಟನೆಯ ಗಣಪತಿ ತಾಂಡೇಲ್, ಛಾಯಾ ಗ್ರಾಹಕ ಸಂಘಟನೆಯ ಸುರೇಶ ಹೊನ್ನಾವರ, ಯುವ ಬ್ರಿಗೇಡನ ರಾಘು ಮೇಸ್ತ, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
Leave a Comment