ಹೊನ್ನಾವರ: ನಗರದ ಬಾಂದೇಹಳ್ಳದ ಪ್ರಕಾಶ ಸಾಂತೋಲಿನ್ ಡಿಸೋಜಾ ಎನ್ನುವವರ ಮನೆಯ ಬೀಗವನ್ನು ಹಗಲು ಹೊತ್ತಿನಲ್ಲಿ ಮುರಿದು ಮನೆಯಲ್ಲಿದ್ದ ಚಿನ್ನದ ಸರ ಮತ್ತು 35 ಸಾವಿರ ನಗದು ಹಣವನ್ನು ಕದ್ದೊಯ್ಯಲು ಪ್ರಯತ್ನಿಸಿದ ಹುಬ್ಬಳ್ಳಿಯ ವಿದ್ಯಾನಗರದ ಸಂಜಯ ದಿವಾಕರ ಜಿರಲಿ ಎಂಬಾತನಿಗೆ ಮೂರು ವರ್ಷ ಶಿಕ್ಷೆ 10 ಸಾವಿರ ದಂಡ ವಿಧಿಸಿ ಹೊನ್ನಾವರ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಎಂ.ವಿ. ಚೆನ್ನಕೇಶವ ರೆಡ್ಡಿ ತೀರ್ಪು ನೀಡಿದ್ದಾರೆ.
ಪ್ರಕರಣದ ವಿವರ: ಆರೋಪಿ ಸಂಜಯ ದಿವಾಕರ ಜಿರಲಿ ಇನ್ನಿಬ್ಬರು ಆರೋಪಿಗಳಾದ ಸಂಜು ಚಂದ್ರಶೇಖರ ಕಲ್ಲೋಡಿ ಮತ್ತು ಆನಂದ ನಾರಾಯಣ ನಾಯ್ಕ ಅಂಕೋಲಾ ಎಂಬವರ ಜೊತೆ ಸೇರಿ ಬಾಂದೇಹಳ್ಳದ ಮಾರ್ಥೋಮಾ ಶಾಲಾ ಶಿಕ್ಷಕಿಯೋರ್ವರ ಮನೆಯಿಂದ ದಿನಾಂಕ: 04-08-2014 ರಂದು ಮಧ್ಯಾಹ್ನ 1.30 ವೇಳೆಗೆ ಕಳ್ಳತನ ಮಾಡುತ್ತಿರುವಾಗ ಮನೆಯ ಯಜಮಾನ ಪ್ರಕಾಶ ಡಿಸೋಜಾ ಕೈಯಲ್ಲಿ ಸಿಕ್ಕಿಬಿದಿದ್ದರು. ಪ್ರಕಾಶ ಡಿಸೋಜಾ ಆರೋಪಿತರನ್ನು ಹಿಡಿಯಲು ಪ್ರಯತ್ನಪಟ್ಟಾಗ ಆರೋಪಿತರು ಓಡಿ ಹೋಗಲು ಪ್ರಯತ್ನಪಟ್ಟಿದ್ದರು. ಅವರಲ್ಲಿ ಓರ್ವ ಆರೋಪಿ ಸಿಕ್ಕಿಬಿದ್ದು ಉಳಿದವರು ತಲೆಮರೆಸಿ ಕೊಂಡಿದ್ದರು. ಮೂವರ ವಿರುದ್ಧವು ಪ್ರಕರಣ ದಾಖಲಾಗಿತ್ತು. ಇನ್ನೀರ್ವರ ವಿರುದ್ಧ ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಆರೋಪಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ದೂರುದಾರ ಪ್ರಕಾಶ ಡಿಸೋಜಾರಿಗೆ ಗಾಯ ಉಂಟಾಗಿತ್ತು. ಪ್ರಕರಣದ ಕುರಿತು ಎಮ್. ಮಂಜುನಾಥ ಗೌಡ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ ವಾದಿಸಿದ್ದರು.
Leave a Comment